ಮುಂದಿನ ವರ್ಷದಿಂದ ಪಠ್ಯದಲ್ಲಿ ಸಂಚಾರ ನಿಯಮಗಳ ಕುರಿತ ವಿಷಯ ಅಳವಡಿಸಲು ಸಿದ್ಧತೆ: ಎಂ.ಎನ್.ಅನುಚೇತ್

Update: 2024-02-10 16:22 GMT

Photo: X/@Jointcptraffic

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ 1 ರಿಂದ 10ನೇ ತರಗತಿವರೆಗಿನ ಪಠ್ಯದಲ್ಲಿ ಸಂಚಾರ ನಿಯಮಗಳ ಕುರಿತ ಜಾಗೃತಿ ವಿಷಯ ಅಳವಡಿಸಲು ಸಿದ್ಧತೆ ನಡೆಸಲಾಗಿದೆ ಎಂದು ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.

ಶನಿವಾರ ನಗರದ ಸಂಚಾರ ಸಂಪರ್ಕ ದಿವಸ್ ಅಂಗವಾಗಿ ಪೀಣ್ಯ ಇಂಡಸ್ಟ್ರೀಯಲ್ ಅಸೋಸಿಯೇಷನ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಲಾಮಕ್ಕಳಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ 1ರಿಂದ 10ನೇ ತರಗತಿಗಳ ಮಕ್ಕಳಿಗೆ ಸಂಚಾರಿ ನಿಯಮಗಳ ಬಗ್ಗೆ ವಿಶೇಷ ಪಠ್ಯಕ್ರಮ ರಚಿಸಿದ್ದು, ಅದನ್ನು ಅಳವಡಿಸಿಕೊಳ್ಳುವುದಾಗಿ ಡಿಎಸ್‍ಇಆರ್ ಟಿ ಹೇಳಿದೆ ಎಂದರು.

30 ವರ್ಷಗಳಿಂದ ಸ್ಟೂಡೆಂಟ್ ಅಸೋಸಿಯೇಷನ್ ರೋಡ್ ಸೇಫ್ಟಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿ ವಾರ ಶಾಲೆಗಳಿಗೆ ಭೇಟಿ ನೀಡಿ 4ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ಗಂಟೆ ಕಾಲ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ನಗರ ವ್ಯಾಪ್ತಿಯ ಸುಮಾರು 1484 ಕಿ.ಮೀ. ಔಟರ್ ರಿಂಗ್ ರೋಡ್ ವ್ಯಾಪ್ತಿಯಲ್ಲಿ ಪಾದಚಾರಿ ಒತ್ತುವರಿ ತೆರವು ಕಾರ್ಯವನ್ನು ಬಿಬಿಎಂಪಿ ನಡೆಸುತ್ತಿದ್ದು, ಇದಕ್ಕೆ ನಾವು ಸಹಕರಿಸುತ್ತಿದ್ದೇವೆ. ಹಂತ ಹಂತವಾಗಿ ನಗರದ ಎಲ್ಲ ಪಾದಚಾರಿ ಮಾರ್ಗವನ್ನು ಸರಿಪಡಿಸಲಾಗುವುದು ಎಂದು ಎಂ.ಎನ್.ಅನುಚೇತ್ ಭರವಸೆ ನೀಡಿದರು.

