ತುಮಕೂರು: ರಾಹುಲ್‍ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಗೆ ವ್ಯಾಪಕ ಜನ ಬೆಂಬಲ

Update: 2022-10-09 11:16 GMT

ತುಮಕೂರು: ರಾಹುಲ್‍ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಗೆ ವ್ಯಾಪಕ ಜನ ಬೆಂಬಲ ವ್ಯಕ್ತವಾಗಿದ್ದು, ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ನಡೆದ ಕನಕ ಜಯಂತಿಯಲ್ಲಿ ರಾಹುಲ್‍ ಗಾಂಧಿ ಅವರು ಭಾಗಿಯಾಗಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. 

ತುರುವೇಕೆರೆ ತಾಲ್ಲೂಕಿನ ಬಾಣಸಂದ್ರ ಗ್ರಾಮದ ಶಾಲೆಯಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದ ರಾಹುಲ್‍ಗಾಂಧಿಯವರು ಬೆಳಿಗ್ಗೆ 6.30ಕ್ಕೆ ತಿಪಟೂರು ತಾಲ್ಲೂಕಿನ ಕೆ.ಬಿ. ಕ್ರಾಸ್‍ಗೆ ಕಾರಿನಲ್ಲಿ ಆಗಮಿಸಿದರು. 

ಕೆ.ಬಿ.ಕ್ರಾಸ್‍ಗೆ ಆಗಮಿಸಿದ ಭಾರತ್ ಜೋಡೊ ಯಾತ್ರೆಯನ್ನು ಪೂರ್ಣಕುಂಭ ಕಳಸದೊಂದಿಗೆ ಸ್ವಾಗತಿಸಲಾಯಿತು. ರಾಹುಲ್‍ ಗಾಂಧಿಯವರನ್ನು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಬರ ಮಾಡಿಕೊಂಡರು.

ಕೆ.ಬಿ. ಕ್ರಾಸ್‍ನಿಂದ ಬೆಳಗ್ಗೆ 6.40ಕ್ಕೆ ಆರಂಭವಾದ ಭಾರತ್ ಜೋಡೊ ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರುಗಳಾದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ವೇಣುಗೋಪಾಲ್, ಡಾ. ಜಿ. ಪರಮೇಶ್ವರ್, ಬಿ.ಕೆ. ಹರಿಪ್ರಸಾದ್, ಆರ್. ರಾಜೇಂದ್ರ, ಡಾ. ರಫೀಕ್ ಅಹಮದ್ ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಹೆಜ್ಜೆ ಹಾಕಿದರು.

ಕೆ.ಬಿ.ಕ್ರಾಸ್‍ನಿಂದ ಚಿಕ್ಕನಾಯಕನಹಳ್ಳಿ ಸೇರಿದಂತೆ ಭಾರತ್ ಜೋಡೊ ಯಾತ್ರೆ ಸಾಗುತ್ತಿರುವ ರಸ್ತೆಯ ಇಕ್ಕೆಲಗಳಲ್ಲಿ ಕಾಂಗ್ರೆಸ್ ಪಕ್ಷದ ಬಾವುಟಗಳು, ಫ್ಲೆಕ್ಸ್‌ ಗಳು ರಾರಾಜಿಸುತ್ತಿವೆ.

ಪಾದಯಾತ್ರೆಯುದ್ದಕ್ಕೂ ರಾಹುಲ್‍ ಗಾಂಧಿಯವರು ಕಾರ್ಯಕರ್ತರು, ರೈತರು, ಜನಸಾಮಾನ್ಯರೊಂದಿಗೆ ನಗು ನಗುತ್ತಲೇ ಮಾತನಾಡುತ್ತಾ, ಅವರ ಸಮಸ್ಯೆಗಳನ್ನು ಆಲಿಸುತ್ತಾ ಹೆಜ್ಜೆ ಹಾಕುತ್ತಿರುವುದು ಕಾರ್ಯಕರ್ತರು ಮತ್ತಷ್ಟು ಹುರುಪು ತಂದಿದೆ.

