ಚಿಕ್ಕಮಗಳೂರು: ಜಿಲ್ಲಾದ್ಯಂತ ಚಾರಣ ಪ್ರವಾಸೋದ್ಯಮ ಬಂದ್

Update: 2024-02-04 18:26 GMT

ಚಿಕ್ಕಮಗಳೂರು: ಕಾಫಿನಾಡು ಪ್ರಕೃತಿ ವೈಭವದ ಒಡಲಾಗಿದೆ. ಇಲ್ಲಿ ಧಾರ್ಮಿಕ ಪ್ರವಾಸೋದ್ಯಮ, ಪ್ರಾಕೃತಿಕ ಪ್ರವಾಸೋದ್ಯಮದ ಜತೆಗೆ ಪರಿಸರವನ್ನು ಹತ್ತಿರದಿಂದ ಅನುಭವಿಸಿ ಆನಂದಿಸುವ ಚಾರಣ ಪ್ರವಾಸೋದ್ಯಮವೂ ಇದೆ. ಚಾರಣ ಪ್ರವಾಸೋದ್ಯಮಕ್ಕೆ ಕಡಿವಾಣ ಹಾಕಲು ಸರಕಾರ ಮುಂದಾಗಿದ್ದು, ಆನ್‍ಲೈನ್ ಬುಕ್ಕಿಂಗ್ ವ್ಯವಸ್ಥೆಯಂತಹ ಕಠಿಣ ನಿಯಮಗಳನ್ನು ಹೇರಲು ಸರಕಾರ ಮುಂದಾಗಿರುವುದರಿಂದ ಚಾರಣ ಪ್ರಿಯರು ಇನ್ನು ಮುಂದೆ ಬೇಕಾಬಿಟ್ಟಿ ಬೆಟ್ಟ ಗುಡ್ಡ ಹತ್ತುವಂತಿಲ್ಲ. ಚಾರಣ ಹೊರಡುವವರು ಇನ್ನು ಮುಂದೆ ಆನ್‍ಲೈನ್‍ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳುವುದು ಕಡ್ಡಾಯವಾಗಲಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಎತ್ತಿನಭುಜ, ರಾಣಿಝೇರಿ, ಕೆಮ್ಮಣ್ಣಗುಂಡಿ ಸೇರಿದಂತೆ ಅನೇಕ ಟ್ರಕ್ಕಿಂಗ್ ಸ್ಪಾಟ್‍ಗಳಿವೆ. ಟ್ರಕ್ಕಿಂಗ್ ಸ್ಪಾಟ್‍ಗಳಿಗೆ ಜನರು ಮನಸೋ ಇಚ್ಚೆ ಬೇಟಿ ನೀಡುತ್ತಿದ್ದು, ಇದು ಇಲ್ಲಿನ ವನ್ಯಜೀವಿಗಳಿಗೆ ಪ್ರತಿನಿತ್ಯ ಕಿರಿಕಿರಿ ಉಂಟಾಗುತ್ತಿದೆ. ಈ ಕಾರಣಕ್ಕೆ ಸರಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಲು ಸರಕಾರ ಮುಂದಾಗಿದ್ದು, ಸದ್ಯ ಜಿಲ್ಲೆಯಲ್ಲಿ ಟ್ರಕ್ಕಿಂಗ್ ಬಂದ್‍ಗೊಳಿಸಲಾಗಿದೆ. ಸರಕಾರ ನಿಯಮಗಳನ್ನು ಜಾರಿಗೊಳಿಸುವರೆಗೂ ಟ್ರಕ್ಕಿಂಗ್ ಪ್ರಿಯರು ಕಾಯಬೇಕಿದೆ.

ಇತ್ತೀಚೆಗೆ ಪಶ್ಚಿಮಘಟ್ಟದ ಕುಮಾರ ಪರ್ವತದಲ್ಲಿ ಚಾರಣ ಹೊರಟ ಜನರ ದೊಡ್ಡ ಗುಂಪು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಎಚ್ಚೆತ್ತುಕೊಂಡಿರುವ ಸರಕಾರ ಈ ನಿಯಮಗಳ ಜಾರಿಗೆ ಮುಂದಾಗಿದೆ. ಆನ್‍ಲೈನ್ ಬುಕ್ಕಿಂಗ್‍ನಿಂದ ನಿರ್ದಿಷ್ಟ ಜನರು ಮಾತ್ರ ಟ್ರಕ್ಕಿಂಗ್‍ಗೆ ಹೋಗಬೇಕು. ಜನದಟ್ಟಣೆ ಕಡಿವಾಣ ಬಿಳಲಿದೆ. ವನ್ಯ ಪ್ರಾಣಿಗಳಿಗೆ ಕಿರಿಕಿರಿಯಾಗದಂತೆ ನಡೆದುಕೊಳ್ಳುವುದರ ಜತೆಗೆ ಪ್ಲಾಸ್ಟಿಕ್ ಸೇರಿದಂತೆ ಮಧ್ಯದ ಬಾಟಲಿಗಳು, ತಿಂಡಿ ತಿನಿಸುಗಳನ್ನು ಎಲ್ಲೆಂದರಲ್ಲಿ ಎಸೆಯುವುದಕ್ಕೆ ಕಡಿವಾಣ ಬಿಳಲಿದೆ. ಈ ನಿಟ್ಟಿನಲ್ಲಿ ಸರಕಾರ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ.

