ಕೋಲಾರದಲ್ಲಿ ನನ್ನನ್ನು ಸೋಲಿಸಲು BJP-JDS ಒಳ ಸಂಚು ರೂಪಿಸುತ್ತಿವೆ: ಸಿದ್ಧರಾಮಯ್ಯ ಆರೋಪ

Update: 2023-01-21 11:06 GMT

ಮೈಸೂರು: ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಲು ಬಿಜೆಪಿ ಮತ್ತು ಜೆಡಿಎಸ್‌ ಎರಡೂ ಪಕ್ಷಗಳು ಈಗಾಗಲೇ ಒಳಸಂಚು ರೂಪಿಸುತ್ತಿವೆ. ಅವರೇನೇ ಮಾಡಿದರೂ ಅಲ್ಲಿ ಗೆಲ್ಲೋದು ನಾನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದರು.

ಮೈಸೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಬಾದಾಮಿಯಲ್ಲೂ ಇವರು ಇದೇ ರೀತಿ ನನ್ನನ್ನು ಸೋಲಿಸಲು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಶ್ರೀರಾಮುಲು ಅವರನ್ನು ನನ್ನ ವಿರುದ್ಧ ನಿಲ್ಲಿಸಿದರು ಕೊನೆಗೆ ಏನಾಯಿತು?  ಹಾಗೆಯೇ ಕೋಲಾರದಲ್ಲೂ ನನ್ನ ಸೋಲಿಸೋಕೆ ಡಬಲ್ ಇಂಜಿನ್ ಸರ್ಕಾರ ಮತ್ತು ಜೆಡಿಎಸ್ ಒಳಸಂಚು ರೂಪಿಸಿದೆ. ಆದರೂ ನಾನು ಅಲ್ಲಿ ಗೆದ್ದು ಬರುವ ವಿಶ್ವಾಸವಿದೆ ಎಂದರು.

ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್‌ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ನಾವು 130 ರಿಂದ 150 ಸೀಟು ಗೆಲ್ಲುತ್ತೇವೆ. ಭ್ರಷ್ಟಾಚಾರ ತುಂಬಿ ತುಳುಕುತ್ತಿರುವ  ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಜನ ತೀರ್ಮಾನ ಮಾಡಿದ್ದಾರೆ. ಯಾರು ಏನೇ ಮಾಡಿದರೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರೋದನ್ನ ತಪ್ಪಿಸೋಕಾಗಲ್ಲ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಕೋಲಾರದಿಂದ ತನ್ನ ಸ್ಪರ್ಧೆ ಅಂತಿಮವಾಗಿದೆ ಎಂದು ಖಚಿತಪಡಿಸಿದ ಸಿದ್ದರಾಮಯ್ಯ ಈ ಬಗ್ಗೆ ಯಾವುದೇ ಊಹಾಪೂಹ ಬೇಡ ಎಂದರು.   

Similar News