ಚೆಂಬುಗುಡ್ಡೆ: ನಿರ್ಮಾಣಗೊಂಡ ಟ್ಯಾಂಕ್‌ಗೆ ಪ್ರಾಯೋಗಿಕ ನೀರು ಹರಿಸುವ ಕಾರ್ಯಕ್ಕೆ ಚಾಲನೆ

Update: 2024-09-07 18:05 GMT

ಉಳ್ಳಾಲ: ಕುಡಿಯುವ ನೀರಿನ ಯೋಜನೆಯ ಒಂದು ಹಂತದ ಕೆಲಸ ಪೂರ್ಣಗೊಂಡಿದ್ದು, ನೀರಿ ಹರಿಸುವ ಮೂಲಕ ಪ್ರಾಯೋಗಿಕ ಚಾಲನೆ ನೀಡಲಾಯಿತು.

ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಅಲಾಡಿ ನೇತ್ರಾವತಿ ನದಿಗೆ ಜಾಕ್‌ವೆಲ್ ನಿರ್ಮಿಸಿ ಅಲ್ಲಿಂದ ನೀರನ್ನು 15.5 ಕಿ. ಮೀ. ದೂರದ ಕೊಣಾಜೆ ಪಜೀರ್ ನಲ್ಲಿರುವ ಟ್ರೇಟ್‌ಮೆಂಟ್ ಪ್ಲಾಂಟ್‌ಗೆ ಕೊಳವೆ ಮೂಲಕ ಹರಿಸಿ, ಟ್ರೇಟ್‌ಮೆಂಟ್ ಪ್ಲಾಂಟ್‌ ನಲ್ಲಿ ನೀರನ್ನು ಶುದ್ಧೀಕರಿಸಿದ ಬಳಿಕ ಪೈಪ್ ಲೈನ್ ಮೂಲಕ ಉಳ್ಳಾಲ ನಗರಸಭೆ ವ್ಯಾಪ್ತಿಯ ಚೆಂಬು ಗುಡ್ಡೆಯಲ್ಲಿರುವ ನೀರಿನ ಟ್ಯಾಂಕ್ ಗೆ ಸರಬರಾಜು ಆಗಲಿದೆ ಎಂದು ಸ್ಪೀಕರ್ ಯು.ಟಿ ಖಾದರ್ ಹೇಳಿದರು.

ಉಳ್ಳಾಲ ನಗರಸಭೆ, ಸೋಮೇಶ್ವರ ಪುರಸಭೆ, ಕೋಟೆಕಾರು ಪಟ್ಟಣ ಪಂಚಾಯತ್ ಸಹಿತ ತಾಲೂಕು ವ್ಯಾಪ್ತಿಗೆ ಬರುವ 24 ಹಳ್ಳಿಗಳಿಗೆ, ಕೈಗಾರಿಕೆ ವಲಯ, ಶಿಕ್ಷಣ ಸಂಸ್ಥೆಗಳಿಗೆ 198 ಕೋ. ರೂ. ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಯಡಿ ಚೆಂಬುಗುಡ್ಡೆ ಬಳಿ ನಿರ್ಮಿಸಲಾಗಿರುವ ಟ್ಯಾಂಕ್‌ಗೆ ಪ್ರಾಯೋಗಿಕ ನೀರು ಹರಿಸುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಈಗಾಗಲೇ ಗ್ರಾಮಾಂತರ ಹಾಗೂ ನಗರ ಪ್ರದೇಶಗಳಿಗೆ ನೀರು ಸರಬರಾಜು ಆಗುತ್ತಿದೆ. ನಗರಸಭೆಗೆ 70 ಕೋ. ರೂ., ಸೋಮೇಶ್ವರ ಪುರಸಭೆಗೆ 55.6 ಕೋ.ರೂ, ಕೋಟೆಕಾರು ಪಟ್ಟಣ ಪಂಚಾಯತ್‌ಗೆ 37 ಕೋಟಿ ರೂ. ಬಿಡುಗಡೆಯಾಗಿದ್ದು ಮುಂದಿನ ಆರು ತಿಂಗಳ ಒಳಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಪೂರ್ಣಗೊಳ್ಳಲಿದೆ. ಸೋಮೇಶ್ವರ ಸಹಿತ ಉಳಿದ ಟ್ಯಾಂಕ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ ಅಧಿಕೃತವಾಗಿ ಉದ್ಘಾಟನೆ ಮಾಡಲಿದ್ದಾರೆ ಎಂದು ಯುಟಿ ಖಾದರ್‌ ತಿಳಿಸಿದರು.

ಈಗಾಗಲೇ 70 ಲಕ್ಷ ಲೀಟರ್ ನ ಟ್ಯಾಂಕ್ ನಿರ್ಮಾಣ ಆಗಿದ್ದು, ಇದರ ನೀರು ನಗರಸಭಾ ವ್ಯಾಪ್ತಿಯ ಎಲ್ಲಾ ಪ್ರದೇಶಗಳಿಗೆ ವಿಸ್ತರಣೆ ಆಗಲಿದೆ. ಈ ನೀರನ್ನು ಲ್ಯಾಬ್ ನಲ್ಲಿ ಪರಿಶೀಲನೆ ಕೂಡ ನಡೆಯಲಿದೆ. ಈವರೆಗೆ ಎಡಿಬಿ ಯೋಜನೆ ಮೂಲಕ ನೀರು ಸರಬರಾಜು ವ್ಯವಸ್ಥೆ ಮಾಡಲಾಗಿತ್ತು. ಇದಕ್ಕಾಗಿ 2001ರಲ್ಲಿ ಪೈಪ್ ಲೈನ್ ಕಾಮಗಾರಿ ಮಾಡಲಾಗಿತ್ತು. ಈ ಸಂದರ್ಭ ಉಳ್ಳಾಲ ಅಷ್ಟೊಂದು ಅಭಿವೃದ್ಧಿ ಆಗಿರಲಿಲ್ಲ. ಈಗ ಮನೆಗಳ ಸಂಖ್ಯೆ ಜಾಸ್ತಿ ಆಗಿರುವ ಕಾರಣ ಪೈಪ್ ಲೈನ್ ಕಾಮಗಾರಿ ವಿಸ್ತರಣೆ ಮಾಡಲಾಗಿದೆ ಎಂದರು.

