'ಪಕ್ಷಕ್ಕೆ ಯಾವುದೇ ರೀತಿಯ ಅನುಕೂಲ ಇಲ್ಲ...': ಮಾಜಿ MLC ಸಂದೇಶ್ ನಾಗರಾಜ್ ಕಾಂಗ್ರೆಸ್ ಸೇರ್ಪಡೆಗೆ ಮುಖಂಡರ ವಿರೋಧ
ಮೈಸೂರು,ಡಿ.15: ಮಾಜಿ ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಜ್ ಅವರನ್ನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಾರದು ಎಂದು ಕೆಪಿಸಿಸಿ ಸಂಯೋಜಕ ಎನ್.ಭಾಸ್ಕರ್ ಆಗ್ರಹಿಸಿದ್ದಾರೆ.
ಈ ಸಂಬಂಧ ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆದು ಮನವಿ ಮಾಡಿರುವ ಅವರು, ಮೈಸೂರು ನಗರ ವ್ಯಾಪ್ತಿಯಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಸೇರಿದಂತೆ ಹಲವಾರು ಮಂದಿ ಕಾಂಗ್ರೆಸ್ ಸೇರ್ಪಡೆ ಕಾಂಗ್ರೆಸ್ ಮುಖಂಡರುಗಳನ್ನು ಸಂಪರ್ಕ ಮಾಡಿ ಒತ್ತಾಯ ಮಾಡುತ್ತಿರುವುದು ಕಂಡು ಬಂದಿದ್ದು ಇದನ್ನು ನಾನು ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರುಗಳು ವಿರೋಧ ಮಾಡುತ್ತೇವೆ ಎಂದು ಹೇಳಿದ್ದಾರೆ.
[ಎನ್.ಭಾಸ್ಕರ್ - ಕೆಪಿಸಿಸಿ ಸಂಯೋಜಕ ]
'ಕಾಂಗ್ರೆಸ್ ಪಕ್ಷದಿಂದ ಅಧಿಕಾರ ಅನುಭವಿಸಿ ಪಕ್ಷಕ್ಕೆ ದ್ರೋಹ ಮಾಡಿ ಹೋದ ಕೆಲವರು ಚುನಾವಣೆ ಸಂದರ್ಭದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲು ಬಯಸುತ್ತಿದ್ದಾರೆ. ಇಂತಹ ಸ್ವಾರ್ಥ ಮತ್ತು ಮನೆ ಹಾಳರನ್ನು ಪಕ್ಷಕ್ಕೆ ಕರೆತಂದರೆ ಅನ್ಯಾಯ ವಾಗುತ್ತದೆ. ಇವರಿಂದ ಯಾವುದೇ ರೀತಿಯ ಅನುಕೂಲ ಪಕ್ಷಕ್ಕೆ ಆಗುವುದಿಲ್ಲ' ಎಂದು ತಿಳಿಸಿದ್ದಾರೆ.
'ಇವರುಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲೇ ಬೇಕು ಎಂಬುದಾದರೆ ಇವರಿಂದ ಸೋಲನ್ನು ಅನುಭವಿಸಿದ ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ಮತ್ತು ಮೈಸೂರು ನಗರದ ಕಾಂಗ್ರೆಸ್ ಪಕ್ಷದ ಮುಖಂಡರುಗಳನ್ನು ಕರೆದು ಚರ್ಚಿಸಿ ಆನಂತರ ಪಕ್ಷಕ್ಕೆ ಸೇರಿಸಿಕೊಳ್ಳಬೇಕೋ ಬೇಡವೊ ಎಂಬ ತೀರ್ಮಾನವನ್ನು ಮಾಡಬೇಕು' ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: 'ಬಿಜೆಪಿಯವರ ಸಹವಾಸ ಸಾಕಾಗಿದೆ...': ಕಾಂಗ್ರೆಸ್ ಸೇರಲು ನಿರ್ಧರಿಸಿದ ಮಾಜಿ ಎಂಎಲ್ ಸಿ ಸಂದೇಶ್ ನಾಗರಾಜ್