ಬೆಂಗಳೂರು | ಎರಡು ವರ್ಷದ ಮಗುವನ್ನು ಕೊಲೆಗೈದು ಆತ್ಮಹತ್ಯೆಗೆ ಯತ್ನಿಸಿದ ತಾಯಿ!

.

Update: 2024-03-20 14:33 GMT

ಬೆಂಗಳೂರು: ಅನಾರೋಗ್ಯ ಸಮಸ್ಯೆ ಹಾಗೂ ಪತಿಯೊಂದಿಗಿನ ಮನಸ್ತಾಪದಿಂದ ಬೇಸತ್ತು ಗೃಹಿಣಿಯೊಬ್ಬರು ತನ್ನ ಎರಡು ವರ್ಷದ ಮಗುವನ್ನು ಕೊಲೆಗೈದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಲ್ಲಿನ ಕೆ.ಆರ್.ಪುರಂನ ಸೀಗೇಹಳ್ಳಿಯಲ್ಲಿ ವರದಿಯಾಗಿದೆ.

ಮಾ.17ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಗು ಶೃತಿಕಾಳನ್ನು(2) ಕೊಲೆಗೈದ ತಾಯಿ ಚಿನ್ನಾ ಎಂಬುವರು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದು, ಪತಿ ಲಕ್ಷ್ಮೀನಾರಾಯಣ ನೀಡಿದ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಕೆ.ಆರ್.ಪುರಂ ಠಾಣಾ ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಆಂಧ್ರಪ್ರದೇಶದ ಚಿತ್ತೂರು ಮೂಲದವರಾದ ಈ ದಂಪತಿ, ಮೂರು ತಿಂಗಳ ಹಿಂದಷ್ಟೇ ಕೆ.ಆರ್.ಪುರಂನ ಸೀಗೇಹಳ್ಳಿಯಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು ವಾಸವಾಗಿದ್ದರು. ಅನಾರೋಗ್ಯ ಹಾಗೂ ಕೌಟುಂಬಿಕ ಸಮಸ್ಯೆಗಳಿಂದ ಮಾನಸಿಕವಾಗಿ ನೊಂದಿದ್ದ ಚಿನ್ನಾ ‘ಮಗುವನ್ನು ಸಾಯಿಸಿ, ತಾನೂ ಸಹ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದಿದ್ದರಂತೆ. ಈ ಸಂದರ್ಭದಲ್ಲಿ ಲಕ್ಷ್ಮೀನಾರಾಯಣ ಬುದ್ದಿವಾದ ಹೇಳಿದ್ದಾರೆ.

ಮಾ.17ರಂದು ಬೆಳಗ್ಗೆ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ತೆರಳಿದ್ದಾಗ ಮಗುವನ್ನು ಉಸಿರುಗಟ್ಟಿಸಿ ಕೊಂದಿರುವ ಚಿನ್ನಾ ಬಳಿಕ ತಾನೂ ಸಹ ಚಾಕುವಿನಿಂದ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಘಟನೆಗೂ ಮುನ್ನ ಕರೆ ಮಾಡಿ ಸಾಯುವುದಾಗಿ ತಿಳಿಸಿದ್ದರಿಂದ ಎಚ್ಚೆತ್ತುಕೊಂಡ ಆಕೆಯ ತಾಯಿ ತಕ್ಷಣ ಅಳಿಯ ಲಕ್ಷ್ಮೀನಾರಾಯಣಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಅಕ್ಕಪಕ್ಕದವರ ನೆರವಿನಿಂದ ಮನೆಯ ಬಾಗಿಲು ಒಡೆದು ನೋಡಿದಾಗ, ಚಿನ್ನಾ ತನ್ನ ಮಗುವನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿರುವುದು ಕಂಡುಬಂದಿದೆ. ತಕ್ಷಣ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ಮಗು ಮತ್ತು ತಾಯಿ ಇಬ್ಬರಿಗೂ ಅನಾರೋಗ್ಯ ಸಮಸ್ಯೆ ಇತ್ತು. ಪತಿಯೊಂದಿಗಿನ ಮನಸ್ತಾಪ ಕೂಡ ಇತ್ತು. ಇದರಿಂದ ಬೇಸತ್ತು ತಾಯಿ ಚಿನ್ನಾ ತನ್ನ ಎರಡು ವರ್ಷದ ಮಗು ಶೃತಿಕಾಳನ್ನು ಕೊಲೆ ಮಾಡಿ ತಾನು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ದೂರು ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ಡಾ.ಶಿವಕುಮಾರ್ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News