2025ರ ಡಿಸೆಂಬರ್ ವೇಳೆಗೆ ಉಪನಗರ ರೈಲು ಯೋಜನೆಯ ಮೊದಲ ಮಾರ್ಗ ಪೂರ್ಣ: ಸಚಿವ ಎಂ.ಬಿ.ಪಾಟೀಲ್

Update: 2024-03-16 14:26 GMT

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯ ಮೊದಲ ಭಾಗವಾದ ಚಿಕ್ಕಬಾಣಾವರ-ಯಶವಂತಪುರ ನಡುವಿನ 7.4 ಕಿ.ಮೀ. ಮಾರ್ಗದಲ್ಲಿ 2025ರ ಡಿಸೆಂಬರ್ ವೇಳೆಗೆ ರೈಲು ಸಂಚಾರ ಆರಂಭವಾಗಲಿದ್ದು, ಇದರಲ್ಲಿ ದೇಶದಲ್ಲೇ ಅತಿ ಉದ್ದದ ಗರ್ಡರ್ ಬಳಸಲಾಗುತ್ತಿದೆ ಎಂದು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ಶನಿವಾರ ದೇಶದಲ್ಲೇ ಅತಿ ಉದ್ದದ (100 ಅಡಿ ಅಥವಾ 31 ಮೀಟರ್) ಯು-ಗರ್ಡರ್ ನಿರ್ಮಾಣ ಪ್ರಕ್ರಿಯೆಯನ್ನು ವೀಕ್ಷಿಸಲು ದೇವನಹಳ್ಳಿ ಬಳಿಯ ಗೊಲ್ಲಹಳ್ಳಿಯ ಕ್ಯಾಸ್ಟಿಂಗ್ ಕಾರ್ಯಾಗಾರಕ್ಕೆ ಭೇಟಿ ನೀಡಿದ ಅವರು ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಎಂಜಿನಿಯರಿಂಗ್ ಅದ್ಭುತ ಎನ್ನಲಾಗಿರುವ ಈ 100 ಅಡಿ ಉದ್ದದ ಯು-ಗರ್ಡರ್ ಅನ್ನು ದೇಶದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರು ಉಪನಗರ ರೈಲು ಯೋಜನೆಗೆ ಬಳಸಲಾಗುತ್ತಿದೆ. ಮಲ್ಲಿಗೆ ಕಾರಿಡಾರ್ ನ (ನಂಬರ್ 2) ಭಾಗವಾದ ಹೆಬ್ಬಾಳ- ಯಶವಂತಪುರದ 8 ಕಿಮೀ ನಡುವೆ ಇಂತಹ ಸುಮಾರು 450 ಯು-ಗರ್ಡರ್ ಗಳನ್ನು ಬಳಸಲಾಗುತ್ತದೆ ಎಂದು ಅವರು ಹೇಳಿದರು.

ಎಲ್ ಅಂಡ್ ಟಿ ಕ್ಯಾಸ್ಟಿಂಗ್ ಯಾರ್ಡ್ ನಲ್ಲಿ ಐ-ಗರ್ಡರ್ ಮತ್ತು ಫೈಯರ್ ಕ್ಯಾಪ್ ಗಳನ್ನು ಕ್ಯಾಸ್ಟಿಂಗ್ ಮಾಡಲಾಗುತ್ತದೆ. ಮೇಲಿನ ಮಾರ್ಗದಲ್ಲಿ ಇಂತಹ 323 ಐ-ಗರ್ಡರ್, 283 ಫೈಯರ್ ಕ್ಯಾಪ್ ಗಳನ್ನು ಬಳಸಲಾಗುತ್ತದೆ. ಇದರಿಂದ ವಯಾಡಕ್ಟ್ ಕೂರಿಸಲು ಹಿಡಿಯುವ ಸಮಯವನ್ನು ಕಡಿಮೆಗೊಳಿಸುತ್ತದೆ, ನೋಡುವುದಕ್ಕೆ ಸುಂದರವಾಗಿರುತ್ತದೆ, ಬಾಳಿಕೆಯ ಅವಧಿ ಹೆಚ್ಚುತ್ತದೆ ಹಾಗೂ ಹಣ ಉಳಿತಾಯವೂ ಆಗುತ್ತದೆ ಎಂದು ಅವರು ವಿವರಿಸಿದರು.

