100 ದಿನಗಳಲ್ಲಿ ಹಣ ದುಪ್ಪಟ್ಟು ನೀಡುವ ಆಮಿಷ; ಬಳ್ಳಾರಿಯಲ್ಲಿ ಕೋಟ್ಯಾಂತರ ರೂ. ವಂಚನೆ

Update: 2025-04-13 21:53 IST
100 ದಿನಗಳಲ್ಲಿ ಹಣ ದುಪ್ಪಟ್ಟು ನೀಡುವ ಆಮಿಷ; ಬಳ್ಳಾರಿಯಲ್ಲಿ ಕೋಟ್ಯಾಂತರ ರೂ. ವಂಚನೆ

ಸಾಂದರ್ಭಿಕ ಚಿತ್ರ

  • whatsapp icon

ಬಳ್ಳಾರಿ: ವಂಚನೆಗೆ ಒಳಗಾಗುವರು ಇರುವವರೆಗೂ ವಂಚನೆ ಮಾಡುವವರೂ ಇದ್ದೇ ಇರ್ತಾರೆ. ದಿಢೀರ್ ಲಾಭ, ದುಪ್ಪಟ್ಟು ಲಾಭ ಸುಮ್ಮನೆ ಬರುವುದಿಲ್ಲ. ಪ್ರತಿ ಬಾರಿ ಒಂದು ಹೊಸ ರೀತಿಯನ್ನು ವಂಚಕರು ಕಂಡುಕೊಳ್ತಾರೆ, ಅದಕ್ಕೆ ಸುಲಭ ಲಾಭದ ದುರಾಸೆಯಲ್ಲಿ ಜನರು ವಂಚನೆಗೊಳಗಾಗುತ್ತಿರುವುದು ಈಗ ಸಾಮಾನ್ಯ ಎಂಬಂತಾಗಿದೆ.

ಇದೀಗ ಅಂತಹ ವಂಚನೆ ಪ್ರಕರಣವೊಂದು ಈಗ ಬಳ್ಳಾರಿಯಿಂದ ವರದಿಯಾಗಿದೆ. ಬಳ್ಳಾರಿಯಲ್ಲಿ ಆಂಧ್ರ ಮೂಲದ ವ್ಯಕ್ತಿಯೊಬ್ಬ ನಡೆಸುತ್ತಿದ್ದ ಚೀಟಿ ವ್ಯವಹಾರದಲ್ಲಿ 100 ದಿನಗಳಲ್ಲಿ ಹಣ ದುಪ್ಪಟ್ಟು ಮಾಡುವುದಾಗಿ ಭರವಸೆ ನೀಡಿ 900 ಜನರಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಕನೊಬ್ಬ ಪರಾರಿಯಾಗಿದ್ದು, ಇದೀಗ ಈ ಮೋಸದ ಜಾಲ ಭೇದಿಸುವ ಹೊಸ ಸವಾಲು ಪೊಲೀಸರಿಗೆ ಎದುರಾಗಿದೆ.

ಈ ವಂಚನೆಯ ಬಲೆಯಲ್ಲಿ  ಶಾಲಾ-ಕಾಲೇಜು ಶಿಕ್ಷಕರು, ಉಪನ್ಯಾಸಕರು, ಖಾಸಗಿ ಕಂಪನಿ ಉದ್ಯೋಗಿಗಳು, ಕೆಲ ಪೊಲೀಸ್ ಸಿಬ್ಬಂದಿಯೂ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.

