ಬೆಂಗಳೂರು | ಯುವತಿ ಜೊತೆ ಕುಳಿತಿದ್ದ ವ್ಯಕ್ತಿಗೆ ಆಕೆಯ ಸ್ನೇಹಿತನಿಂದ ಚಾಕು ಇರಿತ : ಇಬ್ಬರು ಪೊಲೀಸ್ ವಶಕ್ಕೆ

Update: 2024-09-18 15:21 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ಯುವತಿಯೊಂದಿಗೆ ಕುಳಿತಿದ್ದ ವ್ಯಕ್ತಿಗೆ ಆಕೆಯ ಸ್ನೇಹಿತ ಚಾಕುವಿನಿಂದ ಇರಿದಿರುವ ಘಟನೆ ಇಲ್ಲಿನ ಸದ್ದಗುಂಟೆಪಾಳ್ಯ ಠಾಣೆ ವ್ಯಾಪ್ತಿಯ ಕೆಇಬಿ ಪಾರ್ಕ್ ಬಳಿ ವರದಿಯಾಗಿದೆ.

ಇರಿತಕ್ಕೊಳಗಾದ ಹಿತೇಂದ್ರ ಕುಮಾರ್(58) ನೀಡಿರುವ ದೂರಿನನ್ವಯ ಯುವತಿ ಹಾಗೂ ಆಕೆಯ ಸ್ನೇಹಿತ ಸಿದ್ದು ಎಂಬಾತನ ವಿರುದ್ಧ ಸದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಯನಗರ 9ನೇ ಬ್ಲಾಕ್‍ನಲ್ಲಿ ಹಿತೇಂದ್ರ ಕುಮಾರ್ ಹೊಂದಿರುವ ಬಟ್ಟೆ ಅಂಗಡಿಯಲ್ಲಿ ಯುವತಿಯೊಬ್ಬಳು ಜೂನ್ ತಿಂಗಳಿನಲ್ಲಿ ಕೆಲಸಕ್ಕೆಂದು ಸೇರಿದ್ದಳು. ಆದರೆ, 2-3 ತಿಂಗಳುಗಳ ಬಳಿಕ ಕೆಲಸ ಬಿಟ್ಟಿದ್ದಳು. ಯುವತಿಯ ಮೇಲೆ ಪ್ರೀತಿ ಹೊಂದಿದ್ದ ಹಿತೇಂದ್ರ ಕುಮಾರ್ ಸೆ.14ರಂದು ಆಕೆಯನ್ನು ಭೇಟಿಯಾಗಲು ಕರೆದಿದ್ದರು. ಅದರಂತೆ ಇಬ್ಬರೂ ಸಹ ಬಿಟಿಎಂ ಲೇಔಟ್‍ನ ಉಡುಪಿ ಗಾರ್ಡನ್ ಸಿಗ್ನಲ್ ಬಳಿಯಿರುವ ಕೆಇಬಿ ಪಾರ್ಕ್‍ನಲ್ಲಿ ಭೇಟಿಯಾಗಿದ್ದರು.

ಈ ವೇಳೆ ಯುವತಿಯ ಬಳಿ ಹಿತೇಂದ್ರ ಕುಮಾರ್ ತನ್ನ ಪ್ರೀತಿ ಹೇಳಿಕೊಂಡಿದ್ದ. ಆಕೆಯೂ ಸಹ ಹಿತೇಂದ್ರ ಕುಮಾರ್ ಪ್ರೀತಿಗೆ ಸಮ್ಮತಿಸಿದ್ದಳು. ಅದೇ ಖುಷಿಯಲ್ಲಿದ್ದ ಹಿತೇಂದ್ರ ಕುಮಾರ್ ಮಾರನೇ ದಿನವೂ ಸಹ ಯುವತಿಯನ್ನು ಅದೇ ಸ್ಥಳದಲ್ಲಿ ಭೇಟಿಗೆ ಕರೆದಿದ್ದ. ಅದೇ ಪಾರ್ಕ್‍ನಲ್ಲಿ ಮತ್ತೆ ಕುಳಿತು ಇಬ್ಬರೂ ಮಾತನಾಡುತ್ತಿದ್ದಾಗ ಏಕಾಏಕಿ ಯುವತಿಯ ಸ್ನೇಹಿತ ಚಾಕು ಸಮೇತ ಬಂದಿದ್ದ. ಈ ವೇಳೆ ಮೂರು ಜನರ ಮಧ್ಯೆ ಮಾತಿಗೆ ಮಾತು ಬೆಳೆದಿದ್ದು, ಹಿತೇಂದ್ರ ಕುಮಾರ್ ಹೊಟ್ಟೆ ಹಾಗೂ ಬೆನ್ನಿಗೆ ಆರೋಪಿ ಸಿದ್ದು ಚಾಕುವಿನಿಂದ ಇರಿದಿರುವುದಾಗಿ ಎಫ್‍ಐಆರ್‌ ನಲ್ಲಿ ಉಲ್ಲೇಖಿಸಲಾಗಿದೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹಿತೇಂದ್ರ ಕುಮಾರ್ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸದ್ದಗುಂಟೆಪಾಳ್ಯ ಠಾಣೆ ಪೊಲೀಸರು, ಯುವತಿ ಹಾಗೂ ಆಕೆಯ ಸ್ನೇಹಿತನನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News