ದ.ಕ.ದಲ್ಲಿ 2,38,352 ‘ಗೃಹಲಕ್ಷ್ಮಿ’ಯರಿಗೆ 47,67,04,000 ರೂ. ಪಾವತಿ

Update: 2023-08-31 19:26 GMT

ಮಂಗಳೂರು, ಆ. 30:  ದ.ಕ. ಜಿಲ್ಲಾ ಮಟ್ಟದ ‘ಗೃಹಲಕ್ಷ್ಮಿ’ ಯೋಜನೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬುಧವಾರ ಚಾಲನೆ ನೀಡಲಾಯಿತು. 

ದ.ಕ. ಜಿಲ್ಲೆಯಲ್ಲಿ ಈವರೆಗೆ 3,15,726 ಮಂದಿ ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದು, ಬುಧವಾರ 2,38,352 ಫಲಾನುಭವಿಗಳಿಗೆ 47,67,04,000 ರೂ. ಪಾವತಿಯಾಗಿದೆ. ಉಳಿದ 77374 ಫಲಾನುಭವಿಗಳ ಮಾಹಿತಿ ಸೇವಾಸಿಂಧುವಿನಲ್ಲಿ ಅಪ್ಲೋಡ್ ಆಗಬೇಕಾಗಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ,  ʼʼರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಗ್ಯಾರಂಟಿ ಯೋಜನೆಗಳಿಂದ ದೈನಂದಿನ ಜನಜೀವನ ಉತ್ಕೃಷ್ಟವಾಗಲಿದೆ ʼʼ ಎಂದು ಅಭಿಪ್ರಾಯಿಸಿದರು. 

ʼʼಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಸರಕಾರ ಅನುಷ್ಠಾನಗೊಳಿಸುವ ಮೂಲಕ ನುಡಿದಂತೆ ನಡೆವ ಸರಕಾರ ಎಂಬುದನ್ನು ಸಾಬೀತುಪಡಿಸಿದೆ. ಗ್ಯಾರಂಟಿ ಯೋಜನೆಗಳು ಜಾರಿಯಿಂದ ಸರಕಾರಕ್ಕೆ ಆರ್ಥಿಕ ನಷ್ಟವಾಗಲಿದೆ ಎಂಬ ಟೀಕೆಗಳು ಸಾಮಾನ್ಯವಾಗಿದೆ. ಆದರೆ ಈಗಾಗಲೇ ಬೆಲೆ ಏರಿಕೆ, ತೆರಿಗೆ ಹೆಚ್ಚಳದಿಂದ ತತ್ತರವಾಗಿರುವ ಜನರಿಗೆ ಸಿಗುವ ಈ ಗ್ಯಾರಂಟಿ ಯೋಜನೆಯ ಹಣವು ಕೈಯಿಂದ ಕೈಗಳಿಗೆ ಬದಲಾವಣೆಯಾಗುತ್ತಾ ಸಾಗಿದಾಗ ಆರ್ಥಿಕ ಸದೃಢತೆಗೆ ಕಾರಣವಾಗಲಿದೆʼʼ ಎಂದರು.

ʼʼಇದು ಚುನಾವಣೆ ಅಥವಾ ಮತಗಳಿಸುವ ಉದ್ದೇಶದಿಂದ ಜಾರಿಯಾಗಿರುವ ಗ್ಯಾರಂಟಿಗಳಲ್ಲ. ಸಹೋದರಿಯರು ಸಶಕ್ತರಾಗಬೇಕು. ತಲೆ ಎತ್ತಿ ಬದುಕಬೇಕು ಎಂಬ ನಿಟ್ಟಿನಲ್ಲಿ ಕಾಂಗ್ರೆಸ್ನ ದೂರದೃಷ್ಟಿಯ ಯೋಜನೆʼʼ ಎಂದವರು ಹೇಳಿದರು.

ಮೈಸೂರಿನಲ್ಲಿ ರಾಜ್ಯ ಮಟ್ಟದಲ್ಲಿ ಯೋಜನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಎಚ್.ಸಿ. ಮಹದೇವಪ್ಪ, ಸಚಿವರಾದ ಭೈರತಿ ಸುರೇಶ್, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಇತರ ಸಚಿವರು, ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಚಾಲನೆ ನೀಡಿದ್ದು, ಕಾರ್ಯಕ್ರಮದ ನೇರ ಪ್ರಸಾರವನ್ನು ಬೃಹತ್ ಪರದೆಯ ಮೂಲಕ ಜಿಲ್ಲಾ ಮಟ್ಟದಲ್ಲಿಯೂ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.

ಜಿಲ್ಲೆಯ ವಿವಿಧ ಕಡೆಗಳಿಂದ ಅಪಾರ ಸಂಖ್ಯೆಯಲ್ಲಿ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ʼಜಿಲ್ಲೆಯಲ್ಲಿ 296 ಪ್ರದೇಶಗಳಲ್ಲಿ ವೀಕ್ಷಣೆಗೆ ಅವಕಾಶʼ

ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ದ.ಕ. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು, ಗ್ರಾ.ಪಂ.ಗಳು ಸೇರಿದಂತೆ 296 ಕಡೆಗಳಲ್ಲಿ ವೀಕ್ಷಣೆಯ ಸೌಲಭ್ಯವನ್ನು ಮಾಡಲಾಗಿದೆ ಎಂದು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ್ ಹೇಳಿದರು.

ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News