ಮಂಡ್ಯದಲ್ಲಿ ಬಿಜೆಪಿಗೇ ನೆಲೆಯಿಲ್ಲ, JDS ಮುಕ್ತ ಹೇಗೆ ಮಾಡುತ್ತಾರೆ?: ನಿಖಿಲ್ ಕುಮಾರಸ್ವಾಮಿ ತಿರುಗೇಟು

Update: 2022-11-07 12:45 GMT

ಮಂಡ್ಯ, ನ.7: ''ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೇ ನೆಲೆ ಇಲ್ಲ. ಇನ್ನು ಅದು ಹೇಗೆ ಜೆಡಿಎಸ್ ಮುಕ್ತ ಮಾಡುತ್ತಾರೆ?'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್‍ಗೆ (Nalin Kumar Kateel) ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ತಾಲೂಕಿನ ದುದ್ದ ಹೋಬಳಿಯ ಪುರದಕೊಪ್ಪಲು ಗ್ರಾಮದಲ್ಲಿ ಶ್ರೀ ವೀರಾಂಜನೇಯಸ್ವಾಮಿ ವಿಗ್ರಹ ಪ್ರತಿಪಷ್ಠಾಪನೆ ಮತ್ತು ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ''ಮೊನ್ನೆ ಕಟೀಲ್ ಸಾಹೇಬ್ರು ಮಾತನಾಡುವ ವೇಳೆ ಬಹುತೇಕ ಎಲ್ಲ ಕುರ್ಚಿಗಳು ಖಾಲಿಯಾಗಿದ್ದು ಎಲ್ಲರಿಗೂ ತಿಳಿದಿದೆ'' ಎಂದು ತಿರುಗೇಟು ನೀಡಿದರು.

''ಕುಮಾರಣ್ಣ ಮಂಡ್ಯಕ್ಕೆ ಬಜೆಟ್‍ನಲ್ಲಿ ಎಂಟೂಮುಕ್ಕಾಲು ಸಾವಿರ ಕೋಟಿ ರೂ. ಮೀಸಲಿಟ್ಟಿದ್ದಕ್ಕೆ ಮಂಡ್ಯ, ರಾಮನಗರ, ಹಾಸನಕ್ಕೆ ಸೀಮಿತವಾದ ಬಜೆಟ್ ಎಂದು ಬಿಜೆಪಿಯವರು ಲಘುವಾಗಿ ಮಾತನಾಡಿದ್ದರು. ಆದರೆ, ತಮ್ಮದೇ ಸರಕಾರ ಬಂದ ಮೇಲೆ ಆ ಅನುದಾನ ಏನಾಯಿತು ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಲಿ'' ಎಂದೂ ಅವರು ಕುಟಿಕಿದರು.

''ಸದ್ಯಕ್ಕೆ ತಾನು ಎಲ್ಲಿ ಸ್ಪರ್ಧಿಸುತ್ತೇನೆಂಬ ವಿಚಾರದ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಪ್ರಸ್ತುತ ಪಕ್ಷ ಸಂಘಟನೆ ಮಾಡುವ ಜವಾಬ್ದಾರಿಯನ್ನು ವರಿಷ್ಠರು ವಹಿಸಿದ್ದು, ಅದನ್ನು ಮಾಡುತ್ತಿದ್ದೇನೆ. ರಾಜ್ಯದ ಎಲ್ಲಡೆ ಪಕ್ಷ ಸಂಘಟಿಸಲು ಪ್ರವಾಸ ಮಾಡುತ್ತೇನೆ.  ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದಷ್ಟೇ ನಮ್ಮ ಮುಂದಿನ ಸವಾಲು'' ಎಂದು ಅವರು ಪ್ರತಿಕ್ರಿಯಿಸಿದರು.

''ರಾಜ್ಯದ ರೈತರು, ಜನಸಾಮಾನ್ಯರಿಗೆ ಪೂರಕವಾಗಿರುವ ಪಂಚರತ್ನ ಯೋಜನೆಗಳ ಬಗ್ಗೆ ತಿಳಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ರೈತರು, ರಾಜ್ಯದ ಜನರ ದೃಷ್ಠಿಯಿಂದ ಜೆಡಿಎಸ್ ಪಕ್ಷ ಪಂಚರತ್ನ ಯೋಜನೆ ರೂಪಿಸಲಾಗಿದೆ. ರಾಜ್ಯದ ಜನರು 5 ವರ್ಷ ಜೆಡಿಎಸ್ ಪಕ್ಷ ಸರಕಾರ ರಚನೆಗೆ ಆಶೀರ್ವಾದ ಮಾಡಿದರೆ ಈ ಯೋಜನೆಯಿಂದ ಅನುಕೂಲವಾಗಲಿದೆ'' ಎಂದು ಅವರು ಹೇಳಿದರು.

''ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಸರಕಾರ ರಚಿಸುವುದು ಶತಸಿದ್ಧ. ಈ ಬಾರಿ ಸ್ವತಂತ್ರವಾದ ಜಾತ್ಯತೀತ ಜನತಾದಳ ಪಕ್ಷವನ್ನು ಅಧಿಕಾರಕ್ಕೆ ತರಲು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಗಿದೆ. ಎಲ್ಲರೂ ಒಗ್ಗೂಡಿ 2023ಕ್ಕೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸೋಣ'' ಎಂದು ಕಾರ್ಯಕರ್ತರಲ್ಲಿ ಅವರು ಮನವಿ ಮಾಡಿದರು.

ಮುದಗಂದೂರು  ಗ್ರಾಮ ಪಂಚಾಯತ್ ಅಧ್ಯಕ್ಷ ಶಂಕರೇಗೌಡ, ಮನ್‍ಮುಲ್ ಅಧ್ಯಕ್ಷ  ಬಿ.ಆರ್. ರಾಮಚಂದ್ರ, ಶಾಸಕ ಸಿ.ಎಸ್. ಪುಟ್ಟರಾಜು ಪುತ್ರ ಸಿ.ಪಿ.ಶಿವರಾಜ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಸಿ.ಅಶೋಕ್, ಎಚ್.ಟಿ.ಮಂಜು, ಗುತ್ತಿಗೆದಾರ ಬಾಲರಾಜು ಮತ್ತು ಇತರ ಮುಖಂಡರು ಉಪಸ್ಥಿತರಿದ್ದರು.

Similar News