ಭಾರತದಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ISI ನೊಂದಿಗೆ ಪಿತೂರಿ : ಗುಜರಾತ್ ಮೂಲದ ವ್ಯಕ್ತಿ ದೋಷಿ

Update: 2024-10-23 14:52 GMT
PC : ANI 

ಲಕ್ನೊ : ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಪಾಕಿಸ್ತಾನ ಮೂಲದ ಐಎಸ್ಐ ಏಜೆಂಟ್ ಗಳೊಂದಿಗೆ ಪಿತೂರಿ ನಡೆಸಿದ ಆರೋಪದ ಪ್ರಕರಣದಲ್ಲಿ ಗುಜರಾತ್ ನ ವ್ಯಕ್ತಿಯೊಬ್ಬನನ್ನು ವಿಶೇಷ ನ್ಯಾಯಾಲಯವು ದೋಷಿ ಎಂದು ಘೋಷಿಸಿದೆ ಎಂದು ಬುಧವಾರ ರಾಷ್ಟ್ರೀಯ ತನಿಖಾ ದಳ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಸಂಬಂಧ 2020ರಲ್ಲಿ ರಾಷ್ಟ್ರೀಯ ತನಿಖಾ ದಳ ದಾಖಲಿಸಿಕೊಂಡಿದ್ದ ಪ್ರಕರಣದಲ್ಲಿ ರಜಾಕ್ಭಾಯ್ ಕುಂಬಾರ್ ದೋಷಿಯೆಂದು ಘೋಷಿತವಾಗಿರುವ ಎರಡನೆ ಆರೋಪಿಯಾಗಿದ್ದಾನೆ ಎಂದು ಎನ್ಐಎ ಹೇಳಿದೆ.

ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳು ಹಾಗೂ ಯುಎಪಿಎ ಕಾಯ್ದೆಯಡಿ ಮಂಗಳವಾರ ಗರಿಷ್ಠ ಆರು ವರ್ಷಗಳವರೆಗೆ ಶಿಕ್ಷೆ ಪ್ರಕಟಿಸಿದ ವಿಶೇಷ ರಾಷ್ಟ್ರೀಯ ತನಿಖಾ ದಳ ನ್ಯಾಯಾಲಯವು, ಆರೋಪಿಗೆ ಕಠಿಣ ಸೆರೆವಾಸದ ಶಿಕ್ಷೆಯನ್ನು ವಿಧಿಸಿದೆ. ಈ ಎಲ್ಲ ಶಿಕ್ಷೆಗಳು ಏಕಕಾಲಕ್ಕೆ ಜಾರಿಯಾಗಲಿವೆ ಎಂದೂ ನ್ಯಾಯಾಲಯ ಹೇಳಿದೆ.

ಇದಕ್ಕೂ ಮುನ್ನ, ಈ ಪ್ರಕರಣದಲ್ಲಿ ಉತ್ತರ ಪ್ರದೇಶದ ಚಾಂದೌಲಿ ಜಿಲ್ಲೆಯ ಮುಹಮ್ಮದ್ ರಶೀದ್ ಎಂಬ ಆರೋಪಿಗೆ ವಿಶೇಷ ರಾಷ್ಟ್ರೀಯ ತನಿಖಾ ದಳ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಆರೋಪಿ ರಶೀದ್ ಪಾಕಿಸ್ತಾನದ ಐಎಸ್ಐ ಏಜೆಂಟ್ ಗಳ ಸಂಪರ್ಕದಲ್ಲಿದ್ದಾನೆ ಎಂದು ಮೂಲತಃ ಗೋಮತಿ ನಗರದ ಭಯೋತ್ಪಾದಕ ನಿಗ್ರಹ ದಳ ಈ ಪ್ರಕರಣವನ್ನು ದಾಖಲಿಸಿಕೊಂಡಿತ್ತು. ನಂತರ ಈ ಪ್ರಕರಣದ ತನಿಖೆ ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರಗೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News