'ಮನೆಗೆ ತೆರಳಿ ಹಬ್ಬ ಮಾಡಿ, ಧರಣಿ ನಾವು ಮುಂದುವರಿಸುತ್ತೇವೆ' ಎಂದು ರೈತರ ಬೆನ್ನಿಗೆ ನಿಂತ ಮಂಡ್ಯದ ಮುಸ್ಲಿಮರು
ಮಂಡ್ಯ: ಕಬ್ಬುದರ ನಿಗದಿ, ಹಾಲಿನ ದರ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಳೆದ 73 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರಿಗೆ ಇಲ್ಲಿನ ಮುಸ್ಲಿಮರು 'ನೀವು ಮನೆಗೆ ತೆರಳಿ ಹಬ್ಬ ಮಾಡಿ, ಧರಣಿಯಲ್ಲಿ ನಾವಿರುತ್ತೇವೆ' ಎಂದು ರೈತರ ಪರವಾಗಿ ಧರಣಿಯನ್ನು ಮುಂದುವರಿಸಿರುವ ಘಟನೆ ನಡೆದಿದೆ.
ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ರೈತಸಂಘದ ಪ್ರಧಾನ ಕಾರ್ಯದರ್ಶಿ ಮಧುಚಂದನ್ ಸಿ., 'ಕಳೆದ 72 ದಿನಗಳಿಂದ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆಗಾಗಿ ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ನಿರಂತರವಾಗಿ ನಡೆಯುತ್ತಿರುವ ಅಹೋ ರಾತ್ರಿ ಧರಣಿ ಹೋರಾಟಕ್ಕೆ ಮಂಡ್ಯದ ಮುಸ್ಲಿಮ್ ಬಾಂಧವರು ಬಂದು ಭಾಗವಹಿಸಿ ಅಲ್ಲಿದ್ದ ನಮ್ಮ ರೈತ ಸಂಘದ ಪದಾಧಿಕಾರಿಗಳನ್ನು ದಯಮಾಡಿ ನೀವು ಮನೆಗೆ ತೆರಳಿ ಹಬ್ಬ ಮಾಡಿ ಇಲ್ಲಿ ನಾವಿರುತ್ತೇವೆ ಎಂದು, ರೈತ ಪರವಾಗಿ ನಿಂತಿದ್ದು ಮಂಡ್ಯ ಮುಸ್ಲಿಮರ ರೈತ ಪರ ನಿಲುವನ್ನು ಎತ್ತಿ ತೋರಿಸಿದೆ' ಎಂದು ಶ್ಲಾಘಿಸಿದ್ದಾರೆ.
'ನಮ್ಮ ರೈತರನ್ನು ಹಬ್ಬ ಮಾಡಲು ಕಳುಹಿಸಿಕೊಟ್ಟು ತಾವು ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮ್ಮ ಅಭೂತಪೂರ್ವ ಬೆಂಬಲವನಿತ್ತ ಸಮಸ್ತ ಮುಸ್ಲಿಂ ಬಾಂಧವರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ' ಎಂದು ಮಧುಚಂದನ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.