ಮಂಗಳೂರು | ನಿವೃತ್ತ ಸರಕಾರಿ ನೌಕರರಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

Update: 2024-10-01 09:35 GMT

ಮಂಗಳೂರು : ಸರಕಾರಿ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ನೌಕರರಿಗೆ 7ನೆ ವೇತನ ಆಯೋಗದಡಿ ನಿವೃತ್ತಿ ಆರ್ಥಿಕ ಸೌಲಭ್ಯ ನೀಡುವಂತೆ ಒತ್ತಾಯಿಸಿ ರಾಜ್ಯಾದ್ಯಂತ ನೀಡಲಾಗಿದ್ದ ಪ್ರತಿಭಟನಾ ಕರೆಯ ಮೇರೆಗೆ ನಿವೃತ್ತ ನೌಕರರು ಮಂಗಳವಾರ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.

2022ರ ಜುಲೈ 1ರಿಂದ 2024ರ ಜುಲೈ 31ರವರೆಗಿನ ಅವಧಿಯಲ್ಲಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಡಿ.ಸಿ.ಆರ್.ಜಿ, ಕಮ್ಯೂಟೇಶನ್, ಗಳಿಕೆ ರಜೆ ನಗದೀಕರಣದ ಮೊತ್ತವನ್ನು ಏಳನೇ ವೇತನ ಆಯೋಗದ ಲೆಕ್ಕಚಾರದಲ್ಲಿ ನೀಡಬೇಕು ಹಾಗೂ ಪರಿಷ್ಕೃತ ಆದೇಶ ನೀಡಬೇಕು ಎಂದು ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ದ.ಕ. ಜಿಲ್ಲಾ ಪ್ರಧಾನ ಸಂಚಾಲಕ ಸಿರಿಲ್ ರಾಬರ್ಟ್ ಡಿಸೋಜ ಮಾತನಾಡಿ, ʼಹಿರಿಯ ನಾಗರಿಕರ ದಿನಾಚರಣೆಯ ದಿನದಂದು ನಿವೃತ್ತ ಸರಕಾರಿ ನೌಕರರು ಪ್ರತಿಭಟನೆಗೆ ಇಳಿಸುವುದು ಸರಿಯಲ್ಲ. ಸಾಲ ನಾವೇನೂ ಕೇಳುತ್ತಿಲ್ಲ. ದುಡಿದಿರುವುದಕ್ಕೆ ನ್ಯಾಯ ಕೇಳುತ್ತಿದ್ದೇವೆʼ ಎಂದರು.

ʼಈಗಾಗಲೇ ನಮ್ಮ ಬೇಡಿಕೆಗಳನ್ನು ತಹಸೀಲ್ದಾರ್ ಮೂಲಕ ಆರ್ಥಿಕ ಇಲಾಖೆಯವರೆಗೂ ಗಮನ ಸೆಳೆಯುವ ಕೆಲಸ ಮಾಡಿದ್ದೇವೆ. ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯ ವ್ಯಾಪಿ ಇಂದು ಹಿರಿಯ ನಿವೃತ್ತ ನೌಕರರು ಬೀದಿಗೆ ಇಳಿದು ಪ್ರತಿಭಟನೆ ನಡೆಸುವ ಸ್ಥಿತಿ ನಿರ್ಮಾಣವಾಗಿದ್ದು, ನಮಗೆ ನ್ಯಾಯ ದೊರೆಯಬೇಕುʼ ಎಂದರು.

ಜಿಲ್ಲಾ ಸಂಚಾಲಕ ಸ್ಟ್ಯಾನಿ ತಾವ್ರೋ ಮಾತನಾಡಿ, ʼನಿವೃತ್ತ ಸರಕಾರಿ ನೌಕರರ ಬೀದಿಗೆ ಇಳಿದು ಪ್ರತಿಭಟನೆ ಮಾಡುವಂತದ್ದು ವಿಷಾದನೀಯ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ಕೊಡಬೇಕುʼ ಎಂದರು.

