ಚೆಕ್ಬೌನ್ಸ್ ಪ್ರಕರಣ | ಆರೋಪಿ ಹೇಳಿಕೆ ದಾಖಲು ವೇಳೆ ದೂರುದಾರ ಇರಬೇಕಿಲ್ಲ: ಹೈಕೋರ್ಟ್
Update: 2022-10-18 15:00 GMT
ಬೆಂಗಳೂರು, ಅ.18: ಚೆಕ್ಬೌನ್ಸ್ ಕೇಸ್ನಲ್ಲಿ ಆರೋಪಿ ಹೇಳಿಕೆ ದಾಖಲಿಸಿಕೊಳ್ಳುವ ಸಂದರ್ಭದಲ್ಲಿ ದೂರುದಾರರು ಖುದ್ದು ಹಾಜರಿರಬೇಕಾದ ಅಗತ್ಯವಿಲ್ಲ. ದೂರುದಾರರು ಹಾಜರಿಲ್ಲ ಎಂಬ ಕಾರಣಕ್ಕೆ ವಿಚಾರಣಾ ನ್ಯಾಯಾಲಯ ಆರೋಪಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.
ಚೆಕ್ಬೌನ್ಸ್ ಕೇಸ್ನಲ್ಲಿ ಆರೋಪಿ ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಕೋರಿ ಕಲಬುರಗಿಯ ಸುಭಾಷ್ ಚೌಕದ ನಿವಾಸಿ ನಾಗರಾಜ್ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.
ದೂರು ರದ್ದುಪಡಿಸಿದ ಹಂತದಿಂದ ಪ್ರಕರಣವನ್ನು ಮತ್ತೆ ವಿಚಾರಣೆ ನಡೆಸಬೇಕು. 2022ರ ಅ.21ರಂದು ವಿಚಾರಣಾ ಕೋರ್ಟ್ಗೆ ಹಾಜರಾಗಿ, ಪ್ರಕರಣದ ಶೀಘ್ರ ಇತ್ಯರ್ಥಕ್ಕೆ ಸಹಕರಿಸಬೇಕು ಎಂದು ಆರೋಪಿ ಮತ್ತು ದೂರುದಾರರಿಗೆ ನಿರ್ದೇಶಿಸಿದೆ.