ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಅನಿವಾಸಿ ಭಾರತೀಯರಿಗೆ ಪ್ರತ್ಯೇಕ ಸಚಿವಾಲಯ’ : ಎಐಸಿಸಿ ಕಾರ್ಯದರ್ಶಿ ಆರತಿ ಕೃಷ್ಣ

Update: 2024-04-18 14:53 GMT

ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅನಿವಾಸಿ ಭಾರತೀಯರಿಗೆ ಪ್ರತ್ಯೇಕ ಸಚಿವಾಲಯ ನೀಡಲಿದ್ದು, ಇದು ಇಂದಿನ ತುರ್ತು ಮತ್ತು ಅವಶ್ಯಕ ಎಂದು ಎಐಸಿಸಿ ಕಾರ್ಯದರ್ಶಿ ಆರತಿ ಕೃಷ್ಣ ತಿಳಿಸಿದ್ದಾರೆ.

ಗುರುವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಿವಾಸಿ ಭಾರತೀಯರಿಗೆ ವಿದೇಶಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ನಾವು ಅಲ್ಲಿಯೂ ಮತದಾನ ಮಾಡಲು ಅವಕಾಶವಿಲ್ಲ. ಇಲ್ಲಿಗೆ ಬಂದು ಮತ ಹಾಕಲು ಖರ್ಚು ಹೆಚ್ಚಾಗುತ್ತದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಆನ್‍ಲೈನ್ ಮತ ಅಥವಾ ರಾಯಭಾರ ಕಚೇರಿಯಲ್ಲಿ ಮತ ಹಾಕುವ ವ್ಯವಸ್ಥೆ ಮಾಡಲಾಗುವುದು ಎಂದರು.

ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಿರುವ ಐದು ನ್ಯಾಯಗಳ ಜೊತೆಗೆ ಅನಿವಾಸಿ ಭಾರತೀಯರ ನ್ಯಾಯವೂ ಸೇರಿದೆ. ಮನಮೋಹನ್ ಸಿಂಗ್ ಅವರ ಸರಕಾರ ಇದ್ದಾಗ ಅನಿವಾಸಿ ಭಾರತೀಯರಿಗೆ ಎಂದೇ ಪ್ರತ್ಯೇಕ ಸಚಿವಾಲಯ ಕೆಲಸ ಮಾಡುತ್ತಿತ್ತು. ಆದರೆ ಬಿಜೆಪಿ ಸರಕಾರ ಅದನ್ನು ವಿದೇಶಾಂಗ ಸಚಿವಾಲಯದ ಜೊತೆ ಸೇರಿಸಿದೆ ಎಂದು ಅವರು ಹೇಳಿದರು.

ಅನಿವಾಸಿ ಕನ್ನಡಿಗರಿಗೆ ಪ್ರತ್ಯೇಕ ವಿಭಾಗ ಬೇಕು ಎಂದು ಮನವಿ ಮಾಡಿದ್ದೇವೆ. ಜೊತೆಗೆ ಸಚಿವಾಲಯ ಮತ್ತು ವಿದೇಶಗಳಿಂದ ಉದ್ಯೋಗ ಕಳೆದುಕೊಂಡು ಬರುವವರಿಗೆ ಇಲ್ಲಿ ಉದ್ಯೋಗ ನೀಡುವ ಯೋಜನೆ ನಮ್ಮ ಕಾಂಗ್ರೆಸ್ ಸರಕಾರದ ಮುಂದೆ ಇದೆ ಎಂದು ಆರತಿ ಕೃಷ್ಣ ತಿಳಿಸಿದರು.

ಗಲ್ಫ್ ರಾಷ್ಟ್ರ ಸೇರಿದಂತೆ ಒಂದಷ್ಟು ದೇಶಗಳಲ್ಲಿ ಭಾರತೀಯರು ವಾಸವಿದ್ದರೂ ಆಯಾ ದೇಶಗಳ ಪೌರತ್ವ ಪಡೆದುಕೊಳ್ಳಲು ಆಗುವುದಿಲ್ಲ. ಅವರ ಪರವಾಗಿ ನಾವು ದನಿ ಎತ್ತುತ್ತಿದ್ದೇವೆ ಎಂದು ಆರತಿ ಕೃಷ್ಣ ಹೇಳಿದರು.