ಕೋಟೆಕಾರ್ ಮತ್ತು ಸೋಮೇಶ್ವರಕ್ಕೆ ಟ್ಯಾಂಕ್ ಹಾಗೂ ಪೈಪ್ ಲೈನ್ ಕಾಮಗಾರಿಗೆ 134 ಕೋಟಿ ರೂ. ಮೀಸಲಿಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಜಲಜೀವನ್ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಪ್ರತಿ ಗ್ರಾಮದಲ್ಲೂ ಮಿನಿ ಟ್ಯಾಂಕ್ ಹಾಗೂ ಪೈಪ್ ಲೈನ್ ಕಾಮಗಾರಿ ಈಗಾಗಲೇ ಮಾಡುತ್ತಿದ್ದೇವೆ. ಈ ಟ್ಯಾಂಕ್ ಗಳಿಗೆ ಬರುವ ನೀರನ್ನು ಜಲ ಜೀವನ್ ಮಿಷನ್ ಮೂಲಕ ಮನೆಗೆ ಒದಗಿಸಲಾಗುವುದು. ನೀರಿನ ಸಂಪರ್ಕ ಪಡೆದ ಪ್ರತಿ ಮನೆಗೆ ಮೀಟರ್ ಅಳವಡಿಸ ಲಾಗುವುದು ಎಂದು ಹೇಳಿದರು.

ಮುಡಿಪುವಿನಿಂದ ಚೆಂಬುಗುಡ್ಡೆ ವರೆಗೆ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಂಡಿದೆ. ಇನ್ನು ತೊಕ್ಕೊಟ್ಟುವಿನಿಂದ ಚೆಂಬುಗುಡ್ಡೆ ವರೆಗೆ 25 ಕೋಟಿ ರೂ. ಅನುದಾನದಲ್ಲಿ ರಸ್ತೆ ಕಾಮಗಾರಿ ಆರಂಭ ಆಗಲಿದೆ. ತೊಕ್ಕೊಟ್ಟುವಿನಿಂದ ಶಾಸಕರ ಕಚೇರಿ ವರೆಗೆ ಆರು ರಸ್ತೆ ನಿರ್ಮಾಣ ಆಗಲಿದೆ. ಶಾಪಿಂಗ್ ಹೋಗುವವರಿಗೆ ಪ್ರತ್ಯೇಕ ಸರ್ವಿಸ್ ರಸ್ತೆ ನಿರ್ಮಾಣ ಆಗಲಿದೆ. ಈ ಬಗ್ಗೆ ತೊಕ್ಕೊಟ್ಟುವಿನ ವರ್ತಕರ ಜೊತೆ ಸಭೆ ನಡೆಸಿ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.

ವಿದ್ಯುತ್ ಸಮಸ್ಯೆಗೆ ಸಂಬಂಧಿಸಿದಂತೆ ಕೋಟೆಕಾರ್ ಬಳಿ ಸಬ್ ಡಿವಿಜನ್ ಕಾಮಗಾರಿ ಆರಂಭ ಆಗಿದೆ. ವಿದ್ಯುತ್ ಕಾವೂರಿನಿಂದ ಕೊಣಾಜೆಗೆ ನೇರ ಸರಬರಾಜು ಆಗುತ್ತಿದೆ. ಕೊಣಾಜೆಯಿಂದ ಉಳ್ಳಾಲಕ್ಕೆ ಸರಬರಾಜು ಆಗುತ್ತಿದೆ. ಕೊಣಾಜೆಯಲ್ಲಿ ಈಗಾಗಲೇ ಸಬ್ ಡಿವಿಜನ್ ಆಗಿದೆ. ಇದರಿಂದ ವಿದ್ಯುತ್ ಸಮಸ್ಯೆ ಬಂದರೆ ಸಮಸ್ಯೆ ಇರುವಲ್ಲಿ ಮಾತ್ರ ಆಫ್ ಮಾಡಿ ಕಾಮಗಾರಿ ಮಾಡಲು ಸಾಧ್ಯ ಆಗುತ್ತದೆ. ಉಳ್ಳಾಲಕ್ಕೆ ವಿದ್ಯುತ್ ಕೊರತೆ ಆಗಬಾರದು ಎಂಬ ಕಾರಣದಿಂದ ಜಪ್ಪಿನಮೊಗರುವಿನಿಂದ ಅಂಡರ್ ಗ್ರೌಂಡ್ ಕೇಬಲ್ ಕಾಮಗಾರಿ ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭ ನಗರ ಸಭೆ ಪೌರಾಯುಕ್ತ ಮತಡಿ, ಅಧ್ಯಕ್ಷ ಶಶಿಕಲಾ, ಉಪಾಧ್ಯಕ್ಷ ಸಪ್ನಾ ಹರೀಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಬೋಳಿಯಾರ್, ಮನ್ಸೂರ್ , ಮೊಹಮ್ಮದ್ ಮುಕ್ಕಚೇರಿ, ನಗರ ಸಭೆ ಕಿರಿಯ ಅಭಿಯಂತರ ತುಳಸಿ ದಾಸ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News