ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ನನಗೆ ನಿಜವಾದ ಗೌರವ: ಮಲ್ಲಿಕಾರ್ಜುನ ಖರ್ಗೆ

Update: 2022-11-06 14:12 GMT

ಬೆಂಗಳೂರು: ‘ಮುಂದಿನ ವಿಧಾನಸಭಾ ಚುಣಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ (Congress) ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ನನಗೆ ನಿಜವಾದ ಗೌರವ’ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದ್ದಾರೆ.

ರವಿವಾರ ನಗರದ ಅರಮನೆ ಮೈದಾನದಲ್ಲಿ ಕೆಪಿಸಿಸಿ ವತಿಯಿಂದ ಏರ್ಪಡಿಸಿದ್ದ, ‘ಸರ್ವೋದಯ ಸಮಾವೇಶ’ದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನೂತನ ಅಧ್ಯಕ್ಷನಾಗಿದ್ದೇನೆ ಎಂದು ಹಾರ, ಸನ್ಮಾನ ಮಾಡುವುದು ಸಾಮಾನ್ಯ. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ನನಗೆ ನಿಜವಾದ ಗೌರವ ಸಿಕ್ಕಿದಂತೆ. ಈ ನಿಟ್ಟಿನಲ್ಲಿ ಎಲ್ಲ ನಾಯಕರು ಪಣತೊಟ್ಟು, ಗೆಲುವು ಸಾಧಿಸಲು ಹೋರಾಟ ಮಾಡಬೇಕಾಗಿದೆ ಎಂದು ತಿಳಿಸಿದರು.

ಎಐಸಿಸಿ ಅಧ್ಯಕ್ಷನಾದ ಬಳಿಕ ಇದೇ ಮೊದಲ ಬಾರಿಗೆ ಕರ್ನಾಟಕದ ಚುನಾವಣೆಯನ್ನು ಎದುರಿಸಬೇಕಾಗಿದೆ. ಇಲ್ಲಿನ ಫಲಿತಾಂಶ ನನ್ನ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ, ಸಣ್ಣಪುಟ್ಟ ಗೊಂದಲ, ಭಿನ್ನಾಭಿಪ್ರಾಯಗಳನ್ನು ಬಿಟ್ಟು, ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಕೆಲಸ ಮಾಡಬೇಕಾದ ಜವಾಬ್ದಾರಿ ಎಲ್ಲ ನಾಯಕರ ಮೇಲಿದೆ ಎಂದು ಅವರು ಹೇಳಿದರು.

ಪಕ್ಷದ ಸಿದ್ದಾಂತ, ತತ್ವಗಳಿಗೆ ನಾವು ಬದ್ಧವಾಗಿರಬೇಕು. ಅಧಿಕಾರ, ಸ್ಥಾನ ಮಾನಕ್ಕಾಗಿ ಪಕ್ಷದಲ್ಲಿರುವಂತೆ ನಾಟಕ ಮಾಡುವುದು ಬೇಡ. ಮುಂದೆ ಎಲ್ಲರಿಗೂ ಒಳ್ಳೆಯದು ಆಗಲಿದೆ ಎಂದ ಅವರು, ನಾವು ಒಗ್ಗಟ್ಟಾಗಿ ಮುಂದೆ ಸಾಗಿದರೆ ಸರಕಾರ ರಚಿಸುವುದನ್ನು ಸಾಧಿಸಬಹುದು. ಜತೆಗೆ, ಮುನಿಸಿಕೊಂಡಿರುವವರು, ನಮ್ಮಿಂದ ದೂರ ಆಗಿರುವವರು ಕರೆತರಬೇಕಾಗಿದೆ ಎಂದು ಖರ್ಗೆ ನುಡಿದರು.

ಪಕ್ಷದ ಅಧ್ಯಕ್ಷನಾದ ನಂತರ ನಾನು ಮಾಡಬೇಕಾದ ಕೆಲಸಗಳು ಇವೆ. ಉದಯಪುರ ಸಭೆ ನಿರ್ಣಯಗಳನ್ನು ಕಾರ್ಯಕ್ರಮಗಳನ್ನು ಜಾರಿ ತರಲು ಆರಂಭಿಸಿದ್ದು, ಎಲ್ಲವನ್ನೂ ಒಂದೊಂದಾಗಿ ಅನುಷ್ಠಾನಕ್ಕೆ ತರಲು ಮುಂದಾಗಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಯುವಕರಿಗೆ ಶೇ.50ರಷ್ಟು ಅವಕಾಶ ನೀಡಲಾಗುವುದು. ಎಲ್ಲ ಘಟಕಗಳಿಗೂ ಜವಾಬ್ದಾರಿ ನೀಡಿ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗುವುದು ಎಂದರು.