ಮೂರು ವರ್ಷಗಳ ಹಿಂದೆ ಆಂಧ್ರಪ್ರದೇಶದ ಗುಂತಕಲ್ ದಿಂದ ಬಳ್ಳಾರಿ ನಗರಕ್ಕೆ ಬಂದ ವಿಶ್ವನಾಥ ಎಂಬಾತ ಇಲ್ಲಿನ ಕುಂಬಾರ ಓಣಿಯಲ್ಲಿ ವಾಸವಾಗಿದ್ದ. ಗುರೆಳ್ಳು, ಚಟ್ನಿ, ನಾನಾ ಪುಡಿ ಮಾರಾಟ ಮಾಡುತ್ತಲೇ ಸ್ಥಳೀಯರ ವಿಶ್ವಾಸ ಗಳಿಸಿದ್ದ ಎನ್ನಲಾಗಿದೆ. ನಂತರ ಅನಧಿಕೃತ ಚೀಟಿ ವ್ಯವಹಾರ ಆರಂಭಿಸಿದ್ದ ಈತ ಮೊದಲಿಗೆ ಕಿರಾಣಿ ಸಾಮಾಗ್ರಿ ಮಾರಾಟದಲ್ಲಿ ಹಣ ದ್ವಿಗುಣಗೊಳಿಸುವ ಆಸೆ ಹುಟ್ಟಿಸಿ ಜನರನ್ನು ತನ್ನತ್ತ ಸೆಳೆಯುವ ಹೊಸ ತಂತ್ರ ಹೆಣೆದಿದ್ದಾನೆ ಎಂದು ಆರೋಪಿಸಲಾಗಿದೆ.

‌ಆರೋಪಿ ವಿಶ್ವನಾಥ್ ಬಳಿ ಮೂರು ಸಾವಿರ ರೂಪಾಯಿ ಮೌಲ್ಯದ ಕಿರಾಣಿ ಸಾಮಾಗ್ರಿ ಖರೀದಿಸಿದರೆ, ಗ್ರಾಹಕರು ಆರು ಸಾವಿರ ರೂಪಾಯಿ ಕೊಡಬೇಕು. 1 ತಿಂಗಳ ಬಳಿಕ ಆತ 6 ಸಾವಿರ ರೂಪಾಯಿ ಹಿಂತಿರುಗಿಸುತ್ತಿದ್ದ. ಕಿರಾಣಿ ಸಾಮಗ್ರಿ ಉಚಿತವಾಗಿ ದೊರೆಯಲಿದೆ ಎಂದು ನಂಬಿಸಿದ್ದ. ಇದಾದ ಬಳಿಕ, ಹಣ ಪಾವತಿಸಿಕೊಂಡು ಸೂಚಿಸಿದ ಬಂಕ್ ಗಳಲ್ಲಿ ಚೀಟಿ ನೀಡಿ ಪೆಟ್ರೋಲ್, ಡೀಸೆಲ್ ಅನ್ನು ಉಚಿತವಾಗಿ ಹಾಕಿಸಿಕೊಡುತ್ತಿದ್ದ. ವಿದ್ಯುತ್ ಬಿಲ್, ವಾಟರ್ ಬಿಲ್, ಸಿಲಿಂಡರ್ ಶುಲ್ಕ ಪಾವತಿಯಲ್ಲೂ ಹಣ ಪಡೆದು ಹಿಂತಿರುಗಿಸಿ ನೂರಾರು ಜನರ ನಂಬಿಕೆಯನ್ನು ಗಳಿಸಿದ್ದ ಎನ್ನಲಾಗಿದೆ.

ಮುಂದಿನ ತಂತ್ರದ ಭಾಗವಾಗಿ ಜನರು ಹೂಡಿಕೆ ಮಾಡಿದ ಹಣಕ್ಕೆ 100 ದಿನಗಳ ಬಳಿಕ ಡಬಲ್ ಹಣ ನೀಡುವುದಾಗಿ ಹೇಳಿದ್ದಾನೆ. ಆರಂಭದಲ್ಲಿ ನೂರಾರು ಜನರಿಗೆ ಹೇಳಿದಂತೆ ಡಬಲ್ ಹಣವನ್ನೂ ಪಾವತಿಸಿದ್ದಾನೆ. ಆದರೆ, ಜನರು ಹೆಚ್ಚಿನ ಲಾಭದಾಸೆಗೆ ಮತ್ತೆ ಹೆಚ್ಚೆಚ್ಚು ಹಣ ಹೂಡಿಕೆ ಮಾಡಲು ಮುಂದಾಗುತ್ತಿದ್ದಂತೆ ಅಸಲು ಹಣ, ಹೆಚ್ಚು ಹಣ ಯಾವುದನ್ನೂ ಕೊಡದೇ ಆರೋಪಿ ಪರಾರಿಯಾಗಿದ್ದಾನೆ.

