ಜ.24ರಂದು ಶಿವಮೊಗ್ಗದಲ್ಲಿ SYS 30ನೇ ವರ್ಷಾಚರಣೆಯ ಉದ್ಘಾಟನೆ

Update: 2023-01-23 04:34 GMT

ಶಿವಮೊಗ್ಗ, ಜ.23: ಕರ್ನಾಟಕ ರಾಜ್ಯ ಸುನ್ನೀ ಯುಜನ ಸಂಘ(SYS)ದ 30ನೇ ವರ್ಷಾಚರಣೆಯ ಉದ್ಘಾಟನೆ ಹಾಗೂ ರಾಜ್ಯ ಪ್ರತಿನಿಧಿ ಸಂಗಮವು ಜ.24ರಂದು ಬೆಳಗ್ಗೆ 8ರಿಂದ ಸಂಜೆ ಆರು ಗಂಟೆಯ ತನಕ ಶಿವಮೊಗ್ಗದ ಫಲಕ್ ಪ್ಯಾಲೇಸ್ ಸಭಾಂಗಣದಲ್ಲಿ ಮೌಲಾನ ಹೈದರಲಿ ನಿಝಾಮಿ ವೇದಿಕೆಯಲ್ಲಿ ಜರುಗಲಿದೆ.

ನಿರ್ವಹಣಾ ಸಮಿತಿಯ ಅಧ್ಯಕ್ಷ ಸೈಯದ್ ಇಸ್ಮಾಯೀಲ್ ತಂಙಳ್  ಅಧ್ಯಕ್ಷತೆಯಲ್ಲಿ ನಡೆಯುವ ಸಮಾವೇಶವನ್ನು ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಉದ್ಘಾಟಿಸುವರು. ಸೈಯದ್ ಶಹೀದುದ್ದೀನ್ ಅಲ್ ಬುಖಾರಿ ದುಆಗೈಯುವರು.

ವಿವಿಧ ಗೋಷ್ಠಿಗಳಲ್ಲಿ ಕೇರಳ ರಾಜ್ಯ ಎಸ್.ವೈ.ಎಸ್. ಉಪಾಧ್ಯಕ್ಷ ಡಾ.ಅಬ್ದುಸ್ಸಲಾಂ ಮುಸ್ಲಿಯಾರ್ ದೇವರ್ಶೋಲ, ಕರ್ನಾಟಕ ರಾಜ್ಯಾಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನಿ ಕಾಮಿಲ್, ಜಿ.ಎಂ.ಕಾಮಿಲ್ ಸಖಾಫಿ, ಮಾಚಾರ್ ಇಸ್ಮಾಯೀಲ್ ಸ‌ಅದಿ ವಿಷಯ ಮಂಡಿಸುವರು.

ಸಮಾವೇಶದಲ್ಲಿ ಸಂಘಟನೆಯ ಪ್ರಥಮ ಪ್ರಧಾನ ಕಾರ್ಯದರ್ಶಿ 'ಡಾ.ಎಸ್.ಅಬ್ದುರಹ್ಮಾನ್ ಇಂಜಿನಿಯರ್ ಪ್ರಶಸ್ತಿ'ಯನ್ನು ಹೆಸರಾಂತ ಉದ್ಯಮಿ, ದಾನಿಯೂ ಸುನ್ನೀ ಉಮರಾ ಮುಂದಾಳುವೂ ಆದ ಹಾಜಿ ಎಸ್.ಮುಹಮ್ಮದ್ ಸಾಗರ ಅವರಿಗೆ ಪ್ರದಾನ ಮಾಡಲಾಗುವುದು.

ಕಾರ್ಯಕ್ರಮದಲ್ಲಿ ರಾಜ್ಯ ಗೃಹಸಚಿವ ಆರಗ ಜ್ಞಾನೆಂದ್ರ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಕರ್ನಾಟಕ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಶಾಫಿ ಸ‌ಅದಿ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಸಂಜೆ ಶಿವಮೊಗ್ಗ ಬಸ್ ನಿಲ್ದಾಣದ ತನಕ ಸಾಮರಸ್ಯ ನಡಿಗೆಯೊಂದಿಗೆ ಸಮಾವೇಶ ಸಮಾಪನಗೊಳ್ಳಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಒಂದು ಸಾವಿರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆಂದು ಎಸ್.ವೈ.ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಫೀಲ್ ಸ‌ಅದಿ ಕೊಳಕೇರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News