ಸಚಿವ ಸತೀಶ್ ಜಾರಕಿಹೊಳಿ ಭೇಟಿ ಮಾಡಿದ ಬಿ.ವೈ.ವಿಜಯೇಂದ್ರ
ಬೆಂಗಳೂರು : ಶಿಕಾರಿಪುರ ತಾಲೂಕಿನ ಟೋಲ್ನಿಂದ ರೈತರು, ಬಡವರಿಗೆ ಅನಾನುಕೂಲ ಆಗಿದೆ. ಮೂರು ಜಿಲ್ಲೆಗಳ ಜನರು ಈ ಹೆದ್ದಾರಿ ಉಪಯೋಗಿಸುತ್ತಿದ್ದು, ಒಂದೇ ಜಿಲ್ಲೆಯಲ್ಲಿ 2 ಟೋಲ್ಗಳಿವೆ. ಟೋಲ್ ವರ್ಗಾಯಿಸಿ ಬಡವರಿಗೆ ಪ್ರಯೋಜನ ದೊರಕಿಸಿಕೊಡುವಂತೆ ಮನವಿ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಸೋಮವಾರ ನಗರದ ಕ್ರೆಸೆಂಟ್ ರಸ್ತೆಯಲ್ಲಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿ ಮನವಿ ಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೋಲ್ ವರ್ಗಾವಣೆಗೆ 2-3 ಬಾರಿ ಹೋರಾಟವೂ ನಡೆದಿದೆ. ನಮ್ಮ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಈ ವಿಚಾರದಲ್ಲಿ ಚರ್ಚಿಸಲು ಶೀಘ್ರವೇ ಅಧಿಕಾರಿಗಳ ಸಭೆ ಕರೆಯುವುದಾಗಿ ತಿಳಿಸಿದ್ದಾರೆ. ಶಿಕಾರಿಪುರ ಕ್ಷೇತ್ರದ ಸಮಸ್ಯೆಗಳ ಕುರಿತು ಸತೀಶ್ ಜಾರಕಿಹೊಳಿ ಅವರ ಜಒತೆ ಮಾತನಾಡಿದ್ದೇನೆ. ರಾಜಕಾರಣದ ವಿಚಾರ ಮಾತನಾಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.