ಪತ್ರಿಕೋದ್ಯಮ ಪ್ರಶಸ್ತಿಗಳಿಗೆ ಆಯ್ಕೆ ಸಮಿತಿ ರಚನೆ : ಪ್ರಶಸ್ತಿಗೆ ನಾಮ ನಿರ್ದೇಶನಗಳ ಆಹ್ವಾನ

Update: 2024-07-02 17:36 GMT

ಬೆಂಗಳೂರು : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ 2019ರಿಂದ 2023ನೆ ಸಾಲಿನ ‘ಟೀಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿʼ ಹಾಗೂ ʼಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ’ಗಳಿಗೆ ಆಯ್ಕೆ ಸಮಿತಿ ರಚಿಸಲಾಗಿದ್ದು, ಪ್ರಶಸ್ತಿಗೆ ನಾಮ ನಿರ್ದೇಶನಗಳನ್ನು ಆಹ್ವಾನಿಸಲಾಗಿದೆ.

ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಪಿ.ಎನ್.ದೇಸಾಯಿ ಅಧ್ಯಕ್ಷತೆಯ ಆಯ್ಕೆ ಸಮಿತಿಯಲ್ಲಿ ಹಿರಿಯ ಪತ್ರಕರ್ತರಾದ ಡಾ.ಈಶ್ವರ ದೈತೋಟ, ಶಾಂತಲಾ ಧರ್ಮರಾಜ್ ಹಾಗೂ ಎಂ.ಎಸ್.ಮಣಿ ಸದಸ್ಯರಾಗಿದ್ದಾರೆ. ವಾರ್ತಾ ಇಲಾಖೆಯ ಆಯುಕ್ತ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.

ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು, ಮಾಧ್ಯಮ ಸಂಸ್ಥೆಗಳು ಹಾಗೂ ಇತರೆ ಸಂಘ-ಸಂಸ್ಥೆಗಳು ಮತ್ತು ವ್ಯಕ್ತಿಗಳು ಪೂರ್ಣ ದಾಖಲೆಗಳೊಂದಿಗೆ ಆಯುಕ್ತರು, ವಾರ್ತಾ ಇಲಾಖೆ, ವಾರ್ತಾಸೌಧ, ನಂ.17, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು-560001 ಇಲ್ಲಿಗೆ ಜು.25ರ ಸಂಜೆ 5:30ರ ಒಳಗಾಗಿ ಕಳುಹಿಸಿಕೊಡಬಹುದು. ಅಥವಾ ಜಿಲ್ಲಾ ವಾರ್ತಾಧಿಕಾರಿಗಳ ಕಚೇರಿ ಮೂಲಕ ಇಲ್ಲವೆ tsraward@gmail.com ಇ-ಮೇಲ್ ವಿಳಾಸಕ್ಕೆ ಕೊನೆಯ ದಿನಾಂಕದೊಳಗೆ ಕಳುಹಿಸಿಕೊಡಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಟಿಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ: ಹಿರಿಯ ಪರ್ತಕರ್ತ ಟಿ.ಎಸ್.ರಾಮಚಂದ್ರರಾವ್ ನೆನಪಿನಲ್ಲಿ ಸರಕಾರ ಟಿಯೆಸ್ಸಾರ್ ನಿಡುತ್ತಾ ಬಂದಿದೆ. ಪ್ರಶಸ್ತಿಯ ಮೊತ್ತ 2ಲಕ್ಷ ರೂ.ಆಗಿದ್ದು, ಕನ್ನಡ ಪತ್ರಿಕೋದ್ಯಮ, ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ಅಥವಾ ಎರಡರಲ್ಲೂ ಒಟ್ಟಿಗೆ ಕನಿಷ್ಠ 30 ವರ್ಷಗಳ ಸೇವೆ ಸಲ್ಲಿಸಿರಬೇಕು. ಜೊತೆಗೆ ಕನ್ನಡ ಕ್ಷೇತ್ರಕ್ಕೆ ಭಾಷೆಯ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿರುವವರನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು. ವರ್ಷಕ್ಕೆ ಒಬ್ಬರಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು.

ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ: ಮೊಹರೆ ಹಣಮಂತರಾಯ ನೆನಪಿನಲ್ಲಿ ಸರಕಾರವು ಪ್ರಶಸ್ತಿ ನೀಡುತ್ತಾ ಬಂದಿದೆ. ಪ್ರಶಸ್ತಿಯ ಮೊತ್ತವು 2ಲಕ್ಷ ರೂ.ಆಗಿದ್ದು, ಕನ್ನಡದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಯಾವುದೆ ಪತ್ರಿಕೆಯನ್ನು ಅಥವಾ ಪತ್ರಿಕಾ ಸಮೂಹವನ್ನು ಸಮರ್ಥವಾಗಿ ಕಟ್ಟಿ ಬೆಳೆಸಿದ ಹಾಗೂ ಪ್ರವೃತ್ತಿಯಲ್ಲಿ ಪತ್ರಕರ್ತರಾಗಿ, ವೃತ್ತಿಯಲ್ಲಿ ಪತ್ರಿಕಾಲಯದ ಮಾಲಕರು, ಆಡಳಿತಗಾರರಾಗಿ ಕನಿಷ್ಠ 30 ವರ್ಷ ಸೇವೆ ಸಲ್ಲಿಸಿರಬೇಕು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News