ಬೆಂಗಳೂರಿನಲ್ಲಿ ಪಶ್ಚಿಮ ಘಟ್ಟಗಳ ಘಮಲು; ಸಹ್ಯಾದ್ರಿಯ 132 ಸಸ್ಯ ಪ್ರಭೇದಕ್ಕೆ ಸಾಕ್ಷಿಯಾಗಲಿದೆ ಲಾಲ್‍ಬಾಗ್

Update: 2023-08-02 08:24 GMT

ಬೆಂಗಳೂರು, ಆ.2: ಬ್ರಿಟೀಷ್ ಆಳ್ವಿಕೆಯಲ್ಲಿ ಪ್ರಾರಂಭಗೊಂಡ ದಿನದಿಂದಲೂ ಬೆಂಗಳೂರಿನ ಲಾಲ್‍ಬಾಗ್‍ಗೆ ಕಾಲಕಾಲಕ್ಕೆ ದೇಶ–ವಿದೇಶಗಳ ಸಸ್ಯಪ್ರಬೇಧಗಳನ್ನು ಪರಿಚಯಿಸುವ ಕಾರ್ಯ ನಡೆಯುತ್ತಿದೆ. ಅದರಂತೆ ಆಗಸ್ಟ್ 4ರಿಂದ 15ವರೆಗೆ ನಡೆಯುತ್ತಿರುವ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ರಾಜ್ಯ ಅಮೂಲ್ಯ ಸಂಪತ್ತಾದ ಮಲೆನಾಡಿನ ಪಶ್ಚಿಮ ಘಟ್ಟಗಳ ಸಸ್ಯ ಪ್ರಭೇದವನ್ನು ಹೊತ್ತು ತರಲಾಗಿದ್ದು, ಸಹ್ಯಾದ್ರಿಯ 132 ಸಸ್ಯ ಪ್ರಭೇದಕ್ಕೆ ಸೇರುವ 450 ಸಸಿಗಳನ್ನು ಇದೇ ಮೊದಲ ಬಾರಿಗೆ ನೆಡಲಾಗುತ್ತಿದೆ.

ಫಲ, ಪುಷ್ಪ ಸಸ್ಯೋದ್ಯಾನಕ್ಕೆ ಹೆಸರಾದ ಲಾಲ್‍ಬಾಗ್‍ನಲ್ಲಿ ಪ್ರಸ್ತುತ ಒಟ್ಟಾರೆ 2,350ಕ್ಕೂ ಹೆಚ್ಚು ಸಸ್ಯ ಪ್ರಬೇಧಗಳ ಗಿಡಗಳನ್ನು ಕಾಣಬಹುದಾಗಿದ್ದು, ಇಲ್ಲಿ ವರ್ಷಕ್ಕೆ ಎರಡು ಬಾರಿ ಅಂದರೆ ಬೇಸಿಗೆ ಮತ್ತು ಚಳಿಗಾಲದಲ್ಲಿ ಫಲ ಪುಷ್ಪ ಪ್ರದರ್ಶನಗಳನ್ನು ನಡೆಸುವುದು ವಾಡಿಕೆ.

ಅಮೇರಿಕಾ, ಲಂಡನ್‍ನ ಕ್ಯೂ ಗಾರ್ಡನ್‍ನ ರಾಯಲ್ ಬಟಾನಿಕಲ್ ಸೊಸೈಟಿಯು ಆಯೋಜಿಸುವ ಚಲ್ಸಿ ಪ್ರದರ್ಶನಗಳನ್ನು ಹೊರತುಪಡಿಸಿದರೆ ಲಾಲ್‍ಬಾಗ್‍ನ ಫಲ ಪುಷ್ಪ ಪ್ರದರ್ಶನಗಳು ಜಾಗತಿಕವಾಗಿ 3ನೇ ಸ್ಥಾನ ಪಡೆದಿರುವುದು ರಾಜ್ಯದ ಹೆಗ್ಗಳಿಕೆಯಾಗಿದೆ. ಅದರಂತೆ ಈಗ 214ನೇ ಪ್ರದರ್ಶನವನ್ನು ಕಾಣುತ್ತಿರುವ ಲಾಲಾಬಾಗ್‍ನಲ್ಲಿ 12 ದಿನಗಳ ಕಾಲ ಕರ್ನಾಟಕದ ಶಕ್ತಿ ಕೇಂದ್ರ ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಸ್ಮರಣಾರ್ಥ ಏರ್ಪಡಿಸಲಾಗಿದ್ದು, ಈ ಬಾರಿ ವಿಧಾನಸೌಧವೇ ಮೈದಳೆಯಲಿದೆ.

