ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತೆ ಗತವೈಭವಕ್ಕೆ ಮರಳಲಿದೆ: ಸಿದ್ದರಾಮಯ್ಯ

''ಆರ್ಟಿಕಲ್ 371 (J) ಜಾರಿಗೆ ಬರಲು ಖರ್ಗೆ ಅವಿರತ ಶ್ರಮ ಕಾರಣ''

Update: 2022-12-10 13:41 GMT

ಕಲಬುರಗಿ: 'ಎಐಸಿಸಿ ಅಧ್ಯಕ್ಷರಾಗಲು ಮಲ್ಲಿಕಾರ್ಜುನ ಖರ್ಗೆ ಅವರು ಪ್ರಯತ್ನಿಸಲಿಲ್ಲ ಆದರೆ ಅಧ್ಯಕ್ಷಗಿರಿ ಅದಾಗಿಯೇ ಹುಡುಕಿಕೊಂಡು ಬಂದಿದೆ ಇದು ನಿಷ್ಠಾವಂತ ಕಾರ್ಯಕರ್ತನಿಗೆ ಸಂದ ಗೆಲುವು‌. ಖರ್ಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ' ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಕಲಬುರಗಿಯಲ್ಲಿ ನಡೆದ 'ಕಲ್ಯಾಣ ಕ್ರಾಂತಿ' ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಸೋನಿಯಾ, ರಾಹುಲ್ ಹಾಗೂ ಖರ್ಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತೆ ಗತವೈಭವಕ್ಕೆ ಮರಳಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದ್ದು ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಜನಪರ ಸರ್ಕಾರ ಸ್ಥಾಪನೆ ಮಾಡಿದಾಗಲೇ ಖರ್ಗೆ ಅವರಿಗೆ ಕೊಡಬಹುದಾದ ನಿಜವಾದ ಕೊಡುಗೆ ಹಾಗೂ ಅಭಿಮಾನ ಎಂದರು.

ಕ-ಕ ಭಾಗದಲ್ಲಿ‌ ಕಳೆದ ಸಲ 21 ಸ್ಥಾನ ಗೆದ್ದಿತ್ತು. ಮುಂಬರುವ ಚುನಾವಣೆಯಲ್ಲು ಕ-ಕ‌ ಭಾಗದ ಒಟ್ಟು 41 ಸ್ಥಾನಗಳ ಪೈಕಿ ಕನಿಷ್ಠ 30 ಸ್ಥಾನ ಗೆಲ್ಲಬೇಕು. ಅದಕ್ಕೆ‌ ನೀವು ತಯಾರಾಗಬೇಕು. ರಾಜ್ಯದಲ್ಲಿ ಅನೈತಿಕ ಸರ್ಕಾರ‌ ಇದೆ. ಅದೇ ಅನೈತಿಕತೆ ಮುಂದುವರಿದಿದೆ.  ರಾಜ್ಯದ ಇತಿಹಾಸದಲ್ಲೇ ಗುತ್ತಿಗೆದಾರರು ಯಾವ ಸರ್ಕಾರವನ್ನು 40% ಕಮಿಷನ್ ಎಂದಿರಲಿಲ್ಲ. ವಿಧಾನಸೌಧ ಗೋಡೆಗಳು ಲಂಚ ಲಂಚ ಲಂಚ ಅಂದು ಕೂಗುತ್ತಿವೆ. ಬೊಮ್ಮಾಯಿ‌ ಸರ್ಕಾರ ಲಂಚದ ಕೂಪವಾಗಿದೆ. ವರ್ಗಾವಣೆ, ಪದೋನ್ನತಿಗೆ ಲಂಚ ಕೊಡಬೇಕಾಗಿದೆ. ಅಧಿಕಾರಿಗಳು ಅನಿವಾರ್ಯವಾಗಿ ಲಂಚಕೊಟ್ಟ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ. ಇಂತಹ ಭ್ರಷ್ಟ ಸರ್ಕಾರ‌ಇರಬೇಕಾ ? ಇರಬಾರ್ದು. ನೀವೆಲ್ಲ ಬಿಜೆಪಿ ಸರ್ಕಾರ ಬರದಂತೆ ಮಾಡಬೇಕು ಎಂದು ಮನವಿ ಮಾಡಿದರು.

ಖರ್ಗೆ ಅವರು ಸರ್ಕಾರದ ಮೇಲೆ ನಿರಂತರ ಒತ್ತಡ ತಂದು ಈ‌ ಭಾಗಕ್ಕೆ ಆರ್ಟಿಕಲ್ 371 (J) ಜಾರಿಗೆ ತಂದರು. ಆದರೆ‌ ಬಿಜೆಪಿ ಸರ್ಕಾರ ಈ ಭಾಗಕ್ಕೆ ಕೇವಲ ಹೆಸರು ಬದಲಾವಣೆ ಮಾಡಿದರು ಎಂದು ಕುಟುಕಿದರು.

ಆದರೆ, ನಾನು ಸಿಎಂ ಆಗಿದ್ದಾಗ ಆರ್ಟಿಕಲ್ 371(J) ಜಾರಿಗೆ ತರಲು ಎಚ್ ಕೆ ಪಾಟೀಲ ನೇತೃತ್ವದ ಸಮಿತಿ ಮಾಡಿದ್ದೆ.  ಯಾವ ಅಡ್ವಾಣಿ ಇದನ್ನು ಜಾರಿಗೆ ತರಲು ಆಗಲ್ಲ ಎಂದಿದ್ದರೋ ಅದನ್ನೇ ‌ಜಾರಿಗೆ ತರಲು ಖರ್ಗೆ ಅವಿರತ ಶ್ರಮ ವಹಿಸಿದ್ದರು. ನಮ್ಮ ಕಾಲದಲ್ಲಿ 36,000 ಹುದ್ದೆ ತುಂಬಿದ್ದೇವೆ ಆದರೆ ಈ ಬೇಜವಾಬ್ದಾರಿ ಸರ್ಕಾರ ಒಂದೇ ಒಂದು ಹುದ್ದೆ ತುಂಬಲಿಲ್ಲ ಎಂದು ಹರಿಹಾಯ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಭಾಗದ ಅಭಿವೃದ್ದಿಗೆ 5000 ಕೋಟಿ ನೀಡುತ್ತೇವೆ ಜೊತೆಗೆ ಖಾಲಿ ಇರುವ ಹುದ್ದೆಗಳನ್ನು ತುಂಬುತ್ತೇವೆ ಎಂದರು.

Full View

Similar News