ಉಚಿತ ವಿದ್ಯುತ್ ಘೋಷಣೆಗೆ ನಿಮ್ಮನ್ನು ಆಹ್ವಾನಿಸುತ್ತೇನೆ, ಬನ್ನಿ: ಸಚಿವ ಸುನಿಲ್ ಕುಮಾರ್ ಗೆ ಸಿದ್ದರಾಮಯ್ಯ ತಿರುಗೇಟು

''ಇಂಧನ ಸಚಿವರ ಜ್ಞಾನಭಂಡಾರದ ಬಗ್ಗೆ ಅನುಕಂಪವಿದೆ''

Update: 2023-01-13 15:05 GMT

ಬೆಂಗಳೂರು, ಜ.13: ‘ಅಗತ್ಯ ಇರುವ ಕ್ಷೇತ್ರಕ್ಕೆ ಹಣ ಹಾಕುವುದನ್ನು ನಷ್ಟ ಎನ್ನುವುದಿಲ್ಲ, ಬದಲಾಗಿ ಬಂಡವಾಳ ಹೂಡಿಕೆ ಎನ್ನುತ್ತಾರೆ’ ಎಂಬ ಅರ್ಥಶಾಸ್ತ್ರದ ಸರಳ ತತ್ವದ ಅರಿವಿಲ್ಲದ ಇಂಧನ ಸಚಿವ ವಿ.ಸುನಿಲ್ ಕುಮಾರ್ ಅವರ ಜ್ಞಾನಭಂಡಾರದ ಬಗ್ಗೆ ಅನುಕಂಪವಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಶುಕ್ರವಾರ ಈ ಸಂಬಂಧ ಸರಣಿ ಟ್ವೀಟ್‍ಗಳನ್ನು ಮಾಡಿರುವ ಅವರು, ರಾಜ್ಯ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಎಸ್ಕಾಂಗಳಿಗೆ ನೀಡಿದ್ದು 6ಸಾವಿರ ಕೋಟಿ ರೂ.ಗಳೋ, 9ಸಾವಿರ ಕೋಟಿ ರೂ.ಗಳೋ? ಯಾವುದು ನಿಜ ಲೆಕ್ಕ? ಯಾವುದು ಸುಳ್ಳು ಲೆಕ್ಕ? ಎಂಬುದನ್ನು ಸುನಿಲ್ ಕುಮಾರ್ ಅವರು ಮೊದಲು ಹೇಳಬೇಕು ಎಂದು ಆಗ್ರಹಿಸಿದ್ದಾರೆ.

2013ರಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬರುವ ಹೊತ್ತಿಗೆ ಹಿಂದಿನ ಸರಕಾರ ವಿದ್ಯುತ್ ಇಲಾಖೆಯ ಮೇಲೆ ದೊಡ್ಡ ಮೊತ್ತದ ಸಾಲದ ಗಂಟನ್ನು ಹೊರಿಸಿ ಹೋಗಿತ್ತು, ಸಾಲ ಮಾಡಿ ಈ ಎಸ್ಕಾಂಗಳ ಬಾಕಿ ಮೊತ್ತ ತೀರಿಸಿ, ಕುತ್ತಿಗೆವರೆಗೂ ಮುಳುಗಿದ್ದ ಎಸ್ಕಾಂಗಳನ್ನು ಮೇಲೆತ್ತಿದವರು ನಾವು ಸುನಿಲ್ ಕುಮಾರ್ ಎಂದು ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ 2014-15ರಲ್ಲಿ ರಾಜ್ಯದಲ್ಲಿ ಒಟ್ಟು ಉತ್ಪಾದನೆಯಾಗುತ್ತಿದ್ದ ವಿದ್ಯುತ್ 14,825 ಮೆ.ವ್ಯಾ ಮಾತ್ರ. ಅದರಲ್ಲಿ ಸೋಲಾರ್ ಮೂಲದಿಂದ 118 ಮೆ.ವ್ಯಾ ಮತ್ತು ಗಾಳಿ ಮೂಲದಿಂದ 2655 ಮೆ.ವ್ಯಾ ವಿದ್ಯುತ್ ಉತ್ಪಾದನೆ ಆಗುತ್ತಿತ್ತು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

