ಕಳೆದ 20 ದಿನಗಳಿಂದ ಪ್ರಧಾನಿ ಮೋದಿ ನಮ್ಮೊಂದಿಗೆ ಮಾತನಾಡಿಲ್ಲ : ಯದುವೀರ್ ಸಿಂಗ್ ಶೇರಾವತ್

Update: 2020-12-16 04:13 GMT
ಫೈಲ್ ಫೋಟೊ

ಹೊಸದಿಲ್ಲಿ : "ನಾವು ಪ್ರಧಾನಿಯನ್ನು ಆಯ್ಕೆ ಮಾಡಿ ಅವರಿಗೆ ಮಾತನಾಡುವ ಅಧಿಕಾರ ನೀಡಿದ್ದೇವೆ. ಆದರೆ ಕಳೆದ 20 ದಿನಗಳಿಂದ ಪ್ರಧಾನಿ ಮೋದಿ ನಮ್ಮೊಂದಿಗೆ ಮಾತನಾಡಿಲ್ಲ" ಎಂದು ಭಾರತೀಯ ಕಿಸಾನ್ ಯೂನಿಯನ್ (ಟಿಕಾಯತ್) ಪ್ರಧಾನ ಕಾರ್ಯದರ್ಶಿ ಯದುವೀರ್ ಸಿಂಗ್ ಶೇರಾವತ್ ಹೇಳಿದ್ದಾರೆ.

ಕೇಂದ್ರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ರಾಜಧಾನಿಯ ಹೊರವಲಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ರೈತ ಸಮುದಾಯದ ಬಗ್ಗೆ ಸರ್ಕಾರಕ್ಕೆ ಕರುಣೆ ಇಲ್ಲ" ಎಂದು ಆಪಾದಿಸಿರುವ ಮುಖಂಡರು, ಈ ತಿಂಗಳ 20ನ್ನು ಶೋಕ ದಿನವಾಗಿ ಆಚರಿಸಲಾಗುವುದು ಎಂದು ಪ್ರಕಟಿಸಿದ್ದಾರೆ.

ನವೆಂಬರ್ 26ರಂದು ರೈತ ಚಳವಳಿ ಆರಂಭವಾದ ಬಳಿಕ ಇದುವರೆಗೆ 20ಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡಿದ್ದು, ಅವರ ಗೌರವಾರ್ಥ ದೇಶದ ಎಲ್ಲ ಗ್ರಾಮಗಳಲ್ಲಿ ರವಿವಾರವನ್ನು ಶೋಕ ದಿನವಾಗಿ ಆಚರಿಸಲಾಗುವುದು ಎಂದು 35 ರೈತ ಸಂಘಟನೆಗಳು ಸ್ಪಷ್ಟಪಡಿಸಿವೆ.

"ಪ್ರತಿಭಟನೆ ಆರಂಭವಾದ ಬಳಿಕ ಸರಾಸರಿ ಒಬ್ಬರು ಪ್ರತಿದಿನ ಮೃತಪಟ್ಟಿದ್ದಾರೆ. ಹೋರಾಟದಲ್ಲಿ ಹುತಾತ್ಮರಾದ ಅವರೆಲ್ಲರಿಗೆ ಗೌರವ ಸಲ್ಲಿಸುವ ಸಲುವಾಗಿ ಡಿಸೆಂಬರ್ 20ರಂದು ದೇಶಾದ್ಯಂತ ಎಲ್ಲ ಗ್ರಾಮಗಳಲ್ಲಿ ಶೋಕ ದಿನ ಆಚರಿಸಲಾಗುತ್ತದೆ" ಎಂದು ಭಾರತೀಯ ಕಿಸಾನ್ ಸಂಘ (ಸಿಧುಪುರ)ದ ಅಧ್ಯಕ್ಷ ಜಗಜೀತ್ ಸಿಂಗ್ ದಲ್ಲೇವಾಲ ಹೇಳಿದ್ದಾರೆ. "ಅವರ ಹೆಸರು ಮತ್ತು ಭಾವಚಿತ್ರಗಳು ಗ್ರಾಮಗಳಿಗೆ ತಲುಪಿದಾಗ, ಹೋರಾಟದಲ್ಲಿ ಮತ್ತಷ್ಟು ರೈತರು ಸೇರಿಕೊಳ್ಳಲಿದ್ದಾರೆ" ಎಂದು ಅವರು ಹೇಳಿದರು.

ಮಂಗಳವಾರ ಪಂಜಾಬ್‌ನ ಮೊಹಾಲಿ ಮತ್ತು ಪಟಿಯಾಲಾದಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ರೈತರು ಸಾವನ್ನಪ್ಪಿದ್ದಾರೆ. ಈ ಮಧ್ಯೆ ಗುಜರಾತ್, ಮಧ್ಯಪ್ರದೇಶ, ತಮಿಳುನಾಡು ಮತ್ತು ಉತ್ತರಾಖಂಡ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ರೈತರ ಸಾವು, ಪ್ರತಿಭಟನಾ ಸ್ಥಳವಾದ ಸಿಂಘು ಗಡಿಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ವಿರೋಧ ಪಕ್ಷಗಳಿಂದ ಎದುರಾಗಬಹುದಾದ ಪ್ರಶ್ನೆಗಳನ್ನು ತಪ್ಪಿಸುವ ಸಲುವಾಗಿ ಸರ್ಕಾರ ಚಳಿಗಾಲದ ಅಧಿವೇಶನ ರದ್ದುಪಡಿಸಿದೆ ಎಂದು ರೈತರು ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News