ಕರ್ನಾಟಕ ಚಾಪ್ಟರ್ ಅಧ್ಯಕ್ಷ ರಾಜೀವ್ ಗೌಡ ಮಾತನಾಡಿ, ಭಾರತದ ಬಗ್ಗೆ ಹೊರ ದೇಶಗಳಲ್ಲಿ ಗೌರವ ಮರ್ಯಾದೆ ಇತ್ತು. ಆದರೆ, ಇಂದು ಅಮೇರಿಕಾದ ಅಧ್ಯಕ್ಷರು ಈ ಬಾರಿಯ ಭಾರತದ ಚುನಾವಣೆ ಪಾರದರ್ಶಕವಾಗಿ ನಡೆಯಲಿ ಎಂದು ಹೇಳಿದ್ದಾರೆ ಎಂದರು.

ಮೋದಿ ಅವರು 10 ವರ್ಷ ಈ ದೇಶದ ಪ್ರಧಾನಿಯಾಗಿದ್ದಾರೆ. ಆದರೆ, ಒಂದೇ ಒಂದು ಮಾಧ್ಯಮಗೋಷ್ಠಿ ನಡೆಸಿಲ್ಲ. ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಡಾಲರ್ ಬೆಲೆ 53 ರೂಪಾಯಿ ಇತ್ತು. ಆದರೆ, ಇಂದು ಡಾಲರ್ ಬೆಲೆ 86 ರೂಪಾಯಿಗೆ ಹೆಚ್ಚಳವಾಗಿದೆ. ರೂಪಾಯಿ ಮೌಲ್ಯ ಕಡಿಮೆ ಇದೆ. ಈಗ ನಾವು ಮೋದಿ ಅವರನ್ನು ಪ್ರಶ್ನೆ ಮಾಡಬೇಕಲ್ಲವೇ?, ಮಣಿಪುರ ಸೇರಿದಂತೆ ಅನೇಕ ಕಡೆ ಗಲಭೆಗಳು ಆಗುತ್ತಿವೆ ಆದರೂ ಮೋದಿ ಅವರು ಒಂದೇ ಒಂದು ಮಾತನ್ನು ಆಡಲಿಲ್ಲ ಎಂದು ರಾಜೀವ್ ಗೌಡ ಟೀಕಿಸಿದರು.

ಗ್ಯಾರಂಟಿಗಳನ್ನು ಕೊಟ್ಟರೇ ಕರ್ನಾಟಕ ಹಾಳಾಗುತ್ತದೆ ಎಂದು ಮೋದಿ ಹೇಳಿದರು. ಈಗ ಕರ್ನಾಟಕ ಹಾಳಾಗಿದೆಯೇ?, ಮೋದಿ ಅವರು ಹೇಳಿದ ಒಂದೇ ಒಂದು ಕೆಲಸ ಮಾಡಿಲ್ಲ. ಅದಕ್ಕೆ ನಾವು ವಿದೇಶಗಳಿಂದ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಲು ದೇಶಕ್ಕೆ ಮರಳಿ ಬಂದಿದ್ದೇವೆ ಎಂದು ರಾಜೀವ್ ಗೌಡ ತಿಳಿಸಿದರು.

ಯುರೋಪ್ ಭಾಗದ ಕಾರ್ಯದರ್ಶಿ ವೀರೇಂದ್ರ ವಸಿಷ್ಟ ಮಾತನಾಡಿ, ಬಿಜೆಪಿ ಪಕ್ಷ ಸುಳ್ಳಿನ ಪಕ್ಷವಾಗಿದೆ. ಇದುವರೆಗೂ ಅವರು ಕೊಟ್ಟ ಒಂದೇ ಒಂದು ಮಾತುಗಳನ್ನು ಈಡೇರಿಸಿಲ್ಲ. ಈ ದೇಶವನ್ನು ನಾವು ತಂತ್ರಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲು ಪ್ರಬಲವಾಗಿ ಕಟ್ಟಬೇಕು. ನರೇಂದ್ರ ಮೋದಿ ಅವರ ಸರಕಾರದ ಜುಮ್ಲಾಗಳಿಂದ ಭಾರತದ ಜನರಿಗೆ ಏನೂ ಸಿಗುವುದಿಲ್ಲ. ದೇಶದ ಸಮಸ್ಯೆಗಳಿಗೆ ಕಾಂಗ್ರೆಸ್ ಪರಿಹಾರ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News