2018ರ ವೇಳೆಗೆ ಸೋಲಾರ್ ಮೂಲದಿಂದ 6157 ಮೆ.ವ್ಯಾ. ಮತ್ತು ಗಾಳಿ ಮೂಲದಿಂದ 4730 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಶಕ್ತಿ ತುಂಬಿದವರು ನಾವು. ವಿದ್ಯುತ್ ಉತ್ಪಾದನೆ ಹೆಚ್ಚಾದರೆ ಇಲಾಖೆಗೆ ಲಾಭವಾಗುತ್ತಾ? ನಷ್ಟವಾಗುತ್ತಾ? ಕಲ್ಲಿದ್ದಲು ಮೂಲದ ಉಷ್ಣ ವಿದ್ಯುತ್ ಉತ್ಪಾದನೆ 2014-15 ರಲ್ಲಿ 6,197 ಮೆ.ವ್ಯಾಟ್ ಇದ್ದದ್ದು, 2018 ರ ವೇಳೆಗೆ 11,366 ಮೆ.ವ್ಯಾಟ್ ಗೆ ತಲುಪಿತ್ತು. ಇಂದು ನೀವು ವಿದ್ಯುತ್ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದರೆ ಅದರ ಹಿಂದಿರುವುದು ನಮ್ಮ ಸರಕಾರದ ಶ್ರಮ ಎಂದು ಅವರು ತಿರುಗೇಟು ನೀಡಿದ್ದಾರೆ.

2014-15 ರಲ್ಲಿ ನವೀಕರಿಸಬಹುದಾದ ಇಂಧನ ಮೂಲದಿಂದ ಒಟ್ಟು ಉತ್ಪಾದನೆಯಾಗುತ್ತಿದ್ದ ವಿದ್ಯುತ್ ಪ್ರಮಾಣ 4,855 ಮೆ.ವ್ಯಾಟ್. 2018ರ ವೇಳೆಗೆ ಇದು 13,500 ಮೆ.ವ್ಯಾಟ್ ಗಿಂತ ಹೆಚ್ಚಾಯಿತು. ಇದನ್ನು ನಷ್ಟ ಎಂದು ಯಾವ ಗಣಿತದ ಲೆಕ್ಕ ಹೇಳುತ್ತದೆ? ಒಂದು ಕಾಲದಲ್ಲಿ ಕೇವಲ 2-3 ಗಂಟೆ ವಿದ್ಯುತ್ ಒದಗಿಸಲು ಸಂಕಷ್ಟ ಪಡುತ್ತಿದ್ದ ರಾಜ್ಯವು 2018ರ ವೇಳೆಗೆ 28,741 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡುವ ಹಂತಕ್ಕೆ ತಲುಪಿತ್ತು. ನಮ್ಮ 5 ವರ್ಷಗಳ ಆಡಳಿತದ ಅವಧಿಯಲ್ಲಿ 13,175 ಮೆ.ವ್ಯಾ.ವಿದ್ಯುತ್ ಉತ್ಪಾದನಾ ಸಾಮಥ್ರ್ಯ ಹೆಚ್ಚಿಸಿದ್ದೆವು ಎಂದು ಅವರು ಹೇಳಿದ್ದಾರೆ.

ರಾಜ್ಯದ ಅಗತ್ಯತೆಗೆ ಸಾಕಾಗಿ, ಹೊರರಾಜ್ಯಗಳಿಗೆ ಮಾರಾಟ ಮಾಡುವಷ್ಟು ವಿದ್ಯುತ್ ಅನ್ನು ನಾವೇ ಉತ್ಪಾದನೆ ಮಾಡುತ್ತಿದ್ದರು, ದುಪ್ಪಟ್ಟು ದರ ನೀಡಿ ಹೊರಗಿನಿಂದ ಖರೀದಿ ಮಾಡುತ್ತಿರುವ ನಿಮ್ಮ ಬಿಜೆಪಿ ಸರಕಾರ ಎಸ್ಕಾಂ ಗಳನ್ನು ಉದ್ಧಾರ ಮಾಡಿದೆ ಎಂಬುದು ತಮಾಷೆಯಾಗಿದೆ. ಸುನೀಲ್ ಕುಮಾರ್ ಅಸಾಮರ್ಥ್ಯಕ್ಕೆ  ತಕ್ಕುದಾಗಿ ರಾಜ್ಯದ ವಿದ್ಯುತ್ ಇಲಾಖೆ ಕೆಲಸ ಮಾಡುತ್ತಿದೆ. ನಾವು ಅಧಿಕಾರಕ್ಕೆ ಬಂದ ಮೇಲೆ ಇಲಾಖೆಯನ್ನು ಲಾಭದ ಹಳಿಗೆ ತಂದು, ರಾಜ್ಯದ ಜನರಿಗೆ ಉಚಿತವಾಗಿ 200 ಯುನಿಟ್ ವಿದ್ಯುತ್ ನೀಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸುನೀಲ್ ಕುಮಾರ್ ಅವರೇ, ನಾವು ನುಡಿದಂತೆ ನಡೆಯುವವರು. ಈ ಬಗ್ಗೆ ಅನುಮಾನವೇ ಬೇಡ. ರಾಜ್ಯದ ಜನರಿಗೆ 200 ಯುನಿಟ್ ಉಚಿತ ಘೋಷಣೆ ಮಾಡಿ, ಕಾರ್ಯಕ್ರಮಕ್ಕೆ ನಿಮ್ಮನ್ನೂ ಆಹ್ವಾನಿಸುತ್ತೇವೆ. ತಪ್ಪದೇ ಬನ್ನಿ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

Similar News