ಬಂಟ್ವಾಳ | ಮರಳು ಅಕ್ರಮ ಸಾಗಾಟ: 8 ಮಂದಿ ವಶಕ್ಕೆ, 2 ಟಿಪ್ಪರ್ ಮತ್ತು ಮರಳು ಜಪ್ತಿ

Update: 2024-02-13 07:34 GMT

ಬಂಟ್ವಾಳ, ಫೆ.13: ಪರವಾನಿಗೆ ಇಲ್ಲದೇ ಆಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಎಂಟು ಮಂದಿಯನ್ನು ವಶಕ್ಕೆ ಪಡೆದಿರುವ ಬಂಟ್ವಾಳ ನಗರ ಠಾಣೆ ಪೊಲೀಸರು ಎರಡು ಟಿಪ್ಪರ್ ಲಾರಿ ಮತ್ತು ಮರಳನ್ನು ಜಪ್ತಿ ಮಾಡಿರುವುದು ವರದಿಯಾಗಿದೆ.

ಲಾರಿಗಳ ಚಾಲಕರಾದ ಸರ್ಫರಾಝ್ ಅಹ್ಮದ್, ಕಿರಣ್, ಮುಹಮ್ಮದ್ ಇಸ್ಮಾಯಿಲ್ ಹಾಗೂ ಮಾಲಕರಾದ ಅಬ್ದುಲ್ ಅಝೀಝ್, ಅವಿಲ್ ಕ್ರಾಸ್ತಾ, ಮುಹಮ್ಮದ್ ಆರಿಫ್ ಟಿಪ್ಪರ್ ಗಳಿಗೆ ಮರಳು ಸರಬರಾಜು ಮಾಡಿದ ಆರೋಪಿಗಳಾದ ವಳಚ್ಚಿಲ್ ನ ಸತ್ತಾರ್ ಮತ್ತು ಅಝರುದ್ದೀನ್ ಎಂಬವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ಟಿಪ್ಪರ್ ಲಾರಿಗಳ ಅಂದಾಜು ಮೌಲ್ಯ ಸುಮಾರು ತಲಾ 10 ಲಕ್ಷ ರೂ. ಹಾಗೂ ಸುಮಾರು 3,500 ರೂ. ಮೌಲ್ಯದ ತಲಾ 3 ಯುನಿಟ್ ಮರಳನ್ನು ಹಾಗೂ ಇನ್ನೊಂದು ಟಿಪ್ಪರ್ ಲಾರಿಯ ಅಂದಾಜು ಮೌಲ್ಯ ಸುಮಾರು ತಲಾ 4 ಲಕ್ಷ ರೂ. ಹಾಗೂ ಸುಮಾರು 3,500 ರೂ. ಮೌಲ್ಯದ ಮರಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸೋಮವಾರ ರಾತ್ರಿ ತಲಪಾಡಿ ಕಡೆಯಿಂದ ಬರುತ್ತಿದ್ದ ಮೂರು ಟಿಪ್ಪರ್ ಲಾರಿಗಳನ್ನು ಪೊಲೀಸರು ತಡೆದು ನಿಲ್ಲಿಸಿ ಚಾಲಕರನ್ನು ವಿಚಾರಿಸಿದಾಗ ಯಾವುದೇ ಪರವಾನಿಗೆ ಇಲ್ಲದೇ ವಳಚ್ಚಿಲ ಎಂಬಲ್ಲಿಂದ ಅಕ್ರಮವಾಗಿ ಮರಳು ತುಂಬಿಸಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಮರಳನ್ನು ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಆಧಾರದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ರಾಮಕೃಷ್ಣ ಹಾಗೂ ಸಿಬ್ಬಂದಿ ಉಮೇಶ, ಗೋಪಾಲ ಈ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News