ರಾಜ್ಯದ ರೈತರು ಬೆಳೆದ ಮೆಣಸಿನಕಾಯಿ ಖರೀದಿಸಲು ಕೇಂದ್ರ ಸಚಿವರಿಗೆ ಸಂಸದ ಬೊಮ್ಮಾಯಿ ಪತ್ರ

Update: 2025-03-14 14:47 IST
ರಾಜ್ಯದ ರೈತರು ಬೆಳೆದ ಮೆಣಸಿನಕಾಯಿ ಖರೀದಿಸಲು ಕೇಂದ್ರ ಸಚಿವರಿಗೆ ಸಂಸದ ಬೊಮ್ಮಾಯಿ ಪತ್ರ
  • whatsapp icon

ಬೆಂಗಳೂರು : ರಾಜ್ಯದಲ್ಲಿ ಒಣ ಮೆಣಸಿನಕಾಯಿ ಉತ್ಪಾದನೆಯು ಹೆಚ್ಚಾಗಿ ಬೆಲೆ ಕುಸಿತ ಉಂಟಾಗಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಕೇಂದ್ರ ಸರ್ಕಾರ ಕರ್ನಾಟಕದ ರೈತರು ಬೆಳೆದ ಒಣ ಮೆಣಸಿನಕಾಯಿ ಖರೀದಿಗೆ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.

ಈ ಕುರಿತು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದಿದ್ದಾರೆ.

ದೇಶದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳು ಮೆಣಸಿನಕಾಯಿ ಬೆಳೆಯುವ ರಾಜ್ಯಗಳಾಗಿದ್ದು, ಮೆಣಸಿನಕಾಯಿ ಇಡೀ ದೇಶದಲ್ಲಿ ಎಲ್ಲರೂ ಉಪಯೋಗಿಸುವ ಪದಾರ್ಥವಾಗಿದೆ. ವಿದೇಶಗಳಿಗೂ ದೊಡ್ಡ ಪ್ರಮಾಣದಲ್ಲಿ ರಪ್ತು ಮಾಡಲಾಗುತ್ತದೆ. ಮೆಣಸಿನಕಾಯಿ ಬೆಳೆ ಅತ್ಯಂತ ಸೂಕ್ಷ್ಮ ಬೆಳೆಯಾಗಿದ್ದು ಅದನ್ನು ಕೀಟಗಳ ಹಾವಳಿಯಿಂದ ಕಾಪಾಡಿಕೊಂಡು ರಕ್ಷಣೆ ಮಾಡುವುದು ಅತ್ಯಂತ ಸವಾಲಿನ ಕೆಲಸವಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಮೆಣಸಿನಕಾಯಿ ಉತ್ಪಾದನೆ ಸಾಮಾನ್ಯವಾಗಿದ್ದರೂ, ಆಂತರಿಕ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಹೊಟ್ಟೆಬಾಕುತನದಿಂದ ದೊಡ್ಡ ಪ್ರಮಾಣದ ಮೆಣಸಿನಕಾಯಿ ಮಾರಾಟವಾಗದೇ ಹಾಗೇ ಉಳಿದಿದ್ದು, ರೈತರನ್ನು ಸಂಕಷ್ಟಕ್ಕೀಡು ಮಾಡಿದೆ. ರಸಗೊಬ್ಬರ ಕೀಟನಾಶಕಗಳ ಬೆಲೆ ಹೆಚ್ಚಳದಿಂದಾಗಿ ಮೆಣಸಿನಕಾಯಿ ಬೆಳೆಯಲು ಸಾಕಷ್ಟು ವೆಚ್ಚವಾಗುತ್ತಿರುವುದು ತಮಗೆ ಗೊತ್ತಿದೆ. ಇದರಿಂದ ಮೆಣಸಿನಕಾಯಿ ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಆಂಧ್ರಪ್ರದೇಶದ ರೈತರು ಬೆಳೆದ ಮೆಣಸಿನಕಾಯಿ ಖರೀದಿಸಲು ತೀರ್ಮಾನಿಸಿ ಆ ರೈತರ ರಕ್ಷಣೆಗೆ ಮುಂದಾಗಿರುವುದಕ್ಕೆ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಆದರೆ, ಇದರಲ್ಲಿ ಕರ್ನಾಟಕದ ರೈತರು ಇದರಲ್ಲಿ ಸೇರ್ಪಡೆಯಾಗಿರುವುದಿಲ್ಲ. ಈ ಯೋಜನೆ ಅಡಿ ಕರ್ನಾಟಕದ ರೈತರೂ ಬೆಳೆದ ಮೆಣಸಿನಕಾಯಿಯನ್ನೂ ಖರಿದಿಸುವುದು ಅತ್ಯಂತ ಮುಖ್ಯವಾಗಿರುತ್ತದೆ. ಇದರಿಂದ ಕರ್ನಾಟಕದ ರೈತರಿಗೂ ಅನುಕೂಲವಾಗಲಿದೆ. ಆದ್ದರಿಂದ ಇದೊಂದು ಮಹತ್ವದ ಮತ್ತು ಜರೂರು ವಿಷಯವೆಂದು ಪರಿಗಣಿಸಿ ಕರ್ನಾಟಕರ ರಾಜ್ಯದ ಮೆಣಸಿನಕಾಯಿ ಬೆಳೆಯುವ ರೈತರ ರಕ್ಷಣೆಗೆ ಬರಬೇಕೆಂದು ವಿನಂತಿಸಿಕೊಂಡಿದ್ದಾರೆ.‌

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News