ಡಿಕೆಶಿ ಕಿಡ್ನಾಪರ್, ನನ್ನ ಬಳಿ ದಾಖಲೆ ಇದೆ : ಎಚ್.ಡಿ.ಕುಮಾರಸ್ವಾಮಿ
ಬೆಳಗಾವಿ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಣ್ಣುಮಕ್ಕಳನ್ನು ಅಪಹರಿಸಿ (ಕಿಡ್ನಾಪ್) ಅವರ ಅಪ್ಪ-ಅಮ್ಮನಿಂದ ಜಮೀನು ಲಪಟಾಯಿಸಿರುವುದು ನಿಜ. ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದೂರಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1996-1997ರಲ್ಲಿ ಹೆಣ್ಣು ಮಗಳನ್ನು ಆ ವ್ಯಕ್ತಿ ಕಿಡ್ನಾಪ್ ಮಾಡಿ, ಅವರ ಪೋಷಕರನ್ನು ಬೆದರಿಸಿ ಜಮೀನು ಬರೆಸಿಕೊಂಡಿದ್ದು ನಿಜ. ನನ್ನ ಬಳಿ ಅದರ ದಾಖಲೆಗಳಿವೆ. ದಯಮಾಡಿ ಬನ್ನಿ ಚರ್ಚೆಗೆ, ನಾನೂ ಸಿದ್ದನಿದ್ದೇನೆ. ನಿಮ್ಮ ಬಗ್ಗೆ ಕಂತೆಗಟ್ಟಲೇ ದಾಖಲೆ ಇಟ್ಟಿದ್ದೇನೆ ಎಂದು ಹೇಳಿದರು.
ನಿಮ್ಮ ಬಗ್ಗೆ ಎಷ್ಟು ಬೇಕಾದರೂ ಹೇಳಬಹುದಾಗಿದ್ದು, ದಾಖಲೆಗಳು ಬೇಕಾದಷ್ಟಿವೆ. ಈಗ ಶಾಂತಿನಗರ ಹೌಸಿಂಗ್ ಸೊಸೈಟಿ ವಿಷಯಕ್ಕೆ ಬನ್ನಿ. ಅಲ್ಲಿ ನಕಲಿ ಸೊಸೈಟಿಯನ್ನೆ ನಿಜ ಎಂದು ನಂಬಿಸಿಕೊಂಡಿದ್ದಾರೆ. ಈ ದೇಶದಲ್ಲಿನ ಸಂಸ್ಥೆಗಳನ್ನು ದುಡ್ಡಿನ ಮೂಲಕ ಕೊಂಡುಕೊಂಡು ಯಾವಾಗ ಏನು ಬೇಕಾದರೂ ಮಾಡುವ ವ್ಯಕ್ತಿ ಡಿ.ಕೆ.ಶಿವಕುಮಾರ್ ಎಂದು ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿಗೆ ಸ್ವಾಗತ: ಮಂಡ್ಯ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬರುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸುತ್ತೇನೆ. ಅವರು ಪ್ರಚಾರಕ್ಕೆ ಬಂದರೆ ತಪ್ಪೇನು? ಬರುವವರನ್ನು ಬೇಡ ಎಂದು ಹೇಳುವುದಕ್ಕೆ ಆಗುತ್ತದೆಯೇ? ರಾಜಕೀಯವಾಗಿ ಪ್ರಚಾರ ಮಾಡಲು ಯಾರು ಬೇಕಾದರೂ ಬರಬಹುದು ಎಂದು ಕುಮಾರಸ್ವಾಮಿ ನುಡಿದರು.