ಎಸೆಸೆಲ್ಸಿಯಲ್ಲಿ ಕಡಿಮೆ ಅಂಕ ಪಡೆದವರಿಗೂ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ

Update: 2024-05-17 16:52 GMT

ಬೆಂಗಳೂರು : ಎಸೆಸೆಲ್ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಮಕ್ಕಳಿಗೂ ರಾಜ್ಯದ ಪ್ರತಿಷ್ಠಿತ ಪದವಿಪೂರ್ವ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ತರಗತಿ ಪ್ರವೇಶಾತಿ ದೊರೆಯುವಂತೆ ಸರಕಾರ ನಿಯಮಾವಳಿ ರೂಪಿಸಿ ಸದರಿ ನಿಯಮ ಕಟ್ಟುನಿಟ್ಟಾಗಿ ಜಾರಿಗೊಳ್ಳುವಂತೆ ಕ್ರಮ ವಹಿಸಲು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸರಕಾರವನ್ನು ಒತ್ತಾಯಿಸಿದ್ದಾರೆ.

ಶುಕ್ರವಾರ ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ರಾಜ್ಯದ ಹಲವು ಕಾಲೇಜುಗಳಲ್ಲಿ ಅತೀ ಹೆಚ್ಚು ಅಂಕ ಪಡೆದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ಪ್ರವೇಶ ನೀಡುವುದು(ಮೆರಿಟ್) ವೈಜ್ಞಾನಿಕವಾಗಿ ಸರಿಯಾದದ್ದು ಅಲ್ಲ ಎಂದು ತಿಳಿಸಿದ್ದಾರೆ.

‘ಕೇವಲ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡುವುದು ಮಕ್ಕಳ ಹಕ್ಕುಗಳ ಉಲ್ಲಂಘನೆ’ಯಾಗುತ್ತದೆ. ಅನುದಾನಿತ, ಅನುದಾನರಹಿತ, ಖಾಸಗಿ ಮತ್ತು ಸರಕಾರಿ ಸೇರಿದಂತೆ ಪ್ರತಿ ಪಿಯು ಕಾಲೇಜಿನಲ್ಲೂ ಎಸೆಸೆಲ್ಸಿಯಲ್ಲಿ ಕನಿಷ್ಠ 35 ಅಂಕಗಳೊಂದಿಗೆ ತೇರ್ಗಡೆಯಾದವರಿಗೆ ಕೂಡಾ ಪ್ರವೇಶ ಸಿಗುವಂತಾಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಶೇ.35 ರಿಂದ 50 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಸೀಟುಗಳನ್ನು ಮೀಸಲಿಡಬೇಕು. ಶೇ.51 ರಿಂದ 75 ರಷ್ಟು ಅಂಕ ಪಡೆದವರಿಗೆ ಶೇ.25 ಸೀಟುಗಳನ್ನು ಮೀಸಲಿಡಬೇಕು. ಉಳಿದವುಗಳನ್ನು ಆಡಳಿತ ಮಂಡಳಿ ಬಯಸುವ ರೀತಿ ನೀಡಬಹುದು ಎಂದು ಬಸವರಾಜ ಹೊರಟ್ಟಿ ಸಲಹೆ ನೀಡಿದ್ದಾರೆ.

ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಪಿಯು ಕಾಲೇಜುಗಳು ಪ್ರವೇಶ ನಿರಾಕರಿಸುತ್ತಿವೆ. ತಮ್ಮಲ್ಲಿ ಶೇ.94, 95ರ ಮೇಲಿನವರಿಗಷ್ಟೇ ಪ್ರವೇಶ ಎನ್ನುತ್ತಿವೆ. ರಾಜ್ಯದ ಎಲ್ಲ ಕಾಲೇಜುಗಳಲ್ಲಿ ಇದೇ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಹೆಸರಾಂತ ಶಾಲೆಗಳಲ್ಲಿ ಕಲಿಯಬೇಕೆಂಬ ಮಕ್ಕಳು-ಪಾಲಕರ ಇಚ್ಛೆ ಈಡೇರದಂತಾಗಿದೆ ಎಂದು ಅವರು ವಿಷಾದ ವ್ಯಕ್ತ ಪಡಿಸಿದ್ದಾರೆ.

ಬೆಳಗಾವಿ ವಿಭಾಗದ ಕಾಲೇಜುಗಳಲ್ಲಂತೂ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ತಾವು ಶಿಕ್ಷಣ ಸಚಿವರಾಗಿದ್ದಾಗ ಕಾನೂನು ತಂದು ಕಡಿಮೆ ಅಂಕ ಪಡೆದವರಿಗೆ ಕೂಡ ಎಲ್ಲಾ ಕಾಲೇಜುಗಳಲ್ಲಿ ಪ್ರವೇಶ ದೊರೆಯುವಂತೆ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಆದರೆ ಅಷ್ಟರಲ್ಲಿ ಸರಕಾರದ ಅವಧಿ ಮುಗಿದಿದ್ದರಿಂದ ಈ ಉದ್ದೇಶ ಈಡೇರಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ರೀತಿ ಮಾಡಿದರೆ ರಾಜ್ಯದ ಎಲ್ಲ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಷ್ಟಿತ ಕಾಲೇಜುಗಳಲ್ಲಿ ಪ್ರವೇಶ ದೊರೆತು ಇತರ ವಿದ್ಯಾರ್ಥಿಗಳೊಂದಿಗೆ ಜ್ಞಾನಾರ್ಜನೆ ಕೈಗೊಂಡು ಅತ್ಯುತ್ತಮ ಅಂಕಗಳಿಸುವ ಮೂಲಕ ಜೀವನದಲ್ಲಿ ಉನ್ನತ ಸಾಧನೆ ಮಾಡುವ ಕನಸನ್ನು ನನಸಾಗಿಸಿಕೊಳ್ಳಬಹುದು. ಕೂಡಲೇ ಈ ಸಂಬಂಧ ಸರಕಾರ ಆದೇಶ ಹೊರಡಿಸಬೇಕು ಹಾಗೂ ಕೈಗೊಂಡ ಕ್ರಮದ ಬಗ್ಗೆ ತಮಗೆ ಮಾಹಿತಿ ನೀಡುವಂತೆ ಬಸವರಾಜ ಹೊರಟ್ಟಿ ಪತ್ರ ಮುಖೇನ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News