ತನ್ನ ವಿರುದ್ಧ ಸ್ವಪಕ್ಷದ ಕಾರ್ಯಕರ್ತರು ನಡೆಸಿದ ʼಪತ್ರ ಅಭಿಯಾನʼದ ಬಗ್ಗೆ ಸಂಸದೆ ಶೋಭಾ ಪ್ರತಿಕ್ರಿಯಿಸಿದ್ದು ಹೀಗೆ...

Update: 2024-02-24 09:26 GMT

ಚಿಕ್ಕಮಗಳೂರು: ನಮ್ಮ ಪಕ್ಷವೇ ಆಗಲಿ, ವಿರೋಧ ಪಕ್ಷವೇ ಆಗಲಿ ಅಭಿವೃದ್ಧಿ ಆಧಾರದಲ್ಲಿ ಚರ್ಚೆ ಗೆ ಸಿದ್ದ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಶನಿವಾರ  ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಮೇಲೆ ಸುಳ್ಳು ಆರೋಪವನ್ನು ಮಾಡಲಾಗುತ್ತಿದೆ. ನಿಜವಾದ ಬೆಜೆಪಿ ಕಾರ್ಯಕರ್ತರು ಈ ರೀತಿ ಆರೋಪವನ್ನು ಮಾಡುವುದಿಲ್ಲ. ಯಾರೋ ಈ ರೀತಿ ಮಾಡಿಸಿದ್ದಾರೆ. ಅಧಿಕಾರಕ್ಕಾಗಿ ನಮ್ಮ ಪಕ್ಷಕ್ಕೆ ಬಂದವರು ಈ ರೀತಿ ಮಾಡಿಸಿರಬಹುದು, ಅವರು ಹಿಂದಿದ್ದ ಪಕ್ಷದಲ್ಲಿ ಇಂತಹ ಚಾಳಿಯನ್ನು ನಡೆಸಿದ್ದಾರೆ. ಇಲ್ಲೂ ನಡೆಸಿದ್ದಾರೆ. ಇದ್ಯಾವುದಕ್ಕೂ ತಲೆ ಕಡೆಸಿಕೊಳ್ಳುವುದಿಲ್ಲ ಎಂದು ತಮ್ಮ ವಿರುದ್ಧದ ʼಗೋ ಬ್ಯಾಕ್ ಶೋಭಾʼ ಅಭಿಯಾನಕ್ಕೆ ತಿರುಗೇಟು ನೀಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟಿಕೆಟ್ ಕೇಳಲು ಎಲ್ಲರಿಗೂ ಅವಕಾಶವಿದೆ. ಆದರೆ, ಇನ್ನೊಬ್ಬರನ್ನು ತೇಜೋವಧೆ ಮಾಡುವ ಕೆಲಸ ಮಾಡಬಾರದು. ಅಭಿಯಾನ, ಪತ್ರ ಚಳುವಳಿ ಯಾವುದೂ ಎಫೆಕ್ಟ್ ಆಗಲ್ಲ. ಇದೇ‌ ರೀತಿ ಹಿಂದಿನ ಚುನಾವಣೆ ಯಲ್ಲೂ ಮಾಡಿದ್ದರು. ನಾವು ನಮ್ಮ ವಿರುದ್ದ ನಿಲ್ಲುವ ಅಭ್ಯರ್ಥಿಯನ್ನು ಅಲ್ಲಗಳೆಯುವುದಿಲ್ಲ. ಅಭಿವೃದ್ಧಿ ಆಧಾರದ ಮೇಲೆ ಮತದಾರರ ಬಳಿ ತೆರಳುತ್ತೇವೆ ಎಂದರು.

ಚಿಕ್ಕಮಗಳೂರು- ಉಡುಪಿ ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದೇನೆಂಬ ಮಾಹಿತಿ ನನಗೂ ಇದೆ.ಕೇಂದ್ರದ ಮಂತ್ರಿಗಳೊಂದಿಗೆ ಜಗಳವಾಡಿ ಇಲ್ಲಿಗೆ ಅನುದಾನ ತಂದಿದ್ದೇನೆ. ನಾನು ಇದುವರೆಗೂ ಯಾವ ಗುತ್ತಿಗೆದಾರನಿಂದ ಒಂದು ರೂ.ಪಡೆದಿಲ್ಲ. ಅವರ ಮುಖವನ್ನು ಕೂಡ ನೋಡಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದರು.

ಅನುದಾನ ತಂದಿರುವ ಬಗ್ಗೆ ಪ್ರಶ್ನಿಸುವಾಗ ಬಹಳ ಬುದ್ದಿವಂತಿಕೆಯಿಂದ ಕೇಳಿದ್ದಾರೆ. 2019, 2020, 2021ರ ಅನುದಾನ ಕೇಳಿದ್ದಾರೆ. ಆದರೆ, ಆ ವರ್ಷದಲ್ಲಿ ಕೇಂದ್ರದಿಂದ ಎಂ.ಪಿ ಗಳಿಗೆ ನಿಧಿಯನ್ನು ಕೊಟ್ಟಿಲ್ಲ. ಆ ವರ್ಷ ನಿಧಿಯನ್ನು ಕೊರೋನಕ್ಕೆ ಬಳಕೆ ಮಾಡಲಾಗಿತ್ತು. ಈ ಬಗ್ಗೆ ಆರ್ ಟಿಐನಲ್ಲಿ ಕೇಳಲಾಗಿದ್ದು, ಇದರ ಹಿಂದಿರುವ ಉದ್ದೇಶ ಕೆಟ್ಟದಿದೆ. ಇದನ್ನು ಯಾರು ಮಾಡಿದ್ದಾರೆ ಅವರು ಮುಂದೆ ಅನುಭವಿಸುತ್ತಾರೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News