ಹತ್ರಸ್ ಪ್ರಕರಣ: ವಿಶೇಷ ತನಿಖಾ ತಂಡಕ್ಕೆ ಇನ್ನೂ 10 ದಿನ ಕಾಲಾವಕಾಶ
Update: 2020-10-07 04:51 GMT
ಹತ್ರಸ್/ಲಕ್ನೊ: ಉತ್ತರಪ್ರದೇಶದ ಹತ್ರಸ್ನಲ್ಲಿನ ದಲಿತ ಯುವತಿಯ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಹಾಗೂ ಚಿತ್ರಹಿಂಸೆಗೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಅಥವಾ ಸಿಟ್ಗೆ ಅಂತಿಮ ವರದಿ ಸಲ್ಲಿಸಲು ಆದಿತ್ಯನಾಥ್ ಸರಕಾರ ಇನ್ನೂ 10 ದಿನಗಳ ಕಾಲಾವಕಾಶ ನೀಡಿದೆ.
ಸಿಟ್ ಇಂದು ತನ್ನ ವರದಿಯನ್ನು ಸರಕಾರಕ್ಕೆ ಒಪ್ಪಿಸಬೇಕಾಗಿತ್ತು. ಮುಖ್ಯಮಂತ್ರಿ ಆದಿತ್ಯನಾಥ್ ಅವರ ಆದೇಶದ ಮೇರೆಗೆ ಸಿಟ್ಗೆ ವರದಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.
ಸೆಪ್ಟಂಬರ್ 14ರಂದು ತನ್ನ ಗ್ರಾಮದ ನಾಲ್ವರು ದುಷ್ಕರ್ಮಿಗಳಿಂದ ಅತ್ಯಾಚಾರ ಹಾಗೂ ತೀವ್ರ ಹಲ್ಲೆಗೆ ಒಳಗಾಗಿದ್ದ ಯುವತಿ ಚಿಕಿತ್ಸೆ ಫಲಿಸದೆ ದಿಲ್ಲಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಈ ಘಟನೆ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಒಳಗಾದ ಹಿನ್ನೆಲೆಯಲ್ಲಿ ಆದಿತ್ಯನಾಥ್ ಸರಕಾರ ವಿಶೇಷ ತನಿಖಾ ತಂಡವನ್ನು ರಚಿಸಿ, ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ತಿಳಿಸಿತ್ತು.