ಇತ್ತೀಚೆಗೆ ಪಶ್ಚಿಮ ಸಂಚಾರ ವಿಭಾಗದ ವ್ಯಾಪ್ತಿಯಲ್ಲಿ ವಿಲ್ಹೀಂಗ್ ಮಾಡುತ್ತಿದ್ದ 16 ಜನರ ಗ್ಯಾಂಗ್‍ಅನ್ನು ಪತ್ತೆಹಚ್ಚಿದ್ದು, ಅವರೆಲ್ಲರೂ ಅಪ್ರಾಪ್ತರಾಗಿದ್ದಾರೆ. ಅವರ ಪೋಷಕರ ಬಳಿ 5 ಲಕ್ಷವರೆಗಿನ ಬಾಂಡ್ ಓವರ್ ಮಾಡಿಸಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಇದೇ ರೀತಿ ನಿಯಮ ಉಲ್ಲಂಘನೆಯಲ್ಲಿ ತೊಡಗಿಕೊಂಡರೆ ಅದನ್ನು ಜಪ್ತಿ ಮಾಡಿಕೊಳ್ಳಲಾಗುವುದು. ಬೈಕ್‍ಗಳಿಗೆ ಆಲ್ಟ್ರೇಷನ್ ಮಾಡುತ್ತಿದ್ದ ಗ್ಯಾರೇಜ್ ಮೇಲೆ ಕ್ರಿಮಿನಲ್ ಕೇಸ್ ಹಾಕಲಾಗಿದೆ ಎಂದು ಎಂ.ಎನ್.ಅನುಚೇತ್ ತಿಳಿಸಿದರು.

ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮಾತನಾಡಿ, ವೀಲ್ಹಿಂಗ್ ಮಾಡುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತಿದೆ. ಹೆಚ್ಚಿನವರು ಅಪ್ರಾಪ್ತರಾಗಿರುವುದರಿಂದ ಅವರ ಪೋಷಕರಿಗೆ ದಂಡ ವಿಧಿಸಲಾಗುತ್ತಿದೆ. 10 ಸಾವಿರದಿಂದ 5 ಲಕ್ಷದವರಗೆ ದಂಡ ಹಾಕಿದ್ದೇವೆ. ಸಂಚಾರಿ ಸಮಸ್ಯೆಗಳು ಬದಲಾದಂತೆ ನಾವು ಸಹ ತಂತ್ರಜ್ಞಾನ ಬದಲಾಯಿಸಿಕೊಂಡು ಸಂಚಾರ ನಿರ್ವಹಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಪೀಣ್ಯ ಇಂಡಸ್ಟ್ರೀಯಲ್ ಅಸೋಸಿಯೇಷನ್ ಅಧ್ಯಕ್ಷ ಎಚ್.ಎಂ.ಆರೀಫ್ ಮಾತನಾಡಿ, ಪೀಣ್ಯ ಇಂಡಸ್ಟ್ರೀಯಲ್ ವ್ಯಾಪ್ತಿಯಲ್ಲಿ ಮುಖ್ಯ ಸಮಸ್ಯೆ ಏನೆಂದರೆ ಜನದಟ್ಟಣೆ. ಇಲ್ಲಿ ಕೈಗಾರಿಕೆಗಳು ಪ್ರಾರಂಭವಾಗುವ ಬೆಳಿಗ್ಗೆ 8 ರಿಂದ 9, ಸಂಜೆ 5 ರಿಂದ 7.30ರವರೆಗೆ ಹೆಚ್ಚು ಇರುತ್ತದೆ. ಇದನ್ನು ನಿಯಂತ್ರಿಸಲು ಹೆಚ್ಚು ದಟ್ಟಣೆ ಉಂಟಾಗುವ ಬ್ಲಾಕ್ ಸ್ಪಾಟ್‍ಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು. ಪೀಣ್ಯ ಕೈಗಾರಿಕಾ ವಲಯಕ್ಕೆ ಸರಕುಗಳನ್ನು ಹೊತ್ತು ಬರುವ ಲಾರಿಗಳನ್ನು ನೆಲಮಂಗಲ ಬಳಿಯೇ ತಡೆಯಲಾಗುತ್ತಿದೆ. ಪೀಣ್ಯ ಕೈಗಾರಿಕೆಗಳ ಬಿಲ್ ಹೊಂದಿರುವ ಲಾರಿಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದರು.

ಈ ಸಂದರ್ಭದಲ್ಲಿ ಉತ್ತರ ಸಂಚಾರ ವಿಭಾಗದ ಡಿಸಿಪಿ ಸಿರಿಗೌರಿ ಮತ್ತು ಪೊಲೀಸ್ ಅಧಿಕಾರಿಗಳು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News