ಬೆಂಗಳೂರು | ಮೊಬೈಲ್‍ ಕದಿಯುತ್ತಿದ್ದ ಇಬ್ಬರು ಸೆರೆ : 68 ಮೊಬೈಲ್‍ಗಳು ವಶಕ್ಕೆ

Update: 2024-02-27 13:45 GMT

ಬೆಂಗಳೂರು : ಮೊಬೈಲ್‍ಫೋನ್‍ಗಳನ್ನು ಕಸಿದು ಪರಾರಿಯಾಗುತ್ತಿದ್ದ ಇಬ್ಬರು ಆರೋಪಿಗಳನ್ನು ಮಹದೇವಪುರ ಠಾಣಾ ಪೊಲೀಸರು ಬಂಧಿಸಿ, ಅವರಿಂದ 20 ಲಕ್ಷ ರೂ. ಬೆಲೆ ಬಾಳುವ ವಿವಿಧ ಕಂಪೆನಿಗಳ 68 ಮೊಬೈಲ್ ಫೋನ್‍ಗಳನ್ನು ಜಪ್ತಿ ಮಾಡಿರುವುದಾಗಿ ವರದಿಯಾಗಿದೆ.

ಚಿತ್ರದುರ್ಗದ ಹಿರಿಯೂರು ಮೂಲದ ಗಿರೀಶ್ ಕುಮಾರ್(22) ಹಾಗೂ ರಂಗನಾಥ್(32) ಎಂಬುವರನ್ನು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಆರೋಪಿಗಳು ನಗರದ ಜನನಿಬಿಡ ಪ್ರದೇಶಗಳಾದ ಟಿನ್ ಫ್ಯಾಕ್ಟರಿ, ಮಾರತ್ತಹಳ್ಳಿ, ಹೆಬ್ಬಾಳ, ಸಿಲ್ಕ್ ಬೋರ್ಡ್ ಮುಂತಾದ ಕಡೆಗಳಲ್ಲಿ ರಸ್ತೆಬದಿ ನಡೆದುಕೊಂಡು ಹೋಗುವ ಒಂಟಿ ವ್ಯಕ್ತಿಗಳನ್ನು ಗುರಿಯಾಗಿಸಿ, ಮೊಬೈಲ್ ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಬಳಿಕ ಅವುಗಳನ್ನು ಹಿರಿಯೂರಿನಲ್ಲಿ ಮಾರಾಟ ಮಾಡಿ, ಬಂದ ಹಣವನ್ನು ದುಶ್ಚಟಗಳ ಖರ್ಚಿಗೆ ಬಳಸಿಕೊಳ್ಳುತ್ತಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಆರೋಪಿಗಳ ಬಂಧನದಿಂದ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಒಟ್ಟು 9 ಮೊಬೈಲ್ ದೋಚಿದ ಪ್ರಕರಣಗಳು ಪತ್ತೆಯಾಗಿವೆ. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News