ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ; ವರದಿಯ ನಂತರ ತೀರ್ಮಾನ: ಸಿಎಂ ಬೊಮ್ಮಾಯಿ

Update: 2022-11-08 14:02 GMT

ಚಿತ್ರದುರ್ಗ,ನ. 08:  ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಿಸಿ ಎಂದು  ಅರ್ಜಿ  ಬಂದಿದ್ದು, ನೇಮಿಸುವ ಪೂರ್ವದಲ್ಲಿ ಏನು ನಡೆದಿದೆ ಎನ್ನುವುದರ ಬಗ್ಗೆ ನ್ಯಾಯ ಸಮ್ಮತ ಪ್ರಕ್ರಿಯೆ ನಡೆಯುತ್ತಿದ್ದು,  ಕಂದಾಯ ಇಲಾಖೆಯಿಂದ ಸ್ಥಿತಿಗತಿಗಳ ಬಗ್ಗೆ ವರದಿ ಕೇಳಿದ್ದು, ವರದಿ ಬಂದ ನಂತರ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಸಾಣೇಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಮುರುಘಾ ಶ್ರೀಗಳ   ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ವ್ಯಾಖ್ಯಾನ ಮಾಡುವುದಿಲ್ಲ. ನ್ಯಾಯಾಲಯ ನಿರ್ಧಾರ ತೆಗೆದುಕೊಳ್ಳುತ್ತದೆ'' ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

''ನಂಬಿಕೆಗಳಿಗೆ ಕೊಡಲಿ ಏಟು ಕೊಡುವ ಕೆಲಸ''

ಶಾಸಕ ಸತೀಶ್  ಜಾರಕಿಹೊಳಿಯವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ ಶತಮಾನಗಳಿಂದ  ಯಾವುದೇ ಧರ್ಮ ನಡೆಯುವುದು ನಂಬಿಕೆ, ವಿಶ್ವಾಸದ ಮೇಲೆ ಸ್ಥಾಪಿತವಾಗಿರುವ ನಂಬಿಕೆಗಳಿಗೆ ಕೊಡಲಿ ಏಟು ಕೊಡುವ ಕೆಲಸ ಮಾಡಿದ್ದಾರೆ. ಅದರ ಮೇಲೆ  ಚರ್ಚೆ ಮಾಡುವುದೇನಿದೆ. ತಾಂತ್ರಿಕವಾಗಿ ಅವರ ಶಾಲಾ, ಕಾಲೇಜುಗಳ  ಪ್ರಮಾಣಪತ್ರದಲ್ಲಿ ಹಿಂದೂ ಎಂದೇ ನಮೂದಾಗಿದೆ. ನಂಬಿಕೆಗಳು ಶತಮಾನಗಳಿಂದ ಇದೆ. ಜನರ ನಂಬಿಕೆಯನ್ನು ಘಾಸಿ ಮಾಡುವಂಥ ಕೆಲಸ ಮಾಡಿ ಪುನ: ಚರ್ಚೆ ಮಾಡುವುದು ಏನೂ ಇಲ್ಲ. ಅವರ ಕ್ಷಮೆಯೂ ಬೇಕಾಗಿಲ್ಲ. ಜನ ತೀರ್ಮಾನ ಮಾಡುತ್ತಾರೆ ಎಂದರು.
 
''ಜನಸಂಕಲ್ಪಯಾತ್ರೆಗೆ  ಸಿದ್ದರಾಮಯ್ಯ  ಅವರಿಗೆ ಆಹ್ವಾನ'': ಜನಸಂಕಲ್ಪ ಯಾತ್ರೆಯಲ್ಲಿ ಜನರೇ ಸೇರುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ  ಅವರಿಗೆ ಆಹ್ವಾನ ನೀಡುತ್ತೇನೆ ಬಂದು ನೋಡಲಿ ಎಂದರು.  ಮಾಧ್ಯಮದಲ್ಲಿ ತೋರಿಸುವ ಜನಸಾಗರವೇ ಉತ್ತರ. ಜನಸಂಕಲ್ಪ ಯಾತ್ರೆ, ವಿಜಯಸಂಕಲ್ಪವಾಗಿ ಪರಿವರ್ತನೆಯಾಗಲಿದೆ ಎಂದರು.

Similar News