ಮಲೆನಾಡು ಭಾಗದಲ್ಲಿ ವಾರಾಂತ್ಯ ಬಂದರೇ ಪ್ರವಾಸಿತಾಣಗಳು ಜನಜಂಗುಳಿಯಿಂದ ತುಂಬಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಬೆಂಗಳೂರು ಸೇರಿದಂತೆ ಮಹಾನಗರಗಳ ದಿನನಿತ್ಯದ ಜಂಜಾಟದಿಂದ ರಿಲ್ಯಾಕ್ಸ್ ಮಾಡಲು ಇಲ್ಲಿಗೆ ಬರುತ್ತಾರೆ. ವಾರಾಂತ್ಯದ ದಿನಗಳಲ್ಲಿ ಮಲೆನಾಡಿನ ಯಾವುದೇ ಕಾಡಿನ ರಸ್ತೆಗಳನ್ನು ನೋಡಿದರೂ ವಾಹನಗಳ ಸಾಲು, ಕರ್ಕಶ ಶಬ್ಧ, ಪ್ಲಾಸ್ಟಿಕ್ ಗಳಿಂದಾಗಿ ಕಾಡಿನ ವನ್ಯಜೀವಿಗಳಿಗೆ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ.

ಪ್ರವಾಸಿಗರು ಜವಬ್ದಾರಿಯಿಂದ ನಡೆದುಕೊಳ್ಳದೆ ಬೇಕಾಬಿಟ್ಟಿಯಾಗಿ ನಡೆದುಕೊಳ್ಳುತ್ತಿರುವುದರಿಂದ ವನ್ಯಜೀವಿಗಳಿಗೆ ನಿತ್ಯ ಕಿರಿಕಿರಿಯಾಗುತ್ತಿದೆ. ಪೋಟೋ ಕ್ಲಿಕ್ಕಿಸಿಕೊಳ್ಳುವ ಹುಂಬತನದಿಂದ ಅವಘಡಗಳು ನಡೆಯುತ್ತಿವೆ.  ಈ ನಿಟ್ಟಿನಲ್ಲಿ ಒಂದಿಷ್ಟು ನಿಯಮಗಳನ್ನು ರೂಪಿಸಬೇಕೆಂಬ ಕೂಗು ಜಿಲ್ಲೆಯಲ್ಲಿ ಪರಿಸರ ಪ್ರೇಮಿಗಳಿಂದ ಕೇಳಿ ಬಂದಿದೆ.

ಜಿಲ್ಲೆಯಲ್ಲಿ ಅನೇಕ ಪ್ರವಾಸಿತಾಣಗಳ ಜತೆಗೆ ಚಾರಣ ಕೇಂದ್ರಗಳಿವೆ. ಸರಕಾರ ಚಾರಣ ಪ್ರದೇಶದಲ್ಲಿ ಚಾರಣಕ್ಕೆ ತೆರಳಲು ಕೆಲವು ನಿಯಮಗಳನ್ನು ರೂಪಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ ಚಾರಣ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ಚಾರಣ ತೆರಳುವವರು ಆನ್‍ಲೈನ್‍ನಲ್ಲಿ ಬುಕ್ ಮಾಡಬೇಕು. ನಿರ್ದಿಷ್ಟ ಸಂಖ್ಯೆಯ ಜನರು ಚಾರಣಕ್ಕೆ ತೆರಳಲು ಅವಕಾಶ ನೀಡಲಾಗುತ್ತದೆ. ಚಾರಣ ತೆರಳಿದಾಗ ಅಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ನಿಯಮಗಳನ್ನು ರೂಪಿಸಲಾಗುತ್ತದೆ. ಸರಕಾರ ನಿಯಮಗಳನ್ನು ರೂಪಿಸುತ್ತಿದ್ದು, ಅಲ್ಲಿಯವರೆಗೂ ಚಾರಣಕ್ಕೆ ಜಿಲ್ಲಾದ್ಯಂತ ಅವಕಾಶ ಇರುವುದಿಲ್ಲ.

ರಮೇಶ್‍ಬಾಬು, ಡಿಎಫ್‍ಒ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News