ಚಿಕ್ಕಮಗಳೂರು | 20 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ನಕ್ಸಲ್ ಸುರೇಶ್ ಬಂಧನ

Update: 2024-02-17 07:38 GMT

ಸುರೇಶ್

ಚಿಕ್ಕಮಗಳೂರು : ಇಪ್ಪತ್ತು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಮೂಡಿಗೆರೆಯ ಅಂಗಡಿ ಗ್ರಾಮದ ನಕ್ಸಲ್ ಸುರೇಶ್ ಎಂಬ ವ್ಯಕ್ತಿಯನ್ನು ಕೇರಳದ ಕಣ್ಣೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಮಲೆನಾಡಿನ ನಕ್ಸಲ್ ಚಳುವಳಿಯ ಪ್ರಮುಖರಲ್ಲಿ ಒಬ್ಬನಾಗಿದ್ದ ಸುರೇಶ್ ಅಲಿಯಾಸ್ ಮಹದೇವ ಕೇರಳದ ಕಣ್ಣೂರಿನ ಅರಣ್ಯದಲ್ಲಿ ಸಿಕ್ಕಿ ಬಿದ್ದಿದ್ದಾನೆ. ಕಾಡಾನೆ ದಾಳಿ ಮಾಡಿದ ವೇಳೆ ಗಾಯಗೊಂಡು ಬಿದ್ದಿದ್ದ ಸುರೇಶ್ ನನ್ನು ಮೊದಲು ಚಿಕಿತ್ಸೆ ಕೊಡಿಸಿದ ಅಲ್ಲಿನ ಪೊಲೀಸರು ನಂತರ ವಿಳಾಸ ವಿಚಾರಣೆ ವೇಳೆ ಈತನನ್ನು ನಕ್ಸಲ್ ಎಂದು ಗುರುತಿಸಿದ್ದಾರೆ. ಮೂಲತಃ ಮೂಡಿಗೆರೆ ತಾಲೂಕಿನ ಗೋಣಿಬೀಡಿನ ಅಂಗಡಿ ಗ್ರಾಮದ ಸುರೇಶ್ ಇಪ್ಪತ್ತು ವರ್ಷಗಳಿಂದ ಕಣ್ಮರೆಯಾಗಿ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದ ಎನ್ನಲಾಗಿದೆ.

ಸರಕಾರ ಇವನನ್ನು ಹಿಡಿದು ಕೊಟ್ಟವರಿಗೆ 5 ಲಕ್ಷ ಬಹುಮಾನ ಸಹ ಘೋಷಿಸಿತ್ತು. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಹತ್ತಕ್ಕೂ ಹೆಚ್ಚು ನಕ್ಸಲೀಯ ಕೃತ್ಯ ಪ್ರಕರಣಗಳಲ್ಲಿ ಈತನು ಆರೋಪಿಯಾಗಿದ್ದ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News