ಭದ್ರಾವತಿ | ಆಟೋ ಚಾಲಕನ ಕೊಲೆ ಪ್ರಕರಣಕ್ಕೆ ತಿರುವು: ಇಬ್ಬರು ಸ್ನೇಹಿತರ ಬಂಧನ

Update: 2022-10-27 13:43 GMT

ಶಿವಮೊಗ್ಗಅ.27:ಇತ್ತೀಚೆಗೆ ಭದ್ರಾವತಿಯ  ಎಪಿಎಂಸಿ ಆವರಣದ ಮ್ಯಾಮ್ ಕೋಸ್ ಕಟ್ಟಡ ಬಳಿ ರೂಪೇಶ್ ಎಂಬಾತನ ಕೊಲೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಸ್ನೇಹಿತರೇ ರೂಪೇಶ್‌ನನ್ನು ಕೊಲೆ ಮಾಡಿರುವ ಆಘಾತರಕಾರಿ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಅಕ್ಟೋಬರ್ 24ರಂದು ಭದ್ರಾವತಿಯ ಎಪಿಎಂಸಿ ಆವರಣದ ಮ್ಯಾಮ್ ಕೋಸ್ ಕಟ್ಟಡ ಬಳಿ ರೂಪೇಶ್ ಎಂಬಾತನ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಭದ್ರಾವತಿಯ ಹಳೇ ನಗರ ಠಾಣೆ ಪೊಲೀಸರು ತನಿಖೆ ನಡೆಸಿದಾಗ ಸ್ನೇಹಿತರ ಕೃತ್ಯ ಬಯಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕೊಲೆಯಾದ ಹರ್ಷ ಕುಟುಂಬಕ್ಕೆ ಜೀವ ಬೆದರಿಕೆ ಇರುವ ಬಗ್ಗೆ ತನಿಖೆಯಲ್ಲಿ ಯಾವುದೇ ಅಂಶ ಕಂಡು ಬಂದಿಲ್ಲ: ಎಸ್ಪಿ

ಆಟೋ ಚಾಲಕನಾಗಿದ್ದ ರೂಪೇಶ್‌ನನ್ನು ಆತನ ಸ್ನೇಹಿತರೇ ಆದ ಭದ್ರಾವತಿ ಕಾಚಗೂಂಡನಹಳ್ಳಿಯ ಕುಶಾಲ್(35) ಹಾಗೂ ಭದ್ರಾವತಿ ಹುತ್ತಾ ಕಾಲೋನಿಯ ಸೋಮಶೇಖರ ಅಲಿಯಾಸ್ ಕಪ್ಪೆ(33) ಎಂಬುವರು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಘಟನೆ ವಿವರ: ರೂಪೇಶ್ ಮೂಲತಃ ಭದ್ರಾವತಿ ತಾಲೂಕು ಹೊಳೆಹೂನ್ನೂರಿನ ನಿವಾಸಿ. ಈತ ಶಿವಮೊಗ್ಗದಲ್ಲಿ ನೆಲೆಸಿದ್ದು ಆಟೋ ಓಡಿಸುತ್ತಿದ್ದ. ಕೊಲೆಯಾದ ದಿನ ರೂಪೇಶ್‌ನನ್ನು ಸೋಮಶೇಖರ್ ಹಾಗೂ ಕುಶಾಲ್ ಪಾರ್ಟಿ ಮಾಡಲು ಭದ್ರಾವತಿಗೆ ಕರೆಯಿಸಿಕೊಂಡಿದ್ದರು. ಮಾತನಾಡುವಾಗ ಯಾವುದೋ ವಿಚಾರಕ್ಕೆ ವಾಗ್ವಾದವಾಗಿದ್ದು, ಈ ವೇಳೆ ಕುಶಾಲ್ ಅಲ್ಲೇ ಇದ್ದ ಬಿದಿರಿನ ಕೋಲಿನಿಂದ ರೂಪೇಶ್‌ ಮೇಲೆ  ಹಲ್ಲೆ ನಡೆಸಿದ್ದಾನೆ. ರೂಪೇಶ್ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದು, ಆಗ ಸೋಮಶೇಖರ್ ಕೂಡ ದೊಣ್ಣೆಯಿಂದ ಥಳಿಸಿದ್ದಾನೆ. ಇದರಿಂದ ರೂಪೇಶ್  ಮೃತಪಟ್ಟಿದ್ದಾನೆ.

ಬಳಿಕ ಆರೋಪಿಗಳಿಬ್ಬರೂ ಸ್ಥಳದಿಂದ ಪರಾರಿಯಾಗಿದ್ದಾರೆ. ತನಿಖೆ ವೇಳೆ ಆರೋಪಿಗಳು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Similar News