ಲಾಲ್‍ಬಾಗ್‍ನ ಗಾಜಿನಮನೆಯ ಕೇಂದ್ರಭಾಗದಲ್ಲಿ 18 ಅಡಿ ಎತ್ತರದ ವಿಧಾನಸೌಧದ ಪುಷ್ಪ ಮಾದರಿಯ ಪ್ರತಿಕೃತಿಯನ್ನು ಕಬ್ಬಿಣ ಮೆಷ್ ಮೊದಲಾದ ವಸ್ತುಗಳನ್ನು ಬಳಸಿ ಕೆಂಪು, ಪೀಚ್, ಹಳದಿ, ರಸ್ಪ್, ಆರೆಂಜ್ ಮತ್ತು ಶ್ವೇತ ವರ್ಣದ ಡಚ್ ಗುಲಾಬಿ ಹೂಗಳು, ಪಿಂಚ್ಡ್ ಕೆಂಪು ಗುಲಾಬಿ ಶ್ವೇತ ವರ್ಣದ ಸೇವಂತಿಗೆ ಸೇರಿದಂತೆ ಬರೋಬ್ಬರಿ ಏಳು ಲಕ್ಷ ತಾಜಾ ಹೂವುಗಳನ್ನು ಬಳಸಿ ನಿರ್ಮಿಸಲಾಗಿದೆ.

ಅಲ್ಲದೆ ಗಾಜಿನಮನೆಯ ಪ್ರವೇಶದಲ್ಲಿ ಎಕ್ಸೋಟಿಕ್ ಆರ್ಕಿಡ್ಸ್, ಬರ್ಡ್ ಆಫ್ ಪ್ಯಾರಡೈಸ್, ಬ್ರೋಮಿಲಿಯಾಡ್ಸ್, ಆಂಥೂರಿಯಂ ಸೇರಿ ಹತ್ತಾರು ಬಗೆಯ ವಾರ್ಷಿಕ ಹೂಗಳು, ವಿವಿಧ ಪೊಲೀಸ್ ಜಾತಿಯ ಗಿಡಗಳನ್ನು ಬಳಸಿ ಇಂಡೋ-ಅಮೇರಿಕನ್ ಹೈಬ್ರಿಡ್ ಸೀಡ್ಸ್ 2 ಕಂಪೆನಿಯು ಹೂ ಜೋಡಣೆ ಮತ್ತು ಕೆಂಗಲ್ ಹನುಮಂತಯ್ಯನವರ ಪುತ್ಥಳಿ ವಿನ್ಯಾಸ ಮಾಡಿದೆ. ಇನ್ನೂ ವಿಧಾನಸೌಧದ ಪುಪ್ಪ ಮಾದರಿಯ ಮುಂದೆ ರಾರಾಜಿಸಲಿರುವ ಕೆಂಗಲ್ ಹನುಮಂತಯ್ಯನವರ 14 ಅಡಿ ಎತ್ತರದ ಬೃಹತ್ ಪ್ರತಿಮೆ ನೋಡುಗರ ಕಣ್ಮನ ಸೆಳೆಯಲಿದೆ.

ಗಾಜಿನಮನೆಯ ಕೇಂದ್ರಭಾಗದ ಬಲಬದಿಯಲ್ಲಿ ನಿರ್ಮಿಸಲಾಗಿರುವ 17 ಅಡಿ ಸುತ್ತಳತೆ ಮತ್ತು 24 ಅಡಿ ಎತ್ತರದ ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಪುಷ್ಪ ಮಾದರಿಗೆ ಬಗೆ ಬಗೆಯ ಸೇವಂತಿಗೆ ಹೂಗಳನ್ನು ಬಳಸಲಾಗಿದೆ. 2200 ಚದುರ ಅಡಿಯ ಕಣ್ಮನ ಸೆಳೆಯುವ ಮೆಗಾ ಯೊರೋಪಿಯನ್ ಫ್ಲೋರಲ್ ಕಾರ್ಪೆಟ್‍ನ ಅನಾವರಣ, ಗಾಜಿನಮನೆಯ ಕೇಂದ್ರ ಭಾಗದ ಹಿಂಬದಿಯ ಅಂಕಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಿ ಕೆಂಗಲ್ ಹನುಮಂತಯ್ಯ ಸೇರಿದಂತೆ 17ಕ್ಕೂ ಅಧಿಕ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ.

ಕೋಲಾರ ಚಿನ್ನದ ಗಣಿಯ ರಾಷ್ಟ್ರೀಕರಣವನ್ನು ನೆನೆಯುವ ಕಲಾಕೃತಿ, ಹತ್ತು ಆಕರ್ಷಕ ಹೂವಿನ ಪಿರಮಿಡ್‍ಗಳ ತುದಿಯಲ್ಲಿ ಕೆಂಗಲ್ ಹನುಮಂತಯ್ಯನವರ ಚಿತ್ರ ಸಂಯೋಜನೆ, ಗಾಜಿನ ಮನೆಯ ಒಳಾವರಣದಲ್ಲಿ ಹನುಮಂತಯ್ಯನವರ ವಿಶೇಷ ಛಾಯಾಚಿತ್ರ ಮಾಹಿತಿ - ಪ್ರದರ್ಶನ, ಕಂಬಗಳಲ್ಲಿ ಅರಳುವ ಪುಷ್ಪ ಧೂಮಗಳು ಶೀತ ವಲಯದ ಹೂಗಳ ಪ್ರದರ್ಶನ ದ್ವಾರದಲ್ಲಿ ಅರಳುವ ಕೆಂಗಲ್ ಹನುಮಂತನ ಅವರ ಮುಖಭಾವ ಮತ್ತು ವಿಧಾನಸೌಧದ ಕಲಾಕೃತಿ, ಫರ್ನರಿಯ ಪ್ರದರ್ಶನ ಜನ ಮೆಚ್ಚುಗೆಗೆ ಪಾತ್ರವಾಗಲಿವೆ.

