ಕಾಂಗ್ರೆಸ್ ಅಭಿವೃದ್ಧಿ ನೋಡಿ ಬಿಜೆಪಿಯವರಿಗೆ ಭ್ರಮನಿರಸನವಾಗಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Update: 2024-03-06 11:18 GMT

ಅಥಣಿ: ಕಾಂಗ್ರೆಸ್ ಸರಕಾರ ಗ್ಯಾರಂಟಿಯ ಜೊತೆಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದರೂ ಬಿಜೆಪಿಯವರ ಕಣ್ಣಿಗೆ ಇದೆಲ್ಲ ಕಾಣುತ್ತಿಲ್ಲವೇ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನಿಸಿದ್ದಾರೆ.

ಅಥಣಿಯಲ್ಲಿ ಬುಧವಾರ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

"ಕಾಂಗ್ರೆಸ್ ಎಂದರೆ ಬದ್ದತೆ, ಬಸವಣ್ಣನವರು ಕಂಡ ಸಮಾನತೆಯ ಕನಸನ್ನು ನನಸು ಮಾಡುವ ಪಕ್ಷ. ಆದರೆ ಬಿಜೆಪಿಯವರು ನಮ್ಮ ಗ್ಯಾರಂಟಿಗಳ ಬಗ್ಗೆ ಬಹಳಷ್ಟು ಕೀಳಾಗಿ ಮಾತನಾಡಿದರು. ಗ್ಯಾರಂಟಿ ಸುಳ್ಳು ಎಂದರು, ಗ್ಯಾರಂಟಿಯಿಂದ ಮಹಿಳೆಯರು ದೇವಸ್ಥಾನಗಳಿಗೆ ತಿರುಗುತ್ತಿದ್ದಾರೆ, ಗಂಡಸರು ಕುಡಿದು ಹಾಳಾಗುತ್ತಿದ್ದಾರೆ ಎಂದು ಅವಮಾನ ಮಾಡಿದರು. ಆದರೆ ಮಹಿಳಾ ಸ್ವಾವಲಂಬನೆ ಕಾಂಗ್ರೆಸ್ ಬದ್ದತೆ. ಅದನ್ನು ಅತ್ಯಂತ ಸಮರ್ಥವಾಗಿ ಈಡೇರಿಸಿದ್ದೇವ" ಎಂದು ಅವರು ಹೇಳಿದರು.

"1.20 ಕೋಟಿ ಮನೆಯ ಯಜಮಾನಿಯರು ಗೃಹಲಕ್ಷ್ಮೀ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಎಲ್ಲ 5 ಗ್ಯಾರಂಟಿಗಳನ್ನು ಈಡೇರಿಸಿ ಕಾಂಗ್ರೆಸ್ ಪಕ್ಷ ಜನಪ್ರಿಯತೆ ಪಡೆಯುತ್ತಿರುವುದನ್ನು ಬಿಜೆಪಿಯವರಗೆ ಸಹಿಸಿಕೊಳ್ಳಲು ಆಗುವುದಿಲ್ಲ. 5 ಗ್ಯಾರಂಟಿ ಯೋಜನೆಗೆ ತಿಂಗಳಿಗೆ 5 ಸಾವಿರ ಕೋಟಿ ರೂ ನೀಡಲಾಗುತ್ತಿದೆ. ಜೊತೆಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುತ್ತಿರುವುದು ಬಿಜೆಪಿಯವರಿಗೆ ಕಣ್ಣಿಗೆ ಕಾಣುತ್ತಿಲ್ಲ. ಅವರಿಗೆ ಭ್ರಮನಿರಸನವಾಗಿದೆ‌" ಎಂದು ಹೆಬ್ಬಾಳ್ಕರ್ ಹೇಳಿದರು.

ಕೇವಲ ಶ್ರೀಮಂತರು ಶ್ರೀಮಂತರಾದರೆ ರಾಷ್ಟ್ರ ಬೆಳೆಯುವುದಿಲ್ಲ. ಬಡವರ ಹೊಟ್ಟೆ ತುಂಬಬೇಕು, ಬಡವರು ಸ್ವಾವಲಂಬಿ ಜೀವನ ನಡೆಸಬೇಕು. ಅಂತಹ ಅವಕಾಶವನ್ನು ಕಾಂಗ್ರೆಸ್ ಸರಕಾರ ನೀಡುತ್ತಿದೆ ಎಂದು ನುಡಿದರು.

ಲಕ್ಷ್ಮಣ ಸವದಿಯವರು ತಮ್ಮ ಕ್ಷೇತ್ರದ ಜನರಿಗೆ ನೀರಾವರಿ ಯೋಜನೆ ಬೇಕೆನ್ನುವ ಬೇಡಿಕೆಯನ್ನು ಮಾತ್ರ ಕಾಂಗ್ರೆಸ್ ಸೇರುವಾಗ ಇಟ್ಟಿದ್ದರು. ಅದರಂತೆ ಈಗ 1486 ಕೋಟಿ ರೂ.ಗಳ ಈ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಮಂಜೂರಾಗಿದೆ. ನನ್ನ ಕ್ಷೇತ್ರಕ್ಕೆ ಕೂಡ 800 ಕೋಟಿ ರೂ.ಗಳ ಯೋಜನೆ ಮಂಜೂರು ಮಾಡಲಾಗಿದೆ. 2018ರಲ್ಲೇ ಯೋಜನೆ ಮಂಜೂರಾಗಿತ್ತು. ಆದರೆ ನಂತರ ಬಂದ ಸರಕಾರ ನನಗೆ ಹೆಸರು ಬರುತ್ತದೆ ಎಂದು ಹೇಳಿ ನನ್ನ ಕ್ಷೇತ್ರದ ಯೋಜನೆ ತಡೆದಿದ್ದರು. ಈಗ ಮತ್ತೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಅವರು ಯೋಜನೆಗೆ ಮಂಜೂರಾತಿ ನೀಡಿದ್ದಾರೆ. ಅವರಿಗೆ ನಾನು ಕೋಟಿ ಕೋಟಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏತ ನೀರಾವರಿ ಯೋಜನೆಯನ್ನು ಉದ್ಘಾಟಿಸಿದರು. ಶಾಸಕರಾದ ಲಕ್ಷ್ಮಣ್ ಎಂ‌ ಸವದಿ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಡಿಸಿಎಂ ಹಾಗೂ ಬೃಹತ್ ನೀರಾವರಿ ಸಚಿವರಾದ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಬ ಹಟ್ಟಿಹೊಳಿ, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್, ಶಾಸಕರಾದ ಮಹೇಂದ್ರ ತಮ್ಮಣ್ಣವರ, ಅಶೋಕ ಮ ಪಟ್ಟಣ, ಮಹಾರಾಷ್ಟ್ರದ ಮಾಜಿ ಸಚಿವ ವಿಶ್ವಜಿತ್ ಕದಂ ಸೇರಿ ಹಲವು ನಾಯಕರು ವೇದಿಕೆಯಲ್ಲಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News