ಅನಿವಾಸಿ ಕನ್ನಡಿಗರ ಕಲ್ಯಾಣಕ್ಕೆ 100 ಕೋಟಿ. ರೂ ಅನುದಾನ, ಪ್ರತ್ಯೇಕ ಸಚಿವಾಲಯಕ್ಕೆ ಆಗ್ರಹ

Update: 2024-02-21 14:01 GMT

ಬೆಂಗಳೂರು: ಅನಿವಾಸಿ ಕನ್ನಡಿಗರ ಕಲ್ಯಾಣಕ್ಕಾಗಿ 100 ಕೋಟಿ.ರೂ ಅನುದಾನ ಹಾಗೂ ಅವರ ಸಮಸ್ಯೆಗಳ ನಿವಾರಣೆಗೆ ಪ್ರತ್ಯೇಕ ಸಚಿವಾಲಯದ ಸ್ಥಾಪನೆಗೆ ಆಗ್ರಹಿಸಿ ಅನಿವಾಸಿ ಕನ್ನಡಿಗರ ನಿಯೋಗ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಅವರ ವಿಶೇಷ ಆಹ್ವಾನದ ಮೇರೆಗೆ ಆಗಮಿಸಿದ 15ಕ್ಕೂ ಅಧಿಕ ದೇಶಗಳ ಅನಿವಾಸಿ ಕನ್ನಡಿಗರ ನಿಯೋಗವು ಅನಿವಾಸಿ ಕನ್ನಡಿಗರ ಹಲವು ಬೇಡಿಕೆಗಳನ್ನು ಈಡೇರಿಸಲು ವಿಧಾನಸೌಧದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಮನವಿ ಸಲ್ಲಿಸಿತು.

ರಾಜ್ಯ ಸರಕಾರದ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರ ನೇತೃತ್ವದಲ್ಲಿ ಅಮೇರಿಕಾ, ಕೆನಡಾ, ಆಸ್ಟ್ರೇಲಿಯಾ, ಯುಎಇ, ಖತರ್, ದುಬೈ, ಕುವೈತ್, ಒಮನ್, ಮಸ್ಕತ್, ಬಹರೇನ್ ಸಹಿತ ಹಲವು ದೇಶಗಳ ಅನಿವಾಸಿ ಕನ್ನಡಿಗರ ನಿಯೋಗವು ಸಿಎಂ ಸಿದ್ದರಾಮಯ್ಯ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಹಕಾರ ಸಚಿವ ರಾಜಣ್ಣ, ವಸತಿ ಸಚಿವ ಝಮೀರ್ ಅಹ್ಮದ್ ಖಾನ್, ವಿಧಾನ ಪರಿಷತ್ತಿನ ಸದಸ್ಯ ಬಿ.ಕೆ. ಹರಿಪ್ರಸಾದ್, ಮಾಜಿ ಸಿಎಂ ಕುಮಾರಸ್ವಾಮಿ ಸಹಿತ ಹಲವರನ್ನು ಭೇಟಿ ಮಾಡಿ ಅನಿವಾಸಿ ಕನ್ನಡಿಗರ ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡಿದೆ. ಬಳಿಕ ನಿಯೋಗದ ಸದಸ್ಯರು ವಿಧಾನಮಂಡಲ ಅಧಿವೇಶನವನ್ನು ಸಭಾಧ್ಯಕ್ಷರ ಗ್ಯಾಲರಿಯಿಂದ ವೀಕ್ಷಿಸಿದರು.

5 ವರ್ಷಗಳಿಂದ ನಿಷ್ಕ್ರಿಯಗೊಂಡಿದ್ದ ಎನ್.ಆರ್.ಐ ಕೋಶ:

ಕಳೆದ 5 ವರ್ಷಗಳಿಂದ ರಾಜ್ಯ ಸರಕಾರದ ಎನ್‌ಆರ್‌ಐ ಕೋಶದ ಹುದ್ದೆಗಳು ಖಾಲಿಯಾಗಿದ್ದವು, ಅಲ್ಲದೇ ಕೋಶವು ನಿಷ್ಕ್ರಿಯವಾಗಿತ್ತು. ಇದರಿಂದ ಅನಿವಾಸಿ ಕನ್ನಡಿಗ ಕಾರ್ಮಿಕರು ತೀರಾ ಸಂಕಷ್ಟವನ್ನು ಅನುಭವಿಸಬೇಕಾಯಿತು. ಆದ್ದರಿಂದ ಕನ್ನಡಿಗರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವುದು ಅಗತ್ಯವಿದೆ ಎಂದು ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಹೇಳಿದ್ದಾರೆ.