ನಿವೃತ್ತ ಹಿರಿಯ ಸರಕಾರಿ ನೌಕರ ವಿಠಲ ಶೆಟ್ಟಿಗಾರ್ ಮಾತನಾಡಿ, ʼನಾನು ನಿವೃತ್ತನಾಗಿ ಬಹಳ ವರ್ಷಗಳು ಆಗಿದೆ. ಆದರೆ ನಿವೃತ್ತ ಸರಕಾರಿ ನೌಕರರಿಗೆ ಅನ್ಯಾಯವಾಗುತ್ತಿರುವುದನ್ನು ನೋಡಿ ಸುಮ್ಮನೆ ಇರಲು ಸಾಧ್ಯವಾಗದೇ ಪ್ರತಿಭಟನೆಗೆ ಬಂದಿದ್ದೇನೆʼ ಎಂದರು.

ಜಿಲ್ಲಾ ಸಂಚಾಲಕ ನಾರಾಯಣ ಪೂಜಾರಿ ಮಾತನಾಡಿ, ʼಹಕ್ಕಿನಲ್ಲಿ ಇರುವ ಸವಲತ್ತನ್ನು ನ್ಯಾಯಯುತವಾಗಿ ನೀಡಿ ಎನ್ನುವುದು ನಮ್ಮ ಮನವಿ. ಸರಕಾರದ ಯೋಜನೆಗಳನ್ನು ಜಾರಿಗೊಳಿಸುವ ಬಹಳಷ್ಟು ಕೆಲಸಗಳಲ್ಲಿ ನಮ್ಮ ಪಾತ್ರವಿದೆ. ಆದರೆ ನಮ್ಮನ್ನು ಕಡೆಗಣಿಸುವುದು ಸರಿಯಲ್ಲ. ಸಮಸ್ಯೆಗೆ ಪರಿಹಾರ ನೀಡಲು ತಕ್ಷಣವೇ ಆದೇಶ ಮಾಡಬೇಕುʼ ಎಂದರು.

ಸಂಚಾಲಕರಾದ ಮಂಜುಳಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಟನೆಯ ಬಳಿಕ ಸಂಚಾಲಕರು ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಹಿರಿಯ ಸರಕಾರಿ ನೌಕರರಾದ ವಿಜಯ ಪೈ, ಮೋಹನ ಬಂಗೇರ, ಎನ್. ಆನಂದ ನಾಯ್ಕ್, ಹೇಮನಾಥ, ಜೆರಾಲ್ಡ್, ಭಾರತಿ ಪಿ.ವಿ. ಮೊದಲಾದವರು ಉಪಸ್ಥಿತರಿದ್ದರು.


ರಾಜ್ಯವ್ಯಾಪಿ ಪ್ರತಿಭಟನೆ, ಉಪವಾಸ ಸತ್ಯಾಗ್ರಹ

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಿವೃತ್ತ ಸರಕಾರಿ ನೌಕರರ ಕಪ್ಪು ಪಟ್ಟಿ ಧರಿಸಿಕೊಂಡು ಪ್ರತಿಭಟನೆ ನಡೆಸುತ್ತಾರೆ. ಅ.2ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಿವೃತ್ತ ಸರಕಾರಿ ನೌಕರರು ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದಾರೆ. ಮುಂದೆ ಬೆಳಗಾವಿಯಿಂದ ಬೆಂಗಳೂರು ವಿಧಾನಸೌಧದ ವರೆಗೆ ಪಾದಯಾತ್ರೆ ಹಾಗೂ ಇಲ್ಲೂ ಸರಕಾರ ಸರಿಯಾದ ಕ್ರಮ ಜರುಗಿಸದೇ ಹೋದಲ್ಲಿ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದು ಜಿಲ್ಲಾ ಪ್ರಧಾನ ಸಂಚಾಲಕ ಸಿರಿಲ್ ರಾಬರ್ಟ್ ಡಿಸೋಜ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News