ಹರ್ಬಲ್ ಡ್ರಿಂಕ್ಸ್ ಕುಡಿದವರಿಗೆ ಬಹುಮಾನ:

ಹರ್ಬಲ್ ಡ್ರಿಂಕ್ಸ್ ಕುಡಿದು ವಿಡಿಯೋ ಮಾಡಿ ಕಳಿಸಿದವರಿಗೆ 2000 ಹಣ ಕೊಡುವುದಾಗಿಯೂ ವಿಶ್ವನಾಥ್ ನಂಬಿಸಿದ್ದ. ಇದಕ್ಕೆ ಹೂಡಿಕೆದಾರರನ್ನು ಕರೆತಂದವರಿಗೆ ಸ್ಥಳದಲ್ಲಿಯೇ ನಗದು ಬಹುಮಾನ ಕೊಡುವುದಾಗಿ ಹೇಳಿ ಜಾಲವನ್ನು ವಿಸ್ತರಿಸಿದ್ದಾನೆ. ಈ ವಂಚನೆ ವ್ಯವಹಾರಗಳಲ್ಲಿ ಶಾಲಾ, ಕಾಲೇಜು ಶಿಕ್ಷಕರು, ಉಪನ್ಯಾಸಕರು, ಖಾಸಗಿ ಕಂಪನಿ ಉದ್ಯೋಗಿಗಳು, ಕೆಲ ಪೊಲೀಸ್ ಸಿಬ್ಬಂದಿಯೂ ಹಣ ಹೂಡಿಕೆ ಮಾಡಿದ್ದಾರೆನ್ನಲಾಗಿದೆ.

ಅನಧಿಕೃತವಾಗಿ ಚೀಟಿ ವ್ಯವಹಾರದ ಬಗ್ಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕ ಗ್ಯಾನಪ್ಪ ಅವರು ಎಪ್ರಿಲ್ 2ರಂದು ಬ್ರೂಸ್ ಪೇಟೆ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಪೊಲೀಸರು ಅದೇ ದಿನ ಆರೋಪಿ ವಿಶ್ವನಾಥ್‌ ನ ಅಂಗಡಿ, ಕಚೇರಿ ಮೇಲೆ ದಾಳಿ ನಡೆಸಿ 19.38 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.

'ಜನರನ್ನು ನಂಬಿಸಿ ಅನಧಿಕೃತ ಚೀಟಿ ವ್ಯವಹಾರ ಮಾಡುತ್ತಿದ್ದ ವ್ಯಕ್ತಿ ವಿರುದ್ಧ ಸಹಕಾರ ಸಂಘಗಳ ಸಹಾಯಕ ನಿಬಂಧಕರು ನೀಡಿದ ದೂರಿನ ಮೇರೆಗೆ ದಾಳಿ ನಡೆಸಲಾಗಿತ್ತು. ಆಗ ವಂಚನೆಗೆ ಒಳಗಾದ ಜನ ಠಾಣೆಗೆ ದೂರು ನೀಡಿರಲಿಲ್ಲ. ಚೀಟಿ ವ್ಯವಹಾರ ಮಾಡಿದ ವ್ಯಕ್ತಿ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಬಲೆ ಬೀಸಲಾಗಿದೆ' ಎಂದು ಬಳ್ಳಾರಿಯ ಎಸ್ಪಿ, ಡಾ. ವಿ.ಜೆ.ಶೋಭಾರಾಣಿ ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News