ಪಾದಯಾತ್ರೆ ಸಾಗಿದ ಮಾರ್ಗದಲ್ಲಿ ಬರುವ ಹಳ್ಳಿಗಳು, ಪ್ರಮುಖ ವೃತ್ತದಲ್ಲಿ ನೆರೆದಿದ್ದ ಜನರತ್ತ ರಾಹುಲ್‍ ಗಾಂಧಿ ಕೈ ಬೀಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿವೆ. ಪಾದಯಾತ್ರೆ ಮಾರ್ಗದ ಮಧ್ಯೆ ಕಲಾವಿದರ ತಂಡವೊಂದರಿಂದ ನಡೆದ ನಾಟಕ ಪ್ರದರ್ಶನವನ್ನು ರಾಹುಲ್‍ ಗಾಂಧಿ ವೀಕ್ಷಿಸಿದರು.

ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿಯವರ ಸ್ವಗ್ರಾಮ ಜೆ.ಸಿ.ಪುರ ಗ್ರಾಮಕ್ಕೆ ಬೆಳಗ್ಗೆ 8.15ಕ್ಕೆ ಭಾರತ್ ಜೋಡೊ ಯಾತ್ರೆ ತಲುಪಿತು. ಬಳಿಕ ಸಚಿವ ಮಾಧುಸ್ವಾಮಿ ಅವರ ನಿವಾಸದ ಸಮೀಪದಲ್ಲೇ ಇರುವ ಪ್ರೊ. ಶಿವನಂಜಪ್ಪ ಎಂಬವರ ಮನೆಗೆ ರಾಹುಲ್‍ ಗಾಂಧಿ ಮತ್ತು ಕಾಂಗ್ರೆಸ್ ನಾಯಕರು ತೆರಳಿ ಅಲ್ಲಿಯೇ ಚಹಾ ಸೇವಿಸಿ ಕೆಲ ಹೊತ್ತು ಚರ್ಚೆ ನಡೆಸಿದರು.

ಚಿಕ್ಕನಾಯಕನಹಳ್ಳಿಯ ಕನಕ ವೃತ್ತದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ರಾಹುಲ್‍ ಗಾಂಧಿ ಪಾಲ್ಗೊಂಡು ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು. ನಂತರ ಚಿಕ್ಕನಾಯಕನಹಳ್ಳಿ ಕಂಬಳಿ ಸೊಸೈಟಿಗೂ ಭೇಟಿ ನೀಡಿದ ರಾಹುಲ್‍ ಗಾಂಧಿ ಕಂಬಳಿಗಳನ್ನು ವೀಕ್ಷಿಸಿದರು. ಇದೇ ವೇಳೆ ಕಂಬಳಿ ಸೊಸೈಟಿಯಿಂದ ರಾಹುಲ್‍ ಗಾಂಧಿಯವನ್ನು ಅಭಿನಂದಿಸಲಾಯಿತು.

ಚಿಕ್ಕನಾಯಕನಹಳ್ಳಿಯಿಂದ ತರಬೇನಹಳ್ಳಿಗೆ ತೆರಳಲು ಕಾರಿನಲ್ಲಿ ಕುಳಿತ ರಾಹುಲ್‍ಗಾಂಧಿಯವರು ಮಕ್ಕಳನ್ನು ಎತ್ತಿಕೊಂಡು ಮುದ್ದಾಡಿದರು. ತರಬೇನಹಳ್ಳಿಗೆ ಕಾರಿನಲ್ಲಿ ತೆರಳಿದ ರಾಹುಲ್‍ ಗಾಂಧಿ ಅಲ್ಲಿ ಬೆಳಗಿನ ಉಪಹಾರ ಸೇವಿಸಿದರು.

ರೈತ ಅಣ್ಣೆಕಟ್ಟೆ ವಿಶ್ವನಾಥ್ ಮತ್ತು ಇತರ ರೈತರೊಂದಿಗೆ ರಾಹುಲ್‍ಗಾಂಧಿ ಸಂವಾದ ನಡೆಸಿ, ತೆಂಗು ಬೆಳೆಗಾರರ ಸಮಸ್ಯೆಗಳ ಕುರಿತು ಮಾಹಿತಿ ಕಲೆ ಹಾಕಿದರು. ಸಂವಾದದ ಬಳಿಕ ತರಬೇನಹಳ್ಳಿಯಲ್ಲೇ ವಿಶ್ರಾಂತಿ ಪಡೆದು, ಸಂಜೆ 4 ನಂತರ ಭಾರತ್ ಜೋಡೊ ಯಾತ್ರೆ ಸಾಗಲಿದ್ದು, ರಾತ್ರಿ ಬರಕನಾಳು ಗೇಟ್‍ನಲ್ಲಿ ವಾಸ್ತವ್ಯ ಹೂಡುವರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News