ಕಾಂಗ್ರೆಸ್ ಮನವೊಲಿಕೆ ರಾಜಕಾರಣ ಮಾಡುತ್ತಿದೆ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-10-23 13:21 GMT
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ‘ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಅವಧಿಯಲ್ಲಿಆಗಿರುವ ಭಯೋತ್ಪಾದನೆ ಹಾಗೂ ಇತರ ದುಷ್ಕೃತ್ಯಗಳನ್ನು ಮುಚ್ಚಿಕೊಳ್ಳಲು ಆ ಪಕ್ಷ ಮನವೊಲಿಕೆಯ ರಾಜಕಾರಣವನ್ನು ಮಾಡುತ್ತಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೂರಿದ್ದಾರೆ.

ರವಿವಾರ ಇಲ್ಲಿನ ಹುಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಆರೆಸೆಸ್ಸ್  ಮತ್ತು ಬಿಜೆಪಿ ಭಾರತದಲ್ಲಿ ಹಿಂಸೆಯನ್ನು ಹಬ್ಬಿಸುತ್ತಿದೆ ಎಂದು ರಾಹುಲ್ ಗಾಂಧಿಯವರು ಆರೋಪಿಸಿದ್ದಾರೆ. ಆದರೆ ಅವರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಮನವೊಲಿಕೆಯ ರಾಜಕಾರಣ ಮಾಡುತ್ತಾ ಆರೆಸೆಸ್ಸ್ ದೂಷಿಸುತ್ತಿದ್ದಾರೆ ಎಂದು ಟೀಕಿಸಿದರು.

ಆರೆಸೆಸ್ಸ್ ರಾಷ್ಟ್ರಪ್ರೇಮ ಹೊಂದಿರುವ ಸಂಘಟನೆ. ವಿನಾಕಾರಣ ಅದರ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ದೇಶದ ಜನರಿಗೆ ಇದರ ಬಗ್ಗೆ ಅರಿವಿದೆ. ಕಾಂಗ್ರೆಸ್ ಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಮುಂಬೈ, ಬೆಂಗಳೂರು, ಹೈದ್ರಾಬಾದ್‍ಗಳಲ್ಲಿ ಭಯೋತ್ಪಾದನೆ ಚಟುವಟಿಕೆಗಳು ನಡೆದವು. ಅವರ ಕಾಲದಲ್ಲಿ ಏನೇನು ಆಗಿದೆ ಎಂಬುದನ್ನು ಅವರು ಅವಲೋಕನ ಮಾಡಿಕೊಳ್ಳಬೇಕು.

ಮೋದಿಯವರ ಆಡಳಿತದಲ್ಲಿ ಆಂತರಿಕ ಭದ್ರತೆ, ಬಾಹ್ಯ ಭದ್ರತೆಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸಿರುವುದನ್ನು ಎಲ್ಲರೂ ಗ್ರಹಿಸಬೇಕು. ಅವರ ನೀತಿಗಳನ್ನು ವಿವಿಧ ರಾಷ್ಟ್ರಗಳು ಹಾಗೂ ಮುಸ್ಲಿಂ ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿವೆ. ಹೀಗಾಗಿ ರಾಹುಲ್ ಗಾಂಧಿಯವರ ಮಾತು ಅಸತ್ಯದಿಂದ ಕೂಡಿದ್ದು, ಅದರಲ್ಲಿ ಯಾವುದೇ ಹುರುಳಿಲ್ಲ ಎಂದು ಅವರು ಹೇಳಿದರು.

‘ಕಾಂಗ್ರೆಸ್‍ನವರು ಎಲ್ಲ ವಿಷಯವನ್ನು ಹಳದಿ ಕಣ್ಣಿನಿಂದ ನೋಡುವ ಅಭ್ಯಾಸ ಮಾಡಿಕೊಂಡಿದ್ದಾರೆ. ರಾಜಸ್ತಾನದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರೆ, ಯಾರು ಕೋಮುವಾದ, ಮನವೊಲಿಕೆ ರಾಜಕಾರಣದ ಮೂಲಕ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆಂಬುದು ತಿಳಿಯುತ್ತದೆ. ಮೊದಲಿಗೆ ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯದಲ್ಲಿ ಆಗುತ್ತಿರುವ ಕೋಮು ಚಟುವಟಿಕೆಗಳನ್ನು ನಿಯಂತ್ರಿಸಲಿ' ಎಂದು ಸಲಹೆ ನೀಡಿದರು.

ಇದನ್ನೂ ಓದಿ: ಕರ್ನಾಟಕವನ್ನು ಬಿಜೆಪಿಯ ಪ್ರಯೋಗಶಾಲೆ ಆಗಲು ಕಾಂಗ್ರೆಸ್ ಬಿಡುವುದಿಲ್ಲ: ರಾಹುಲ್ ಗಾಂಧಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News