ಬಿಹಾರದಲ್ಲಿ ವ್ಯಕ್ತಿಯ ಥಳಿಸಿ ಹತ್ಯೆ ಪ್ರಕರಣ: ಎಂಟು ಮಂದಿಯ ಬಂಧನ

Update: 2023-05-14 16:16 GMT

ಮಲಪ್ಪುರಂ, ಮೇ 14: ಕಳ್ಳನೆಂಬ ಶಂಕೆಯಲ್ಲಿ ಯುವಕನೋರ್ವನನ್ನು ಥಳಿಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಕೇರಳ ಪೊಲೀಸರು 8 ಮಂದಿಯನ್ನು ರವಿವಾರ ಬಂಧಿಸಿದ್ದಾರೆ. 

ಕೊಂಡೊಟ್ಟಿಯ ಸಮೀಪ ಮನೆಯೊಂದರಲ್ಲಿ  ರಾಜೇಶ್ ಮಾಂಜಿ (36) ಕಳವುಗೈಯಲು ಪ್ರಯತ್ನಿಸಿದ್ದ ಎಂದು ಆರೋಪಿಸಲಾಗಿದೆ. ಈ ಸಂದರ್ಭ ಮನೆಯ ಸನ್‌ಶೇಡ್‌ನಿಂದ ಕೆಳಗೆ ಬಿದ್ದಿದ್ದ ಆತನನ್ನು  ಸ್ಥಳೀಯರು ಸೆರೆ ಹಿಡಿದು ಥಳಿಸಿದ್ದರು. ಅಲ್ಲದೆ, ಸಿಸಿಟಿವಿ ದೃಶ್ಯಾವಳಿಯನ್ನು ನಾಶ ಮಾಡಲು ಪ್ರಯತ್ನಿಸಿದ್ದರು. ಆದರೆ, ಅದು ಯಶಸ್ವಿಯಾಗಿರಲಿಲ್ಲ. 

ರಾಜೇಶ್ ಮಾಂಜಿಯನ್ನು ಮೃತಪಟ್ಟ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆ ತರಲಾಗಿತ್ತು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ರಾಜೇಶ್ ಮಾಂಜಿಗೆ ಪ್ಲಾಸ್ಟಿಕ್ ಪೈಪ್ ಹಾಗೂ ದೊಣ್ಣೆಯಿಂದ ಥಳಿಸಲಾಗಿತ್ತು ಎಂದು ಹೇಳಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ತನಿಖಾ ತಂಡವೊಂದನ್ನು ರೂಪಿಸಲಾಗಿತ್ತು. ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಕಳವು ನಡೆಸುವ ಉದ್ದೇಶದಿಂದ ರಾಜೇಶ್ ಮಾಂಜಿ ಆ  ಸ್ಥಳದಲ್ಲಿ ಇದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ರಾಜೇಶ್ ಮಾಂಜಿಗೆ ಹಲ್ಲೆ ನಡೆಸಿರುವುದಕ್ಕೆ ಪುರಾವೆಗಳು ಇವೆ. ಎಲ್ಲ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.  ಸಾಕ್ಷ್ಯ ನಾಶದ ಆರೋಪದಲ್ಲಿ ಓರ್ವನನ್ನು ಬಂಧಿಸಲಾಗಿದೆ ಎಂದು ಮಲಪ್ಪುರಂ ಪೊಲೀಸ್ ವರಿಷ್ಠ ಸುಜಿತ್ ದಾಸ್ ತಿಳಿಸಿದ್ದಾರೆ.

Similar News