ಓಲಾ ಕ್ಯಾಬ್ಸ್ ಸಂಸ್ಥೆಯಿಂದ 200 ಮಂದಿ ವಜಾ : ನೆರವು ನೀಡಲು ಮಾಜಿ ಸಚಿವ ಸುರೇಶ್‍ ಕುಮಾರ್ ಒತ್ತಾಯ

Update: 2024-05-02 16:37 GMT

ಬೆಂಗಳೂರು: ಕಾರ್ಮಿಕ ದಿನಾಚರಣೆಗೆ 2 ದಿನಗಳ ಮುಂಚೆ ಕೋರಮಂಗಲದ ಓಲಾ ಕ್ಯಾಬ್ಸ್ ಸಂಸ್ಥೆಯು 200 ಸಿಬ್ಬಂದಿಯನ್ನು ಏಕಾಏಕಿ ಕೆಲಸದಿಂದ ತೆಗೆದಿದ್ದು, ಈ ನಿರುದ್ಯೋಗಿಗಳಿಗೆ ಸರಕಾರ ನೆರವಾಗಬೇಕು ಎಂದು ಮಾಜಿ ಸಚಿವ, ಶಾಸಕ ಸುರೇಶ್‍ಕುಮಾರ್, ಕಾರ್ಮಿಕ ಸಚಿವ ಸಂತೋಷ್ ಲಾಡ್‍ಗೆ ಗುರುವಾರ ಪತ್ರ ಬರೆದಿದ್ದಾರೆ.

ಯಾವುದೇ ತಪ್ಪು ಮಾಡದೆ ಬೀದಿಗೆ ಬಿದ್ದಿರುವ ಈ 200 ಕುಟುಂಬಗಳಿಗೆ ಸರಕಾರ ನೆರವು ನೀಡಬೇಕು. ಎಲ್ಲರನ್ನೂ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ, ಸೂಕ್ತ ಪರಿಹಾರವನ್ನು ನೀಡಿ, ಅವರಿಗೆ ಗೌರವದ ವಿದಾಯ ನೀಡಬೇಕು. ಇದೇ ರೀತಿಯ ಕಾರ್ಮಿಕ ವಿರೋಧಿ ಪ್ರಕರಣಗಳು, ನಗರದಲ್ಲಿ ಹೆಚ್ಚಾಗುತ್ತಿವೆ. ಇಂತಹ ಘಟನೆಗಳ ವಿರುದ್ಧ ಸರಕಾರ ಕ್ರಮ ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಏನೂ ಕಾರಣ ನೀಡದೇ ಖಾಸಗಿ ಸಂಸ್ಥೆ ತನ್ನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ಕೈಬಿಡುವ ಮೂಲಕ ಕಾರ್ಮಿಕ ಕಾಯ್ದೆಯ ಎಲ್ಲ ನಿಯಮಗಳನ್ನು ಉಲ್ಲಂಘಿಸಿದೆ. ಇದರಿಂದ ಆ ಸಿಬ್ಬಂದಿಯ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಸರಕಾರ ಕೂಡಲೇ ಅವರ ನೆರವಿಗೆ ಬರಬೇಕು ಎಂದು ಅವರು ಹೇಳಿದ್ದಾರೆ.

ಭಾರತ ಸೇರಿದಂತೆ ವಿಶ್ವದಾದ್ಯಂತ ಮೇ 1 ರಂದು ಕಾರ್ಮಿಕ ದಿನವನ್ನು ಆಚರಣೆ ಮಾಡಲಾಗುತ್ತದೆ. ಕಾರ್ಮಿಕರ ಕಲ್ಯಾಣದ ದೃಷ್ಟಿಯಿಂದ ಆ ದಿನವನ್ನು ಗುರುತಿಸಲಾಗಿದೆ. ಅವರಲ್ಲಿ ಆತ್ಮವಿಶ್ವಾಸ ತುಂಬಿಸುವ ಉದ್ದೇಶದಿಂದ ರೂಪಿಸಿರುವ ಕಾರ್ಯಕ್ರಮ ಇದಾಗಿದೆ. ಇಂತಹ ವಿಶೇಷ ದಿನಕ್ಕೂ ಮೊದಲು ಉದ್ಯೋಗಿಗಳನ್ನು ಖಾಸಗಿ ಸಂಸ್ಥೆ ಬಿಡುಗಡೆ ಮಾಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News