ಬೆಂಗಳೂರು | ಪ್ರಯಾಣಿಕನಿಗೆ ಬೆದರಿಸಿ ಸುಲಿಗೆ : ಆಟೋ ಚಾಲಕ ಸೇರಿ ಇಬ್ಬರು ಸೆರೆ

Update: 2024-09-20 16:01 GMT

ಬೆಂಗಳೂರು : ಪ್ರಯಾಣಿಕನಿಗೆ ಬೆದರಿಸಿ ಸುಲಿಗೆ ಮಾಡಿದ್ದ ಪ್ರಕರಣದಡಿ ಆಟೋ ಚಾಲಕ ಸೇರಿ ಇಬ್ಬರನ್ನು ಇಲ್ಲಿನ ಗೋವಿಂದರಾಜ ನಗರ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಆಟೋ ಚಾಲಕ ಶಿವಕುಮಾರ್ ಹಾಗೂ ಮಂಟೇಪ್ಪ ಎಂಬುವರು ಬಂಧಿತರು ಎಂದು ಗುರುತಿಸಲಾಗಿದೆ. ರಾಮಕೃಷ್ಣ ಎಂಬುವವರು ನೀಡಿದ ದೂರಿನ ಮೇರೆಗೆ ಇಬ್ಬರನ್ನು ಬಂಧಿಸಿ ಕ್ರಮ ಜರುಗಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಆಟೋ ಚಾಲಕ ಶಿವಕುಮಾರ್ ನಗರದ ನಂದಿನಿ ಲೇಔಟ್ ನಿವಾಸಿಯಾಗಿದ್ದು, ವ್ಯಕ್ತಿಯೊಬ್ಬರಿಂದ ಆಟೋ ಬಾಡಿಗೆ ಪಡೆದು ಜೀವನ ನಡೆಸುತ್ತಿದ್ದ ಎನ್ನಲಾಗಿದೆ. ಹೆಚ್ಚಿನ ಹಣ ಸಂಪಾದನೆ ಮಾಡಲು ವಾಮಮಾರ್ಗ ತುಳಿದ ಚಾಲಕನಿಗೆ ಸಹಚರ ಮಂಟೇಪ್ಪ ಸಾಥ್ ನೀಡಿದ್ದ. ಸೆ.19ರಂದು ದೂರುದಾರ ರಾಮಕೃಷ್ಣ ಅವರು ಹೊರ ಜಿಲ್ಲೆಯಿಂದ ವಾಪಸ್ ಬೆಂಗಳೂರು ನಗರಕ್ಕೆ ಬಂದು ನವರಂಗ್ ಚಿತ್ರಮಂದಿರ ಬಳಿ ಆರೋಪಿಯ ಆಟೋ ಹತ್ತಿದ್ದರು.

ಮಾರ್ಗಮಧ್ಯೆ ಮತ್ತೊಬ್ಬ ಆರೋಪಿ ಮಂಟೇಪ್ಪ ಆಟೋ ಹತ್ತಿದ್ದ. ಇದನ್ನು ಪ್ರಶ್ನಿಸಿದಾಗ ಏಕಾಏಕಿ ಚಾಕು ತೆಗೆದು ರಾಮಕೃಷ್ಣನ ಕುತ್ತಿಗೆಗೆ ಇಟ್ಟಿದ್ದ. ನಗರದ ಕ್ಯೂಟೀಸ್ ಆಸ್ಪತ್ರೆ ಬಳಿ ಬಂದು ರಾಮಕೃಷ್ಣನ ಬಳಿ ಇದ್ದ 900 ರೂ. ಹಣ ಹಾಗೂ ಮೊಬೈಲ್ ಸುಲಿಗೆ ಮಾಡಿ ಪೊಲೀಸರಿಗೆ ಹೇಳಿದರೆ ಜೈಲಿಗೆ ಹೋಗಿ ವಾಪಸ್ ಬಂದು ಕೊಲೆ ಮಾಡುವುದಾಗಿ ಬೆದರಿಸಿ ಪರಾರಿಯಾಗಿದ್ದರು ಎನ್ನಲಾಗಿದೆ.

ಈ ಬಗ್ಗೆ ದೂರು ದಾಖಲಾದ ಎರಡೇ ಗಂಟೆಗಳಲ್ಲಿ ಈ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಲಾಗಿದ್ದು, ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News