ಕೊಲೆಯಾದ ಹರ್ಷ ಕುಟುಂಬಕ್ಕೆ ಜೀವ ಬೆದರಿಕೆ ಇರುವ ಬಗ್ಗೆ ತನಿಖೆಯಲ್ಲಿ ಯಾವುದೇ ಅಂಶ ಕಂಡು ಬಂದಿಲ್ಲ: ಎಸ್ಪಿ
ಶಿವಮೊಗ್ಗ, ಅ.27: ಕೆಲ ತಿಂಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಬಜರಂಗದಳದ ಕಾರ್ಯಕರ್ತ ಹರ್ಷನ ಕುಟುಂಬದ ಸದಸ್ಯರಿಗೆ ಕಿಡಿಗೇಡಿಗಳು ಕೊಲೆ ಬೆದರಿಕೆ ಹಾಕಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ತನಿಖೆಯಲ್ಲಿ ಈ ವರೆಗೆ ಯಾವುದೇ ಅಂಶ ಕಂಡು ಬಂದಿಲ್ಲ ಎಂದು ಶಿವಮೊಗ್ಗ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕಿಡಿಗೇಡಿಗಳಿಂದ ಹರ್ಷ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಈತನಕ ಯಾವುದೇ ದೂರು ಬಂದಿಲ್ಲ. ನಗರದಲ್ಲಿ ಇತ್ತೀಚೆಗೆ ಕೆಲವು ಅಹಿತಕರ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವರೆಗಿನ ತನಿಖೆಯಲ್ಲಿ ಹರ್ಷ ಕುಟುಂಬಕ್ಕೆ ಜೀವ ಬೆದರಿಕೆ ಇರುವ ಬಗ್ಗೆ ಯಾವುದೇ ಅಂಶ ಕಂಡು ಬಂದಿಲ್ಲ' ಎಂದು ತಿಳಿಸಿದರು.
'ಕೇವಲ ಹರ್ಷ ಸಹೋದರಿ ಅಶ್ವಿನಿ ಕುಟುಂಬಕ್ಕಲ್ಲ, ಇಡೀ ಶಿವಮೊಗ್ಗಕ್ಕೆ ರಕ್ಷಣೆ ನೀಡಲು ಇಲಾಖೆ ಸಿದ್ಧವಿದೆ. ಘಟನೆ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆ ಪೊಲೀಸರ ಮೇಲೆ ಯಾವುದೇ ಒತ್ತಡ ಬಂದಿಲ್ಲ' ಎಂದು ಸ್ಪಷ್ಟಪಡಿಸಿದರು.
ವೆಂಕಟೇಶ ನಗರದಲ್ಲಿ ನಡೆದ ವಿಜಯ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಅವರು, 'ಬಂಧಿತ ಮೂವರು ಆರೋಪಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ. ಆರೋಪಿ ದರ್ಶನ್ ಈ ಹಿಂದೆ ಬಾಲಾಪರಾಧಿಯಾಗಿದ್ದ. ವಿಜಯ್ ಮನೆಯಿಂದ ಹೊರಗೆ ಹೋದಾಗ ಕೊಲೆ ನಡೆದಿದೆ' ಎಂದು ತಿಳಿಸಿದರು.