ಪ್ರತ್ಯೇಕ ಬಜೆಟ್ ಅಗತ್ಯ:

ಅನಿವಾಸಿ ಕನ್ನಡಿಗರಿಗೆ ಹಲವು ಸಮಸ್ಯೆಗಳಿವೆ. ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಒದಗಿಸದ ಕಾರಣ 100 ಕೋಟಿ. ರೂ.ಗಳ ಅನುದಾನವನ್ನು ಒದಗಿಸಿಕೊಂಡಬೇಕೆಂಬ ಮನವಿಯನ್ನು ಮುಖ್ಯಮಂತ್ರಿಗಳಿಗೆ ನೀಡಲಾಗಿದೆ. ಅಲ್ಲದೇ ಶೀಘ್ರದಲ್ಲೇ ಅನುದಾನವನ್ನು ಬಿಡುಗಡೆಗೊಳಿಸಿ ತಕ್ಷಣ ಅವರ ಸಮಸ್ಯೆಗಳನ್ನು ಪರಿಹಾರ ಮಾಡಬೇಕೆಂದು ತಿಳಿಸಿದ್ದೇವೆ. ಈ ನಿಟ್ಟಿನಲ್ಲಿ ಅನಿವಾಸಿ ಕನ್ನಡಿಗರ ನಿಯೋಗದ ಸದಸ್ಯರು ವಿವಿಧ ದೇಶಗಳಿಂದ ಆಗಮಿಸಿದ್ದಾರೆ ಎಂದು ಡಾ. ಆರತಿ ಕೃಷ್ಣ ಹೇಳಿದರು.

ಅನಿವಾಸಿಗರಿಗೆ ಸರಕಾರ ಭರವಸೆ:

ಗಲ್ಫ್ ರಾಷ್ಟ್ರಗಳಿಂದ ಅನಿವಾಸಿ ಕನ್ನಡಿಗರ ಮನವಿಗೆ ಸರಕಾರದಿಂದ ಸಕರಾತ್ಮಕ ಸ್ಪಂದನೆ ಸಿಕ್ಕಿದೆ. ಕೇರಳ ಮಾದರಿಯಂತೆ ರಾಜ್ಯದಲ್ಲೂ ಎನ್‌ಆರ್‌ಐ ಗಳಿಗೆ ಪ್ರತ್ಯೇಕ ಸಚಿವಾಲಯದ ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ರಾಜ್ಯದ ಯುವಜನತೆಗೆ ಗಲ್ಫ್ ರಾಷ್ಟ್ರಗಳಲ್ಲಿ ಹೆಚ್ಚೆಚ್ಚು ಉದ್ಯೋಗ ಸಿಗುವಂತೆ ಆಗಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ಸೌದಿ ಅರೇಬಿಯಾದ ಅಲ್ ಮುಝೈನ್ ಸಂಸ್ಥೆಯ ಸಿಇಒ ಝಕರಿಯ ಜೋಕಟ್ಟೆ ಹೇಳಿದರು.

ಕನ್ನಡಿಗರಿಗೆ ಗಲ್ಫ್ ನಲ್ಲಿ ಉದ್ಯೋಗ, ಶಿಕ್ಷಣ:

ಬಹರೇನ್ ಕನ್ನಡ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಮತ್ತು ಪರಂಪರೆಯ ಅಧ್ಯಯನ ಕೇಂದ್ರ ಹಾಗೂ ಗಲ್ಫ್ ಮತ್ತು ಭಾರತ ಸಂಬಂಧಗಳ ಕುರಿತು ಭಾರತೀಯ ವಿದ್ಯಾರ್ಥಿಗಳಿಗೆ ಸಂಶೋಧನಾ ಕೇಂದ್ರದ ಸ್ಥಾಪನೆಯಾಗಬೇಕಾಗಿದೆ. ಕೌಶಲ್ಯ ಆಭಿವೃದ್ಧಿ ಸೌಲಭ್ಯಗಳನ್ನು ಒದಗಿಸುವುದರಿಂದ ಗಲ್ಫ್ ರಾಷ್ಟ್ರಗಳಲ್ಲಿ ರಾಜ್ಯದ ಯುವಜನತೆಗೆ ಉದ್ಯೋಗದ ಅವಕಾಶಗಳನ್ನು ಕಲ್ಪಿಸಿ ಕೊಡಲು ಸಹಕಾರಿಯಾಗಿದೆ ಎಂದು ಬಹರೈನ್ ಕನ್ನಡ ಸಂಘದ ಅಧ್ಯಕ್ಷ ಅಮರನಾಥ್ ರೈ ತಿಳಿಸಿದರು.

