ಜಾತ್ಯತೀತತೆ ಎಂದರೆ ಬದುಕಿ, ಬದುಕಲು ಬಿಡುವುದಾಗಿದೆ: ಮದ್ರಸಾ ಕಾಯ್ದೆ ಕುರಿತ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್
Update: 2024-10-23 10:55 GMT
ಹೊಸದಿಲ್ಲಿ: ಜಾತ್ಯಾತೀತತೆ ಎಂದರೆ ಬದುಕಿ, ಬದುಕಲು ಬಿಡುವುದಾಗಿದೆ ಎಂದು ಮದ್ರಸಾ ಕಾಯ್ದೆ ಕುರಿತ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಹೇಳಿದೆ.
ಉತ್ತರಪ್ರದೇಶದ ಮದ್ರಸಾ ಕಾಯ್ದೆ–2004 ಅಸಾಂವಿಧಾನಿಕ ಎಂಬ ಅಲಹಾಬಾದ್ ಹೈಕೋರ್ಟ್ ನ ಆದೇಶವನ್ನು ಪ್ರಶ್ನಿಸಿ, ಅಂಜುಂ ಖಾದ್ರಿ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು, ‘ಮದರಸಾದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕುʼ ಎಂದು ಹೇಳಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ‘ಹೈಕೋರ್ಟ್ ತೀರ್ಪು 26 ಲಕ್ಷ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ನೂರಾರು ಮಕ್ಕಳನ್ನು ಈಗ ಬಲವಂತವಾಗಿ ಹೊರಗೆ ಕಳುಹಿಸುವುದು ಜಾತ್ಯತೀತತೆ ಅಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪೀಠವು ‘ಜಾತ್ಯತೀತತೆ ಎಂದರೆ ಬದುಕುವುದು, ಬದುಕಲು ಬಿಡುವುದು’ ಎಂದಾಗಿದೆ ಎಂದು ಹೇಳಿದೆ.