ತೋಟಗಾರಿಕೆ ಇಲಾಖೆಯು ಇಕೆಬಾನ, ತರಕಾರಿ ಕೆತ್ತನೆ, ಪುಷ್ಪಭಾರತಿ, ಬೋನ್ಸಾಯ್, ಡಚ್ ಹೂವಿನ ಜೋಡಣೆ, ಥಾಯ್‍ಆರ್ಟ್, ಜಾನೂರು ಒಣಹೂವಿನ ಜೋಡಣೆಯ ಕಲೆಗಳ ಸ್ಪರ್ಧೆಗಳ ಪ್ರದರ್ಶನವನ್ನು ನಡೆಸಲಿದೆ. ಅಲ್ಲದೆ ಸಾರ್ವಜನಿಕರಲ್ಲಿ ಪರಿಸರ, ಗಿಡ-ಮರಗಳ ಬಗ್ಗೆ ಜಾಗೃತಿ ಮೂಡಿಸಲು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದೆ. ಮಕ್ಕಳಿಗೆ ಪ್ರಬಂಧ ಹಾಗೂ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿದೆ. ವಿವಿಧ ಸಂಘ-ಸಂಸ್ಥೆ ಮತ್ತು ತರಬೇತಿ ಕೇಂದ್ರದ ಅಭ್ಯರ್ಥಿಗಳಿಗೆ ಹಣ್ಣು- ತರಕಾರಿ ಕೆತ್ತನೆ, ಹೂವಿನ ಜೋಡಣೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

  • ಸಮವಸ್ತ್ರ ಸಹಿತ ಶಾಲಾ ಮಕ್ಕಳಿಗೆ ಉಚಿತ:

ಪ್ರದರ್ಶನಕ್ಕೆ ಎಲ್ಲಾ ನಾಲ್ಕು ದ್ವಾರಗಳಲ್ಲಿ ಸಾರ್ವಜನಿಕರಿಗೆ ಪ್ರವೇಶವಿರಲಿದ್ದು, ವಾರದ ದಿನಗಳಲ್ಲಿ 70 ರೂ. ಮತ್ತು ರವಿವಾರ ಮತ್ತು ಸರಕಾರಿ ರಜಾ ದಿನಗಳಲ್ಲಿ 80 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. 12 ವರ್ಷದ ಕೆಳಗಿನ ಮಕ್ಕಳಿಗೆ 30 ರೂ. ಪ್ರವೇಶ ಶುಲ್ಕವಿರಲಿದೆ. ಶಾಲಾ ಸಮವಸ್ತ್ರ ಮತ್ತು ಗುರುತಿನ ಚೀಟಿ ಧರಿಸಿ ಬರುವ 1ರಿಂದ 10ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರದರ್ಶನದ ಪೂರ್ಣ ಅವಧಿಯಲ್ಲಿ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ.

ಲಾಲ್‍ಬಾಗ್‍ನಲ್ಲಿ 12 ದಿನಗಳವರೆಗೆ ನಡೆಯುವ ಈ ಪ್ರದರ್ಶನದಲ್ಲಿ ಹೆಚ್ಚಿನ ಸಾರ್ವಜನಿಕರು ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಸಾರ್ವಜನಿಕರಿಗಾಗಿ ಶಾಂತಿನಗರ ಟಿಟಿಎಂಸಿ ಹಾಗೂ ಲಾಲ್‍ಬಾಗ್ ಹಾಪ್‍ಕಾಮ್ಸ್ ಸಮೀಪ ಪಾರ್ಕಿಂಗ್ ವ್ಯವಸ್ಥೆ ಸುವ್ಯವಸ್ಥಿತವಾಗಿರಲಿದ್ದು, ಎಲ್ಲರೂ ವೈಯಕ್ತಿಕ ವಾಹನಗಳ ಬದಲು ಸಾರ್ವಜನಿಕ ಬಸ್ ಹಾಗೂ ಮೆಟ್ರೋ ಬಳಸಿದರೆ ಟ್ರಾಫಿಕ್ ನಿರ್ವಹಣೆಗೆ ಹೆಚ್ಚಿನ ಅನುಕೂಲವಾಗಲಿದೆ.

-ಕುಸುಮಾ ಜಿ, ತೋಟಗಾರಿಕೆ ಉಪ ನಿರ್ದೇಶಕಿ.

Writer - ವಾರ್ತಾಭಾರತಿ

contributor

Editor - Navaz

contributor

Byline - ಯೋಗೇಶ್ ಮಲ್ಲೂರು

contributor

Similar News