‘ಮಂಗಳೂರು ದಸರಾ’ ಮೆರವಣಿಗೆಯಲ್ಲಿ ದೈವಾರಾಧನೆ ಟ್ಯಾಬ್ಲೋ, ನಾಸಿಕ್ ಬ್ಯಾಂಡ್ ಗೆ ಅವಕಾಶವಿಲ್ಲ

Update: 2023-10-13 06:51 GMT

ಮಂಗಳೂರು: ದಸರಾ ಮಹೋತ್ಸವದ ಮೆರವಣಿಗೆಯಲ್ಲಿ ದೈವಾರಾಧನೆ ಟ್ಯಾಬ್ಲೋ , ನಾಸಿಕ್ ಬ್ಯಾಂಡ್ ಗೆ ಅವಕಾಶ ನೀಡುವುದಿಲ್ಲ . ಈ ನೆಲದ ಸಂಸ್ಕೃತಿ, ಪರಂಪರೆ ಬಿಂಬಿಸುವ ಟ್ಯಾಬ್ಲೋಗಳಿಗೆ ಹೆಚ್ಚಿನ ಆದ್ಯತೆ ನೀಡಿ ದಸರಾ ವೈಭವ ಮತ್ತಷ್ಟು ಮೆರುಗುಗೊಳಿಸೋಣ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಧ್ಯಕ್ಷ ಹೆಚ್.ಎಸ್. ಸಾಯಿರಾಂ ಹೇಳಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆಯಲಿರುವ ಮಂಗಳೂರು ದಸರಾ ಮಹೋತ್ಸವದ ಶೋಭಾಯಾತ್ರೆ ಹಿನ್ನಲೆಯಲ್ಲಿ ಗುರುವಾರ ಸಂಜೆ ಕ್ಷೇತ್ರದ ಸಭಾಂಗಣದಲ್ಲಿ ಟ್ಯಾಬ್ಲೋ ತಂಡಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅ.23ರಂದು ವೈಭವದ ಶೋಭಾಯಾತ್ರೆ ನಡೆಯಲಿದ್ದು, ದಸರಾ ಮಹೋತ್ಸವ, ಶೋಭಾಯಾತ್ರೆ ಯಶಸ್ವಿಗೊಳಿಸುವುದು ನಮ್ಮ ಜವಾಬ್ದಾರಿಯಾಗಿದೆ. ದಸರಾ ಮೆರವಣಿಗೆಯೂ ಸುಸಾಂಗವಾಗಿ ನಡೆಸುವ ದೃಷ್ಟಿಯಿಂದ ದೇವಸ್ಥಾನದ ಆಡಳಿತ ಮಂಡಳಿ ಕೆಲವೊಂದು ಮಾರ್ಗಸೂಚಿಗಳನ್ನು ಹಾಕಿದ್ದು, ಅದನ್ನು ಎಲ್ಲ ಸಂಘಟಕರು ಪಾಲಿಸಬೇಕು ಎಂದರು.

ಮಂಗಳೂರು ನಗರ ಕೇಂದ್ರ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತ ಮಹೇಶ್ ಮಾತನಾಡಿ, ಮಂಗಳೂರು ದಸರಾ ಜನರಿಂದಲೇ ನಡೆಯುತ್ತಿರುವ ಮಹಾ ಉತ್ಸವವಾಗಿದೆ. ವಿಶ್ವವಿಖ್ಯಾತ ಈ ದಸರಾ ಯಶಸ್ವಿಗೊಳಿಸಲು ಆಡಳಿತ ಮಂಡಳಿ, ಜಿಲ್ಲಾಡಳಿತ ಜತೆ ಎಲ್ಲರೂ ಕೈಜೋಡಿಸಬೇಕು ಎಂದರು.

ಕುದ್ರೋಳಿ ಕ್ಷೇತ್ರದ ಕೋಶಾಕಾರಿ ಪದ್ಮರಾಜ್ ಆರ್. ಮಾತನಾಡಿ, ನಮ್ಮ ಸಂಸ್ಕೃತಿಗೆ ಮಾರಕವಾಗಿರುವ ಡಿಜೆಯನ್ನು ಆದಷ್ಟು ದೂರವಿಡೋಣ. ಮುಂದಿನ ವರ್ಷದಿಂದ ಖಡಾಖಂಡಿತವಾಗಿ ಡಿಜೆಗೆ ಅವಕಾಶವಿಲ್ಲ. ಈ ನೆಲದ ವೈವಿಧ್ಯತೆಯನ್ನು ತಿಳಿಯಪಡಿಸುವ ಕೆಲಸ ದಸರಾ ಶೋಭಾಯಾತ್ರೆಯಲ್ಲಿ ಮೂಡಿಬರಲಿ ಎಂದರು.

ದೇವಸ್ಥಾನದ ಟ್ರಸ್ಟಿ ರವಿಶಂಕರ್ ಮಿಜಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಿವೃದ್ಧಿ ಸಮಿತಿ ಸದಸ್ಯ ಹರಿಕೃಷ್ಣ ಬಂಟ್ವಾಳ ಶೋಭಾಯಾತ್ರೆಯ ಬಗ್ಗೆ ಸಲಹೆ, ಸೂಚನೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ನಗರ ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿ, ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಟ್ರಸ್ಟಿಗಳಾದ ಶೇಖರ್ ಪೂಜಾರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷರಾದ ಬಿ.ಜಿ. ಸುವರ್ಣ, ಸದಸ್ಯರಾದ ರಾಧಾಕೃಷ್ಣ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News