ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ. ಕೃಷ್ಣಮೂರ್ತಿ ಹನೂರು ರವರ ದತ್ತಿ ಕಾರ್ಯಕ್ರಮ

Update: 2022-11-07 13:32 GMT

ಹನೂರು:  ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ವಿದ್ಯಾರ್ಥಿ ಜೀವನದಿಂದಲೇ ಕನ್ನಡ ಭಾಷೆ, ಸಾಹಿತ್ಯ, ನೆಲ,ಜಲವನ್ನು ಪ್ರೀತಿಸಿ ಎಂದು ಎಂದು ಸಾಹಿತಿ,  ಹಾಗೂ ನಿವೃತ್ತ ಅದ್ಯಾಪಕ ಶಿವಣ್ಣ ಇಂದ್ವಾಡಿ ರವರು ಅಭಿಪ್ರಾಯ ಪಟ್ಟರು. 

ಹನೂರು ಪಟ್ಟಣದ ವಿವೇಕಾನಂದ ಸಂಯುಕ್ತ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು  ವತಿಯಿಂದ  ಆಯೋಜಿಸಲಾಗಿದ್ದ ಜನಪದ ವಿದ್ವಾಂಸ ಡಾ. ಕೃಷ್ಣಮೂರ್ತಿ ಹನೂರು ರವರ ದತ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾವುದೇ ಶಿಕ್ಷಣ ಪದವಿ ಪಡೆಯದೆ ನಮ್ಮ ಜನಪದರು ಮಲೆ ಮಹದೇಶ್ವರ, ಮಂಟೇಸ್ವಾಮಿ, ಮತ್ತು ಬಿಳಿಗಿರಿರಂಗನ ಕಾವ್ಯಗಳನ್ನು ಕಟ್ಟಿದ್ದಾರೆ.  ನಮ್ಮ ಗ್ರಾಮೀಣ ಭಾಗದಲ್ಲಿರುವ ಅಜ್ಜ ಅಜ್ಜಿಯಂದರಲ್ಲಿ ಭಾಷಿಕ ಜ್ಞಾನ ಸಾಕಷ್ಟು ಅಡಗಿದ್ದು  ಅವರು ನಿಧನರಾದರೆ ಗ್ರಂಥಾಲಯವೇ  ನಾಶವಾದ ರೀತಿ ಎಂದು ವಿಷಾದ ವ್ಯಕ್ತ ಪಡಿಸಿದರು.

ಪರಸ್ಪರ ಸಂಬಂಧ ಬೆಳೆಸುವ ಮಕ್ಕಳ ಕಥೆ, ಲಾಲಿಪದ, ಹೊಲಗದ್ದೆಗಳಲ್ಲಿ ಹಾಡುವ ಜಾನಪದ ಹಾಡುಗಳು ಇಂದು ಮರೆಯಾಗುತ್ತಿವೆ.  ಆಧುನಿಕ ಜಗತ್ತಿನಲ್ಲಿ ಎಲ್ಲರ  ಜೀವನ  ಯಾಂತ್ರಿಕವಾಗಿದ್ದರಿಂದ ನಮ್ಮ ಪ್ರೀತಿ, ಭಾಂದವ್ಯ  ಸಂಬಂಧಗಳಿಂದ ಎಲ್ಲರನ್ನು ದೂರ ಉಳಿಯುವಂತೆ ಮಾಡುತ್ತಿವೆ. ಇಂತಹ ಪರಿಸರದಲ್ಲಿ ನಾವು ಬದುಕುತ್ತಿರುವುದು ದುರಂತವೆ ಸರಿ ಆದ್ದರಿಂದ ಪ್ರತಿಯೊಬ್ಬರು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಕನ್ನಡ  ನೆಲ,ಜಲ ಸಾಹಿತ್ಯ ಪರಿಸರವನ್ನೂ ಪ್ರೀತಿಸಿ ನಮ್ಮ ಬದುಕಿಗೆ ಏನು ಬೇಕೋ ಅದನ್ನು ಮಾತ್ರ ಅಳವಡಿಸಿಕೊಳ್ಳಿ ಎಂದು ಕರೆ ನೀಡಿದರು 

ಇದೇ ವೇಳೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ  ಶೈಲೇಶ್ ಕುಮಾರ್ ರವರು  ಮಾತನಾಡಿ  ಕನ್ನಡ ಭಾಷೆ ಶುದ್ಧ, ವೈಜ್ಞಾನಿಕ ಮತ್ತು ಯಾವುದೇ ಸಂದರ್ಭದಲ್ಲಿಯೂ ಎಲ್ಲರಿಗೂ ಹೊಂದಿಕೊಳ್ಳುವ ಭಾಷೆಯಾಗಿದೆ  ಪ್ರತಿಯೊಬ್ಬರು ಭಾಲ್ಯದಿಂದಲೇ ಕನ್ನಡವನ್ನು  ಪ್ರೀತಿಸಿ, ಬೆಳೆಸಿ ಕನ್ನಡದ ಹೊಸ ಹೊಸ ಪದಗಳನ್ನು ಕಲಿಯುವ ಪ್ರಯೋಗ ಮಾಡಿ ಅದರಲ್ಲೂ ಚಾಮರಾಜನಗರದ ಕನ್ನಡವನ್ನು  ಸಹಜವಾಗಿ ಬೆಳೆಸಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ  ಹನೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್  ಅದ್ಯಕ್ಷ ಮಲ್ಲೇಶ್ ಮಹಾಲಿಂಕಟ್ಟೆ,  ಕಾರ್ಯದರ್ಶಿ ಅಭಿಲಾಷ್ ಗೌಡ ,
ವಿವೇಕಾನಂದ ಕಾಲೇಜು ಪ್ರಾಂಶುಪಾಲ ಮಧುಸೂಧನ್, ಸಂಚಾಲಕರಾದ ರಾಜೇಂದ್ರ ಹಾಗೂ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.

Similar News