ಉಪನಗರ ರೈಲು ಯೋಜನೆಗೆ ಸಂಬಂಧಿಸಿದಂತೆ ಈವರೆಗೆ ಶೇ.20ರಷ್ಟು ಕಾಯಂ ಕಾಮಗಾರಿಗಳು ಮುಗಿದಿವೆ. ಕಾರಿಡಾರ್-2ರಲ್ಲಿ (ಚಿಕ್ಕಬಾಣಾವರ-ಬೆನ್ನಿಗಾನಹಳ್ಳಿ) ಅಗತ್ಯವಿರುವ 120.44 ಎಕರೆ ಭೂಮಿಯ ಪೈಕಿ 119.18 ಎಕರೆ ಜಮೀನು (ಶೇ.98.5 ರಷ್ಟು) ಈಗಾಗಲೇ ಸ್ವಾಧೀನಗೊಂಡಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

ಕಾರಿಡಾರ್-2ರಲ್ಲಿ ಉತ್ತಮವಾಗಿ ಕೆಲಸ ನಡೆಯುತ್ತಿದೆ. ನಾಗರಿಕ ಸೇವೆಗಳನ್ನು ಸ್ಥಳಾಂತರಿಸುವ ಬಗ್ಗೆ ಬಿಬಿಎಂಪಿ, ಬಿಡಿಎ, ಜಲಮಂಡಳಿ, ಬೆಸ್ಕಾಂ, ಬಿಎಸ್‍ಎನ್‍ಎಲ್ ಹಾಗೂ ಇನ್ನಿತರ ಖಾಸಗಿ ಸಂಸ್ಥೆಗಳ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಕೆಂಗೇರಿ-ವೈಟ್ ಫೀಲ್ಡ್ ಕಾರಿಡಾರ್ ನಲ್ಲಿ ಕೆಂಗೇರಿ-ಕಂಟೋನ್ಮೆಂಟ್ ನಡುವೆ ಉಪನಗರ ಯೋಜನೆ ಜಾರಿಗೆ ಯಾವ ಆತಂಕವೂ ಇಲ್ಲ. ಆದರೆ ಕಂಟೋನ್ಮೆಂಟ್-ವೈಟ್ ಫೀಲ್ಡ್ ನಡುವೆ ಜಾಗದ ಸಮಸ್ಯೆ ಇದ್ದು, ಇಲ್ಲಿ ಎತ್ತರಿಸಿದ ಮಾರ್ಗ ನಿರ್ಮಿಸಬೇಕೆ ಅಥವಾ ಬೇರೆ ಯಾವ ರೀತಿಯಲ್ಲಿ ಯೋಜನೆ ಅನುಷ್ಠಾನ ಮಾಡಬಹುದು ಎಂಬುದರ ಬಗ್ಗೆ ರೈಲ್ವೆ ಜತೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

ಒಟ್ಟಾರೆ, 15,677 ಕೋಟಿ ರೂ. ಯೋಜನೆಯ ನಾಲ್ಕೂ ಕಾರಿಡಾರ್ ಗಳ 148.17 ಕಿ.ಮೀ. ವ್ಯಾಪ್ತಿಯಲ್ಲಿ 2027ರ ಡಿಸೆಂಬರ್‍ಗೆ ಕಾಮಗಾರಿ ಮುಗಿಯಲಿದೆ. ಈ ಗುರಿಗೆ ಪೂರಕವಾಗಿ ರೈಲ್ವೆ ಇಲಾಖೆಯು ಸಿ-1 ಮತ್ತು ಸಿ-3 ಕಾರಿಡಾರ್ ಗಳ ಕಾಮಗಾರಿಗಾಗಿ ಒತ್ತುವರಿ ತೆರವುಗೊಳಿಸಿದ ಭೂಮಿಯನ್ನು ನಮಗೆ ಹಸ್ತಾಂತರಿಸಬೇಕು ಹಾಗೂ ಡಿಪಿಆರ್ ನಲ್ಲಿ ಇರುವಂತೆ ಅಲೈನ್ಮೆಂಟಿಗೆ ಅನುಮತಿ ನೀಡಬೇಕು ಎಂದು ಅವರು ಕೋರಿದರು.

ರೈಲ್ವೆ ಇಲಾಖೆಯು ಮುಂಬರುವ ವರ್ಷಗಳಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ವರ್ತುಲ ರೈಲ್ವೆ ಯೋಜನೆಗೆ ಉಪನಗರ ರೈಲು ಯೋಜನೆಯನ್ನು ಸಂಪರ್ಕಿಸುವ ಜೊತೆಗೆ ಅದನ್ನು ಬೆಂಗಳೂರು ಸುತ್ತಲ ಉಪನಗರಗಳಿಗೆ ವಿಸ್ತರಿಸುವ ಬಗ್ಗೆಯೂ ಕೆ-ರೈಡ್ ಈಗಾಗಲೇ ಚಿಂತನೆ ನಡೆಸುತ್ತಿದೆ. ಇದರ ಬಗ್ಗೆ ರೈಲ್ವೆ ಇಲಾಖೆ ಜೊತೆ ಚರ್ಚಿಸಿ ಮನವರಿಕೆ ಮಾಡಿಕೊಡಲಾಗುವುದು ಎಂದು ಎಂ.ಬಿ.ಪಾಟೀಲ್ ಹೇಳಿದರು. ಈ ಸಂದರ್ಭದಲ್ಲಿ ಕೆ- ರೈಡ್ ವ್ಯವಸ್ಥಾಪಕ ನಿರ್ದೇಶಕಿ ಡಾ.ಎನ್.ಮಂಜುಳಾ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News