ಸಂವಿಧಾನದ ಪ್ರಸ್ತಾವನೆ ಎಲ್ಲರಿಗೂ ತಿಳಿಸಿ, ಅದನ್ನು ಅರ್ಥೈಸಿಕೊಳ್ಳಬೇಕು: ಲಕ್ಷ್ಮಣ್ ರೆಡ್ಡಿ
ಬೆಂಗಳೂರು: ‘ಸಂವಿಧಾನ ಜಾಗೃತಿ ಜಾಥಾ, ಸರಕಾರದ ವಿನೂತನ ಕಾರ್ಯಕ್ರಮವಾಗಿದ್ದು, ಸಂವಿಧಾನದ ಮೌಲ್ಯ ಅದರ ಬೆಲೆ, ಅದರ ಪ್ರಸ್ತಾವನೆ ಎಲ್ಲರಿಗೂ ತಿಳಿಸಿ ಅದನ್ನು ಅರ್ಥೈಸಿಕೊಳ್ಳಬೇಕು’ ಎಂದು ಬೆಂಗಳೂರು ನಗರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಲಕ್ಷ್ಮಣ್ ರೆಡ್ಡಿ ತಿಳಿಸಿದ್ದಾರೆ.
ಬುಧವಾರ ಸಮಾಜ ಕಲ್ಯಾಣ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಇಲ್ಲಿನ ಕಗ್ಗಲೀಪುರದಲ್ಲಿ ಏರ್ಪಡಿಸಿದ್ದ ಸಂವಿಧಾನ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎಲ್ಲರೂ ಪಡೆದಿದ್ದೇವೆ ಎಂದರೆ ಅದಕ್ಕೆ ಕಾರಣ ನಮ್ಮ ಸಂವಿಧಾನ. ಇಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿರುವ ಕಗ್ಗಲಿಪುರ ಗ್ರಾ.ಪಂ. ಅದ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಎಲ್ಲ ಸಮುದಾಯಗಳ ಮುಖಂಡರುಗಳಿಗೆ ಅಭಿನಂದನೆಗಳು ಎಂದರು.
ಕಾರ್ಯಕ್ರಮವನ್ನು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಸ್.ಟಿ.ಸೋಮಶೇಖರ್ ಉದ್ಘಾಟಿಸಿದರು. ಈ ವೇಳೆ ಪಂಚಾಯತಿಯ ಅಧ್ಯಕ್ಷ ಕೆ.ಎಸ್.ಪರ್ವೀಝ್, ತಾ.ಪಂ. ಸಿಇಒ ಡಾ.ಬಿಂದು, ಬೆಂ.ನಗರ ಜಿ. ಪಂ. ಉಪನಿರ್ದೇಶಕ ಜುಂಜಯ್ಯ, ಉಸ್ತುವಾರಿ ಅಧಿಕಾರಿ ರತ್ನಮ್ಮ, ಗ್ರಾ.ಪಂ. ಅಧ್ಯಕ್ಷರು, ಸದಸ್ಯರು ಸೇರಿ ಸ್ಥಳೀಯ ಮುಖಂಡರು ಹಾಜರಿದ್ದರು.