ರಾಯಚೂರಿನ ರಾಜಕಾರಣದಲ್ಲಿ ಬದಲಾವಣೆ ಆಗಲಿದೆ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-10-11 15:24 GMT

ರಾಯಚೂರು , ಅ. 11 : ರಾಯಚೂರಿನ ರಾಜಕಾರಣದಲ್ಲಿ ಬಹಳ ದೊಡ್ಡ ಬದಲಾವಣೆ ಆಗಲಿದೆ. ನಾವು ರಾಯಚೂರಿಗೆ ಮಾಡಿರುವ ಕೆಲಸಗಳನ್ನು ಮೂಂದಿಟ್ಟುಕೊಂಡು, ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಂಗಳವಾರ ರಾಯಚೂರು ತಾಲೂಕಿನ ಗಿಲ್ಲೆಸಗೂರು ಗ್ರಾಮದಲ್ಲಿ ಆಯೋಜಿಸಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಯಚೂರಿನ ಗ್ರಾಮೀಣ ಭಾಗದಲ್ಲಿ 23 ಕೆರೆ ತುಂಬಿಸುವ ಯೋಜನೆಯನ್ನು ಜಾರಿ ಮಾಡಲಾಗುವುದು. ಗ್ರಾಮೀಣ ಭಾಗದ ಕಟ್ಟಕಡೆಯಲ್ಲಿರುವವ ಜಮೀನಿಗೂ ನೀರು ತಲುಪಿಸಲಾಗುವುದು. ರಾಯಚೂರು ಜಿಲ್ಲೆಯ ಸಮಗ್ರ ಅಭಿವೃದ್ಧಿ ಬಿಜೆಪಿ ಸರಕಾರ ಕಂಕಣಬದ್ಧವಾಗಿದೆ ಎಂದರು.

ಬಹುದಿನಗಳ ಬೇಡಿಕೆಯಾದ ಏಮ್ಸ್ ಸಂಸ್ಥೆಯನ್ನು ರಾಯಚೂರಿಗೆ ತರಲು ಎಲ್ಲಾ ಪ್ರಯತ್ನಗಳು ನಡೆದಿದೆ. ಕೇಂದ್ರ ಆರೋಗ್ಯ ಸಚಿವರ ಬಳಿ ಈ ಕುರಿತು ಮಾತನಾಡಿದ್ದು, ಮುಂದಿನ ವಾರ ದೆಹಲಿಗೆ ಹೋಗಿ ಪುನಾಃ ಚರ್ಚಿಸಲಾಗುವುದು. ಹಾಗೆಯೇ ಮಂತ್ರಾಲಯದ ಸೇತುವೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೆಸರು ಇಡಲು ಸಧ್ಯದಲ್ಲಿಯೇ ಆದೇಶ ಹೊರಡಿಸಲಾಗುವುದು ಎಂದರು.

ರಾಯಚೂರು ಜಿಲ್ಲೆಗೆ ವಿಶೇಷವಾದ ಕೈಗಾರಿಕಾ ಯೋಜನೆಗಳನ್ನು ಬರುವ ತಿಂಗಳಲ್ಲಿ ಘೋಷಣೆ ಮಾಡಲಾಗುವುದು. ರಾಯಚೂರು ವಿಶ್ವವಿದ್ಯಾಲಯಕ್ಕೆ ಅನುದಾನ, ರಾಯಚೂರು ಜಿಲ್ಲೆಯ ಮಕ್ಕಳ ಪೌಷ್ಟಿಕ ಆಹಾರಕ್ಕೆ ವಿಶೇಷ ಅನುದಾನ ನೀಡಲಾಗುವುದು ಎಂದರು.

ನಮ್ಮ ಸರಕಾರ 28 ಸಾವಿರ ಕೋಟಿ ರೂ. ಎಸ್‍ಸಿಪಿ, ಟಿಎಸ್‍ಪಿ ಯೋಜನೆಗಳಿಗೆ ನೀಡಲಾಗಿದೆ. ಎಸ್ಸಿ, ಎಸ್ಟಿ ಬಡ ಜನರಿಗೆ ವಿದ್ಯುತ್ ಉಚಿತ, 2 ಲಕ್ಷ ಮನೆ ನಿರ್ಮಾಣಕ್ಕೆ, 100 ಯುವಕರಿಗೆ ಉದ್ಯೋಗ ಬಾಬು ಜಗಜೀವನರಾಂ ಅವರ ಹೆಸರಿನಲ್ಲಿ ಸ್ವಯಂಉದ್ಯೋಗ ಕೊಡುವ ಯೋಜನೆ, ಸೇರಿದಂತೆ 5 ವಿವಿಧ ಶೈಕ್ಷಣಿಕ ಕೇಂದ್ರಗಳಲ್ಲಿ ಮೆಗಾ ಹಾಸ್ಟೆಲ್‍ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು. 

ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು ನೀಡಿ ಉತ್ಪಾದನೆ ಹಾಗೂ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯವನ್ನು ನೀಡಲಾಗುತ್ತಿದ್ದು, 5 ಲಕ್ಷ ಮಹಿಳೆಯರಿಗೆ ಹಾಗೂ 5 ಲಕ್ಷ ಯುವಕರಿಗೆ ಉದ್ಯೋಗ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News