ಮೂಡುಬಿದಿರೆ: ಅಕ್ರಮ ದನಸಾಗಾಟದ ಆರೋಪದಲ್ಲಿ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ; ಇಬ್ಬರಿಗೆ ಗಂಭೀರ ಗಾಯ

ಸಾಂದರ್ಭಿಕ ಚಿತ್ರ
►"ದಾಖಲೆ ಪತ್ರಗಳಿದ್ದರೂ ಹಲ್ಲೆ ನಡೆಸಿದ ಬಜರಂಗದಳ ಕಾರ್ಯಕರ್ತರು"
ಮೂಡುಬಿದಿರೆ: ಅಕ್ರಮ ದನಸಾಗಾಟದ ಆರೋಪದಲ್ಲಿ ಬಜರಂಗದಳ ಕಾರ್ಯಕರ್ತರು ಇಬ್ಬರಿಗೆ ಗಂಭೀರ ಹಲ್ಲೆ ನಡೆಸಿರುವ ಘಟನೆ ಮೂಡುಬಿದಿರೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳುವಾಯಿಯಲ್ಲಿ ನಡೆದಿದೆ.
ಮೂಡುಬಿದಿರೆ ಮೂಲದ ಅಬ್ದುಲ್ ರಹಿಮಾನ್ ಮತ್ತು ಕೂಸಪ್ಪ ಪೂಜಾರಿ ಗಂಭೀರವಾಗಿ ಹಲ್ಲೆಗೀಡಾದವರು ಎಂದು ತಿಳಿದು ಬಂದಿದೆ. ಅವರನ್ನು ಮೂಡುಬಿದಿರೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಅಬ್ದುಲ್ ರಹಿಮಾನ್ ಮತ್ತು ಕೂಸಪ್ಪ ಅವರು ಹೈಬ್ರೀಡ್ ಹಸುವನ್ನು ಕೃತಕ ಗರ್ಭಧಾರಣೆಗೆಂದು ವಾಹನವೊಂದರಲ್ಲಿ ಕಾರ್ಕಳದ ತಮ್ಮ ಪರಿಚಯದವರ ಮನೆಯಿಂದ ಮೂಡುಬಿದಿರೆಗೆ ತರುವಾಗ ಬೆಳುವಾಯಿ ಎಂಬಲ್ಲಿ ವಾಹನಕ್ಕೆ ಅಡ್ಡಗಟ್ಟಿದ ಬಜರಂಗದಳದ ಕಾರ್ಯಕರ್ತರು ಗಂಭೀರ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕಾನೂನು ಪ್ರಕಾರ ದಾಖಲೆ ಪತ್ರಗಳನ್ನು ಇಟ್ಟುಕೊಂಡು ಹಸು ಸಾಗಾಟ ಮಾಡುತ್ತಿರುವುದಾಗಿ ಹೇಳಿದರೂ, ಹಬ್ಬಕ್ಕೆ ಕಡಿಯಲು ಕೊಂಡುಹೋಗುತ್ತಿರುವುದಾಗಿ ಹೇಳಿ ಬಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತರು ದೂರಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತರು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.