ನಾನು ಒಬ್ಬ ಕಾರ್ಮಿಕ ಕುಟುಂಬದಲ್ಲಿ ಹುಟ್ಟಿ ಬೆಳೆದು, ವಿದ್ಯಾರ್ಥಿ ಸಂಘಟನೆ ಕಟ್ಟಿ ಅದರ ಅಧ್ಯಕ್ಷನಾಗಿ ಜವಳಿ ಕಾರ್ಮಿಕರ ಸಂಘಗಳ ಜತೆ ಕೆಲಸ ಮಾಡಿ ಅಲ್ಲಿ ಆರಿಸಿ ಬಂದಿದ್ದೆ. ಹೀಗೆ, ಅಲ್ಲಿಂದ ಹಂತ ಹಂತವಾಗಿ ತಲುಪಿ ಎಐಸಿಸಿ ಅಧ್ಯಕ್ಷ ಸ್ಥಾನ ತಲುಪಿದ್ದೇನೆ ಹೊರತು ಒಂದೇ ಬಾರಿಗೆ ಈ ಸ್ಥಾನಕ್ಕೆ ಜಿಗಿದಿಲ್ಲ ಎಂದರು.

ನಾವು ನಮ್ಮ ಸ್ವಂತ ಶಕ್ತಿ ಮೇಲೆ ಮುಂದೆ ಬಂದಾಗ ಬೇರೆಯವರು ಅದನ್ನು ಗುರುತಿಸುತ್ತಾರೆ. ನಿಮ್ಮಲ್ಲಿರುವ ಶಕ್ತಿಗೆ ಬೆಂಬಲ ಸಿಗುತ್ತದೆ. ಅಲ್ಲದೆ, ನಾವು ಅಧಿಕಾರಕ್ಕೆ ಪಕ್ಷ ಸೇರುವುದಿಲ್ಲ. ಪಕ್ಷದ ತತ್ವ ಸಿದ್ಧಾಂತ ಅರಿತು ಪಕ್ಷ ಅಧಿಕಾರಕ್ಕೆ ಬಂದಾಗ ಅದನ್ನು ಜಾರಿಗೊಳಿಸಲು ಕೆಲಸ ಮಾಡಬೇಕು. ಪಕ್ಷದ ತತ್ವ ಸಿದ್ಧಾಂತ ಬೆಳೆಸಲು ಶ್ರಮಿಸಬೇಕು ಎಂದು ಕರೆ ನೀಡಿದರು.

ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಆಳವಾಗಿ ಬೇರೂರಿರುವುದು, ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನದಿಂದಲೇ. ಸಂವಿಧಾನ ಉಳಿದರೆ ಮಾತ್ರ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಉಳಿಯುತ್ತಾರೆ. ಜತೆಗೆ, ನಿಮಗೆ ಹಕ್ಕು, ಮೂಲಭೂತ ಅಧಿಕಾರ ಸಿಗುತ್ತದೆ. ಈ ದೇಶ ಪ್ರಜಾಪ್ರಭುತ್ವ, ಸಂವಿಧಾನ ಉಳಿಸಬೇಕಾದರೆ ನೀವು ಜನರನ್ನು ಸಂಘಟಿಸಬೇಕು. ಆಗ ದೇಶದಲ್ಲಿರುವ ಕೆಟ್ಟ ಸರಕಾರ ಕಿತ್ತೊಗೆಯಲು ಸಾಧ್ಯ ಎಂದರು.

ಬಿಜೆಪಿ ನಾಯಕರು ಕಾಂಗ್ರೆಸ್ ಕುರಿತು ಮನಬಂದಂತೆ ಮಾತನಾಡುತ್ತಾರೆ. ಇವರು ಮೋದಿ ಅವರ ಶಾಲೆಯಲ್ಲಿ ಕಲಿತವರೆ? ಇವರು ನಾವು ಮಾಡಿರುವ ಶಾಲೆ, ಕಾಲೇಜಿನಲ್ಲಿ ಓದಿ, ನಮ್ಮ ಸಾರ್ವಜನಿಕ ಉದ್ದಿಮೆಯಲ್ಲಿ ದುಡಿದು ಬೆಳೆದಿದ್ದಾರೆ. ಆದರೂ ಇವರು ನೀವು ಏನು ಮಾಡಿದ್ದೀರಿ ಎಂದು ಕೇಳುತ್ತಾರೆ ಎಂದು ಖರ್ಗೆ ಹೇಳಿದರು.

ಗುಜರಾತ್ ಚುನಾವಣೆಯಲ್ಲಿ ಕಳೆದ 9 ದಿನದಿಂದ ಪ್ರಚಾರ ಮಾಡುತ್ತಿದ್ದಾರೆ. ಯಾವ ಮಟ್ಟಕ್ಕೆ ಎಂದರೆ ಮೋರ್ಬಿ ಸೇತುವೆ ದುರಸ್ಥಿಗೆ 2 ಕೋಟಿ ರೂ.ನೀಡಲಾಗಿತ್ತು. ಇವರು 2 ಕೋಟಿ ರೂ.ಯೋಜನೆ ಉದ್ಘಾಟನೆ ಸಮಾರಂಭ ಮಾಡಿದರು. ಇವರ ಕೈಗುಣವೋ ಏನೋ ಉದ್ಘಾಟನೆ ಮಾಡಿದ 5 ದಿನದಲ್ಲೇ ಸೇತುವೆ ಬಿದ್ದು ಹೋಯಿತು, 138 ಜನ ಸತ್ತರು ಎಂದರು.

ಇದನ್ನೂ ಓದಿ: ಮೈಸೂರು | ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶ: ಮೂವರು ರೈತರು ಮೃತ್ಯು

Similar News