ಕರ್ತವ್ಯದಲ್ಲಿದ್ದ ಕೊಡಗಿನ ಯೋಧ ಹೃದಯಾಘಾತದಿಂದ ಮೃತ್ಯು
ಮಡಿಕೇರಿ ಅ.11 : ಭಾರತೀಯ ಸೇನೆಯಲ್ಲಿ ಸೇವೆಯಲ್ಲಿದ್ದ ಕೊಡಗಿನ ಯೋಧರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಉತ್ತರಾಖಂಡ್ ನ ಜೋಷಿ ಮತ್ತ್ ಎಂಬಲ್ಲಿ ನಡೆದಿದೆ.
ಸೋಮವಾರಪೇಟೆ ತಾಲೂಕಿನ ತಾಕೇರಿ ಮೂಲದ ಎನ್.ಸಿ.ಮಹೇಶ್ (46) ಮೃತ ಯೋಧ ಎಂದು ತಿಳಿದು ಬಂದಿದೆ.
ಮೃತ ಯೋಧ ಪತ್ನಿ, ಓರ್ವ ಪುತ್ರಿ (10) ಹಾಗೂ ಓರ್ವ ಪುತ್ರನನ್ನು (6) ಅಗಲಿದ್ದಾರೆ.
ಕಳೆದ 22 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹೇಶ್, ನಾಲ್ಕು ವರ್ಷಗಳಲ್ಲಿ ನಿವೃತ್ತಿ ಹೊಂದಿ ಗ್ರಾಮಕ್ಕೆ ಬರುವ ನಿರೀಕ್ಷೆಯಲ್ಲಿದ್ದರು. ಜೂನಿಯರ್ ಕಮಿಷನ್ ಆಫೀಸರ್ (ಜೆಸಿಒ) ಆಗಿ ಉತ್ತರಾಖಂಡ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಕಳೆದ ತಿಂಗಳಷ್ಟೇ ರಜೆಯಲ್ಲಿ ತಾಕೇರಿಗೆ ಬಂದು ಮರಳಿದ್ದರು.
ಬೆಂಗಳೂರು ಹೈದರಬಾದ್, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ್ ಸೇರಿದಂತೆ ವಿವಿಧ ಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಪಾರ್ಥೀವ ಶರೀರ ಇನ್ನೆರಡು ದಿನಗಳಲ್ಲಿ ಹುಟ್ಟೂರಿಗೆ ಬರಲಿದೆ ಎಂದು ತಿಳಿದು ಬಂದಿದೆ.
ಉತ್ತರಾಖಂಡ್ ನಿಂದ ಏರ್ ಲಿಫ್ಟ್ ಮೂಲಕ ಪಾರ್ಥೀವ ಶರೀರ ದೆಹಲಿ ತಲುಪಲಿದೆ. ನಂತರ ಅಲ್ಲಿನ ಸೇನಾ ಕ್ಯಾಂಪ್ ನಲ್ಲಿ ಸಕಲ ಸೇನಾ ಗೌರವಗಳೊಂದಿಗೆ ರಸ್ತೆ ಮಾರ್ಗದ ಮೂಲಕ ಹುಟ್ಟೂರಿಗೆ ಬೀಳ್ಕೊಡಲಾಗುವುದು ಎಂದು ತಿಳಿದು ಬಂದಿದೆ.