ತಾಯ್ನಾಡಿಗೆ ಪಾರ್ಥಿವ ಶರೀರ ತರಲು ಹರಸಾಹಸ:

ತಾಯ್ನಾಡಿನಿಂದ ಗಲ್ಫ್ ರಾಷ್ಟ್ರಗಳಿಗೆ ಉದ್ಯೋಗಕ್ಕಾಗಿ ಬರುತ್ತಿರುವ ಕಾರ್ಮಿಕರು ಮೃತಪಟ್ಟರೆ ಅವರ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ಸಾಗಿಸಲು ಅತ್ಯಂತ ಕಷ್ಟಕರ ಸನ್ನಿವೇಶವನ್ನು ಅನುಭವಿಸಬೇಕಾಗಿದೆ. ಕೆಲವೊಮ್ಮೆ ದಾಖಲೆ ಸಂಬಂಧ ತಿಂಗಳುಗಟ್ಟಲೇ ಅಲೆದಾಟ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ಅನಿವಾಸಿಗಳಿಗೆ ಪ್ರತ್ಯೇಕ ಉನ್ನತ ಸಮಿತಿಯನ್ನು ಸರಕಾರ ರಚಿಸಬೇಕಾಗಿದೆ ಎಂದು ಅಮರನಾಥ್ ರೈ ಆಗ್ರಹಿಸಿದರು.

ನಿಯೋಗದಲ್ಲಿ ಮುಹಮ್ಮದ್ ಮನ್ಸೂರ್ ಬಹರೇನ್, ರಮಾನಂದ್ ಪ್ರಭು ಮಸ್ಕತ್, ಅಡ್ವಕೇಟ್ ಇಬ್ರಾಹೀಂ ಖಲೀಲ್ ಯುಎಇ, ಹಿದಾಯತ್ ಅಡ್ಡೂರು ದುಬೈ, ಎನ್‌ಆರ್‌ಐ ಒಕ್ಕಲಿಗ ಬ್ರಿಗೇಡ್‌ನ ಅಧ್ಯಕ್ಷ ನಂಜೇಗೌಡ ನಂಜುಂಡ, ಖತರ್ ಕನ್ನಡ ಸಂಘದ ಅಧ್ಯಕ್ಷ ಮಹೇಶ್ ಗೌಡ, ಮುಹಮ್ಮದ್ ಫೀರೊಝ್ ಕಲ್ಲಡ್ಕ ಸಹಿತ ಹಲವು ಅನಿವಾಸಿ ಕನ್ನಡಿಗರು ಇದ್ದರು.

ಅನಿವಾಸಿಗಳ ಸಂಕಷ್ಟಕ್ಕೆ ಪಕ್ಷಾತೀತವಾಗಿ ಸೇವೆ:

ಲಾಕ್‌ಡೌನ್‌ನಲ್ಲಿ ಅನಿವಾಸಿ ಕನ್ನಡಿಗ ವಿದ್ಯಾರ್ಥಿಗಳು, ಕಾರ್ಮಿಕರಿಗೆ ಹಲವು ರೀತಿಯಲ್ಲಿ ಸಂಕಷ್ಟ ಎದುರಾಗಿತ್ತು. ಆದರೆ ಮುಂಬರುವ ದಿನಗಳಲ್ಲಿ ಯಾವುದೇ ಅನಿವಾಸಿ ಕನ್ನಡಿಗರು ಗಲ್ಫ್ ರಾಷ್ಟ್ರಗಳಲ್ಲಿ ನೆಮ್ಮದಿಯ ಜೀವನ ಸಾಗಿಸುವಂತಾಗಬೇಕು. ಈ ಬಗ್ಗೆ ಪಕ್ಷತೀತವಾಗಿ ಎಲ್ಲಾ ಪಕ್ಷಗಳ ಶಾಸಕರು ಕೈಜೋಡಿಸಿದ್ದಾರೆ.

 ಲಕ್ಷ್ಮೀ ಬೀದರ್ ಅನಿವಾಸಿ ಕನ್ನಡತಿ, ಖತರ್

 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News