ಹೊಸೂರು-ಬೆಂಗಳೂರು ಮೆಟ್ರೊ ಯೋಜನೆಗೆ ಅನುಮತಿ ಬೇಡ: ಕೆಪಿಸಿಸಿ ವಕ್ತಾರ ರಮೇಶ್ ಬಾಬು

Update: 2023-08-04 13:42 GMT

ಬೆಂಗಳೂರು, ಆ.4: ರಾಜ್ಯದ ಹಿತದೃಷ್ಟಿಯಿಂದ ಸದ್ಯದ ಪರಿಸ್ಥಿತಿಯಲ್ಲಿ ಹೊಸೂರು-ಬೆಂಗಳೂರು ಮೆಟ್ರೋ ಸಂಪರ್ಕ ಯೋಜನೆಗೆ ಅನುಮತಿ ನೀಡದಂತೆ ರಾಜ್ಯ ಸರಕಾರಕ್ಕೆ ಕೆಪಿಸಿಸಿ ವಕ್ತಾರ ರಮೇಶ್ ಬಾಬು ಮನವಿ ಮಾಡಿದ್ದಾರೆ. 

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪ್ರತ್ಯೇಕ ಪತ್ರ ಬರೆದಿರುವ ಅವರು, ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಸೇವೆಯನ್ನು ಬೆಂಗಳೂರು ನಗರದ ವಿವಿಧ ಭಾಗಗಳಿಗೆ ವಿಸ್ತರಿಸುವ ಅವಶ್ಯಕತೆ ಇದೆ. ಆದರೆ ಇಂತಹ ವಿಸ್ತರಣೆಯು ಬೆಂಗಳೂರು ಮತ್ತು ರಾಜ್ಯದ ಜನರಿಗೆ ಹೆಚ್ಚು ತಲುಪಬೇಕಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರಿಗೆ ನಮ್ಮ ರಾಜ್ಯದ ಜನರು ಉದ್ಯೋಗ ಮತ್ತು ವ್ಯಾಪಾರದ ಕಾರಣಕ್ಕಾಗಿ ವಲಸೆ ಬಂದರೆ ರಾಜ್ಯದ ಹಿತದೃಷ್ಟಿಯಿಂದ ಕನ್ನಡಿಗರ ಹಿತರಕ್ಷಣೆಯನ್ನು ರಾಜ್ಯ ಸರಕಾರ ಮಾಡಬೇಕಾಗಿದೆ. ಅದೇ ರೀತಿ ಬೆಂಗಳೂರಿನಲ್ಲಿ ನೆಲೆಸಿರುವ ಜನಸಾಮಾನ್ಯರಿಗೆ ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಮೂಲ ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ ಎಂದು ರಮೇಶ್ ಬಾಬು ಹೇಳಿದ್ದಾರೆ.

ರಾಜ್ಯದ ಹಿತದೃಷ್ಟಿಯಿಂದ ಮತ್ತು ಬೆಂಗಳೂರು ಮಹಾನಗರದಲ್ಲಿ ಸಾರಿಗೆ ದಟ್ಟಣೆಯ ಕಾರಣಕ್ಕಾಗಿ ಇತರೆ ರಾಜ್ಯದ ವಲಸಿಗರ ಮೇಲೆ ಅನಿವಾರ್ಯವಾಗಿ ನಿಯಂತ್ರಣವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹೇರಬೇಕಾಗಿದೆ. ಬೆಂಗಳೂರು ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ಕಾಸ್ಮೋಪಾಲಿಟಿನ್ ನಗರವಾಗಿದೆ ಎಂದು ಅವರು ತಿಳಿಸಿದ್ದಾರೆ.

ಇಲ್ಲಿನ ಬೆಳವಣಿಗೆಯ ಮೇಲೆ ಆರೋಗ್ಯಕರವಾದ ನಿಯಂತ್ರಣವನ್ನು ಹಾಕದೆ ಇದ್ದರೆ, ನಗರದಲ್ಲಿ ಸಾರಿಗೆ ಸಮಸ್ಯೆ ಜೊತೆಗೆ ಕುಡಿಯುವ ನೀರು, ವಿದ್ಯುತ್ ಪೂರೈಕೆ, ರಸ್ತೆ ನಿರ್ಮಾಣ ಹಾಗು ಇತರೆ ಮೂಲಭೂತ ಸೌಕರ್ಯಗಳ ಸಮಸ್ಯೆ ಹೆಚ್ಚಾಗುತ್ತದೆ. ಇವುಗಳ ಹಿನ್ನೆಲೆಯಲ್ಲಿ ತಮಿಳುನಾಡು ರಾಜ್ಯವು ಚೆನ್ನೈ ಮೆಟ್ರೋ ರೈಲ್ವೆ ಸಂಸ್ಥೆಯ ಮೂಲಕ ಹೊಸೂರು-ಬೆಂಗಳೂರು ಮಹಾನಗರಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸುವ ಪ್ರಯತ್ನವನ್ನು ಬೆಂಗಳೂರಿನ ದೃಷ್ಟಿಯಿಂದ ತಡೆಯಬೇಕಾಗಿದೆ ಎಂದು ಅವರು ಕೋರಿದ್ದಾರೆ.

ಅನೇಕ ಕನ್ನಡ ಸಂಘಟನೆಗಳು ಮತ್ತು ಜನಪರ ಸಂಘಟನೆಗಳು ಬೆಂಗಳೂರಿನ ಮತ್ತು ಕರ್ನಾಟಕದ ಹಿತರಕ್ಷಣೆಯ ದೃಷ್ಟಿಯಿಂದ ಹೊಸೂರು-ಬೆಂಗಳೂರು ಮೆಟ್ರೋ ಸಂಪರ್ಕಕ್ಕೆ ಅವಕಾಶ ನೀಡದಂತೆ ರಾಜ್ಯ ಸರಕಾರವನ್ನು ಒತ್ತಾಯ ಮಾಡಿವೆ ಎಂದು ರಮೇಶ್ ಬಾಬು ತಿಳಿಸಿದ್ದಾರೆ.

ರಾಜ್ಯ ಸರಕಾರವು ಸಾರಿಗೆ ವ್ಯವಸ್ಥೆಯನ್ನು ವಿಸ್ತಾರಗೊಳಿಸುವ ಹಿನ್ನೆಲೆಯಲ್ಲಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಸಂಪರ್ಕವೂ ಒಳಗೊಂಡಂತೆ ಬೆಂಗಳೂರಿನ ಎಲ್ಲ ಭಾಗಗಳಲ್ಲಿ ಮೆಟ್ರೋ ವ್ಯವಸ್ಥೆಯನ್ನು ಜಾರಿಗೊಳಿಸಲಿ. ಸದ್ಯದ ಪರಿಸ್ಥಿತಿಯಲ್ಲಿ ಹೊಸೂರು-ಬೆಂಗಳೂರು ಮೆಟ್ರೋ ರೈಲು ಸಂಪರ್ಕದ ಯಾವುದೇ ಪ್ರಸ್ತಾವಕ್ಕೆ ಅನುಮತಿ ನೀಡಬಾರದು ಎಂದು ಅವರು ಕೋರಿದ್ದಾರೆ.




 


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News